Monday, December 9, 2019

ರಣಹದ್ದುಗಳು



ಒಂದು ನಿಸ್ತೇಜ ಮಬ್ಬು
ಮುಂಜಾವಿನ ಹನಿಮಳೆಯಲ್ಲಿ
ಬೆಳಗಿನ ದೂತರ ಕಲಾಪವನ್ನು
ಲೆಕ್ಕಿಸದೇ ಎತ್ತರದಲ್ಲಿ
ಸತ್ತ ಮರವೊಂದರ ಒಡಕು
ಮೂಳೆಯ ಮೇಲೆ
ಜಜ್ಜಿಹೋದಂತಿರುವ, ನಿಬಿಡ ಗರಿಗಳ
ರಾಶಿಯೊಳಗಿಂದ ಮೇಲೆದ್ದ,
ಕಾಂಡವೊಂದರ ಮೇಲಿಟ್ಟ ಉರುಟುಕಲ್ಲಿನ ಹಾಗಿನ
ತನ್ನ ನುಣುಪು ತಲೆಯನ್ನು
ಬಳಿಯಲ್ಲಿದ್ದ ಸಂಗಾತಿಗೆ ಆನಿಸಿ
ಕೂತ ರಣಹದ್ದು.
ನಿನ್ನೆಯಷ್ಟೇ ಕಂದಕದ ಜವುಗಿನಲ್ಲಿ
ನೀರು ತುಂಬಿ ಉಬ್ಬಿದ ಹೆಣವೊಂದರ
ಕಣ್ಣುಗಳನ್ನು ಕುಕ್ಕಿ ಅದರ ಕರುಳನ್ನು ಬಗೆದು
ಹೊಟ್ಟೆ ಬಿರಿಯುವಷ್ಟು ಕಬಳಿಸಿ
ವಿರಮಿಸಿದ್ದವು. ಉಳಿದ
ಖಾಲಿ ಹಂದರವು ತಮ್ಮ ತಣ್ಣನೆಯ ದೂರದರ್ಶಿ
ನದರಿನೊಳಗೆ ಇರುವಂತ ತಾವಿನಲ್ಲಿ...

ವಿಚಿತ್ರವೆನಿಸುತ್ತದೆ. ಈ
ಪ್ರೀತಿಯೆಂಬುದಕ್ಕೆ ಖಯಾಲಿ ಜಾಸ್ತಿ.
ಅಂತದ್ದರಲ್ಲಿ ಹೇಗೆ
ಆ ರುದ್ರ ಮಸಣದೊಳಗೆ ನುಸುಳಿ
ಮೂಲೆಯೊಂದನ್ನು ಹಿಡಿದು
ಒಪ್ಪ ಮಾಡಿಕೊಂಡು ಮುರುಟಿಕೊಳ್ಳುತ್ತದೆ. ಬಹುಶಃ
ಅಲ್ಲಿಯೇ ನಿದ್ರಿಸಿಬಿಡುತ್ತದೆ ಮುಖವನ್ನು ಗೋಡೆಯತ್ತ ತಿರುಗಿಸಿ!
....ಹೀಗೆ ಬೆಲ್ಸನ್ ಕ್ಯಾಂಪಿನ ಕಮಾಂಡಂಟ್
ದಿನದ ಕೆಲಸ ಮುಗಿಸಿ ಮನೆಗೆ ಹೊರಟವನು
ಹಾದಿಬದಿಯ ಮಿಠಾಯಿ ಅಂಗಡಿ ಹೊಕ್ಕು
ಮನೆಯಲ್ಲಿ ಅಪ್ಪನ ಬರವನ್ನೇ ನೋಡುತ್ತಿರುವ
ಎಳೆಯ ಕಂದಮ್ಮನ ಸಲುವಾಗಿ
ಚಾಕಲೇಟ್ ಖರೀದಿಸುತ್ತಾನೆ.
ಅವನ ರೋಮಭರಿತ ಮೂಗಿಗೆ ಪಟ್ಟು ಹಿಡಿದವರಂತೆ
ಅಂಟಿಕೊಂಡ ಹೊಗೆ...ಸುಟ್ಟ
ಮನುಷ್ಯರ ಹೊಗೆ...

ನೀವು ಬಯಸಿದರೆ ಕೊಂಡಾಡಿ
ವಿಧಿಯ ಔದಾರ್ಯವನ್ನು.
ರಕ್ಕಸನೊಬ್ಬನಿಗೂ
ಪುಟ್ಟ ಮಿಂಚುಳವನ್ನು,
ಕ್ರೂರ ಹೃದಯದ ಹಿಮ ಕಮರಿಯೊಳಗೂ
ತೊಟ್ಟು ಕೋಮಲತೆಯನ್ನು
ಕರುಣಿಸಿತಲ್ಲ ಅದು ಎಂಬುದಕ್ಕಾಗಿ.
ಅಥವಾ ಹತಾಶರಾಗಿ.
ನಂಟುಳ್ಳ ಪ್ರೀತಿಯ
ಮೊಳಕೆಯಲ್ಲಿಯೇ ಖೂಳತನವನ್ನೂ ಇಟ್ಟು
ಅದಕ್ಕೆ ಸಾವಿಲ್ಲದಂತೆ ಮಾಡುತ್ತದೆಯಲ್ಲ ಅದಕ್ಕಾಗಿ.
[ಬೆಲ್ಸನ್ ಕ್ಯಾಂಪ್- ನಾಝಿ ಕಾನ್ಸನ್‌ಟ್ರೇಶನ್ ಕ್ಯಾಂಪ್]
 
ಮೂಲ: ಚಿನುವಾ ಅಚಿಬೆ
ಕನ್ನಡಕ್ಕೆ: ಪ್ರಜ್ಞಾ  



Wednesday, October 2, 2019

ಮಹಾತ್ಮರಿಗೆ ಸನಿಹವಾದ ಗಳಿಗೆ




ಮೂಲ: ಫಿರೋಜ್ ನವರೋಜಿ
ಕನ್ನಡಕ್ಕೆ: ಪ್ರಜ್ಞಾ 

ಬೆಟ್ಟದ ಸೀಮೆಯ ಚಳಿಗಾಲದ ಒಂದಿರುಳು.   ತಾತ್ಪೂರ್ತಿಕವಾಗಿ   ಸ್ಟೇಶನ್ನಿನ ಪ್ಲಾಟ್‌ಫಾರ್ಮ್ ಮಾಡಲಾಗಿದ್ದ ಸಣ್ಣ ಜಾಗವೊಂದರಲ್ಲಿ ಒಂದಿಷ್ಟು ಜನರ ಗುಂಪು. ದಟ್ಟ ಮಂಜು ಕವಿದಿತ್ತು. ಅದ್ಯಾವಾಗಲೋ ನಡುರಾತ್ರಿ ಕಳೆದಿತ್ತು. ರೈಲಿನ ಸದ್ದು. ನಿಧಾನವಾಗಿ ಇವರತ್ತ ಬರುತ್ತಿದ್ದ ರೈಲಿನೊಳಗೆ ಒಬ್ಬಾತ ಇನ್ನೂ ಓದುತ್ತಲೇ ಇದ್ದ. ಅದು ಪಶ್ಚಿಮ ರಿಫ್ಟ್ ನ ಲುಂಬ್ವಾ. ಲುಂಬ್ವಾ ಸಮೀಪಿಸುತ್ತಿದ್ದಂತೆಯೇ ರೈಲು ನಿಂತಿತ್ತು. ಅದು ಆ ರೈಲಿನ ನಿಗದಿತ ನಿಲ್ದಾಣವಲ್ಲ, ಆದರೂ ಆವತ್ತು ಅದು ಅಲ್ಲಿ ನಿಂತಿತ್ತು. ಪುಸ್ತಕ ಓದುತ್ತಿದ್ದ ಮನುಷ್ಯ ಎದ್ದು ಕಿಡಕಿಯನ್ನು ಸರಿಸಿ ಹೊರಗೆ ನೋಡಿದ್ದ.

ಆತನ ಹೆಸರು ಚಾರ್ಲಿ ಆಂಡ್ರ್ಯೂಸ್. 1904ರಲ್ಲಿ ರೆವರೆಂಡ್ ಚಾರ್ಲ್ಸ್ ಎಫ್ ಆಂಡ್ರ್ಯೂಸ್ ರವರು  ಭಾರತಕ್ಕೆ ಮಿಶನರಿಯಾಗಿ ಬಂದಿದ್ದವರು. ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಅವರು ಶಾಂತಿನಿಕೇತನಕ್ಕೆ ತೆರಳಿ ಅಲ್ಲಿ ರವೀಂದ್ರರೊಂದಿಗೆ ಸ್ವಲ್ಪ ಸಮಯವಿದ್ದರು. ಆಮೇಲೆ ಪ್ರೊಫೆಸರ್ ಗೋಖಲೆಯವರ ಕೋರಿಕೆಯಂತೆ ಗಾಂಧಿಯವರ ”ಸತ್ಯಾಗ್ರಹ’ ಹೇಗೆ ನಡೆಯುತ್ತಿದೆ ಎಂಬುದನ್ನು ನೋಡುವ ಉದ್ದೇಶದಿಂದ   ಅವರು ದಕ್ಷಿಣ ಆಫ್ರಿಕಾಕ್ಕೆ ಹೋದರು. ದಕ್ಷಿಣ ಆಫ್ರಿಕಾದಲ್ಲಿ ಮಹಾತ್ಮರು ನಡೆಸುತ್ತಿದ್ದ ಹೋರಾಟದಲ್ಲಿ ತಾವೂ ಜೊತೆಯಾದರು ಮತ್ತು ಆ ಒಡನಾಟದಲ್ಲಿ ಗಾಂಧಿಯವರೊಂದಿಗೆ ಆಂಡ್ರ್ಯೂಸ್ ಅವರ ಬಾಂಧವ್ಯವು ಗಟ್ಟಿಯಾಗಿ ಬೆಸೆಯಿತು. ಗಾಂಧಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿ ಅಲ್ಲಿ ಬ್ರಿಟೀಶರ ವಿರುದ್ಧದ ತಮ್ಮ ಹೋರಾಟವನ್ನು ಮುಂದುವರೆಸಿದರು ಮತ್ತು ಅವರೊಂದಿಗೆ ಆಂಡ್ರ್ಯೂಸ್ ರವರೂ ಜೊತೆಯಾದರು.

ಈಗ, ಅಂದರೆ 1920 ರಲ್ಲಿ ಗಾಂಧಿಯವರ  ಈ ವಿಶ್ವಾಸಪಾತ್ರ ಸ್ನೇಹಿತರು ಕೀನ್ಯಾದಲ್ಲಿದ್ದರು. ಇಲ್ಲಿಯ ಭಾರತೀಯರನ್ನು ಹೇಗೆ ನಡೆಸಿಕೊಳ್ಳಲಾಗುತ್ತಿದೆ ಎಂಬುದನ್ನು ವರದಿ ಮಾಡಲು ಅದಕ್ಕಿಂತ ಮುಖ್ಯವಾಗಿ ಬಿಳಿಯ ವಸಾಹತುಗಾರರು ಕೀನ್ಯಾದಲ್ಲಿ ತಮ್ಮ  ಸ್ವ-ಆಡಳಿತಕ್ಕಾಗಿ ಮತ್ತು ಜನಾಂಗೀಯ ಸಾರ್ವಭೌಮತ್ವವನ್ನು ಊರಲಿಕ್ಕಾಗಿ ನಡೆಸುತ್ತಿದ್ದ ತೀವ್ರ ರಾಜಕೀಯದಾಟಗಳನ್ನು ಗಮನಿಸುವುದಕ್ಕಾಗಿ ಗಾಂಧಿಯವರೇ ಅವರನ್ನು ಕೀನ್ಯಾಕ್ಕೆ ಕಳುಹಿಸಿ ಕೊಟ್ಟಿದ್ದರು.

ರೈಲು ನಿಲುಗಡೆಗೆ ಬರುತ್ತಿದ್ದಂತೆ ಅವರಿಗೆ  ರೈಲಿನ ಸರತಕ್ಕೆ ಒಂದಿಷ್ಟು ಲಾಟೀನುಗಳು ಕಂಡವು.  ನಿಲ್ಲುವ ಹೊತ್ತಿಗೆ ರೈಲಿನ ಲೋಹದ ಬ್ರೇಕುಗಳು ಮಾಡುತ್ತಿದ್ದ  ಸದ್ದಿನ ನಡುವೆ ಅವರಿಗೆ ಒಂದಿಷ್ಟು ದನಿಗಳು ಕೇಳಿಸಿದವು. ಕೆಲವರು ಅನ್ನುತ್ತಿದ್ದರು, ’ಇಲ್ಲಿ, ಇಲ್ಲಿ.’ ಇನ್ನೊಂದು ಬದಿಯಿಂದಲೂ ಮಂದ ಸ್ವರದಲ್ಲಿ ’ಇಲ್ಲಿ...ಇಲ್ಲಿ..’ ಎಂದದ್ದು ಕೇಳಿಸಿತು. ’ಅಲ್ಲ ಅಲ್ಲ....ಇಲ್ಲಿ...’ ಮತ್ತೆಲ್ಲಿಂದಲೋ ಕೇಳಿಸಿತ್ತು. ಕೆಲವರು ಹಳಿಗೆ ಹಾಸಲಾಗಿದ್ದ ಜಲ್ಲಿಕಲ್ಲಿನ ರಾಶಿಯಲ್ಲಿ ಕಾಲಿಟ್ಟು ಜಾರುತ್ತ ಹುಡುಕುತ್ತಿದ್ದರು. ಕಲ್ಲಿಗೋ ಮತ್ತೊಂದಕ್ಕೋ ಎಡವಿಕೊಳ್ಳುತ್ತ ಅವರೆಲ್ಲಿದ್ದಾರೆ ಎಂದು ಡಬ್ಬಿಯೊಳಗೆ ಇಣುಕತೊಡಗಿದ್ದರು. ತಾಯಂದಿರು ತಮ್ಮ ಮಕ್ಕಳನ್ನು ಕರೆಯುತ್ತಿದ್ದರು, ’ಎಯ್ ಎಲ್ಲಿಗೆ ಹೊರಟೆ? ಇಲ್ಲಿ ಬಾ, ನಿಂತುಕೋ ’ ಎಂದು. 

ಕೊನೆಗೂ ಒಂದು ಕಿಡಕಿಯೊಳಗೆ ಅವರು ಕಂಡರು. ಸರಸರನೆ ಆ ಬೋಗಿಯ ಕೆಳಗೆ ಅವರಿದ್ದ ಕಿಡಕಿಯ ಎದುರು ಲಾಟೀನುಗಳು ಜಮಾಯಿಸಿದವು. ಅದನ್ನು ನೋಡಿ ಅವರಿಗೆ ತಾವು ನೋಡಿದ ಒಂದು ಚಿಕ್ಕ ಊರಿನ  ದೀಪಾವಳಿಯ ಹಣತೆಗಳ ನೆನಪಾಯಿತು. ಸೀರೆಯುಟ್ಟು ಕೈಯಲ್ಲಿ  ಹೂಮಾಲೆ ಹಿಡಿದ ಮಹಿಳೆಯರೆಲ್ಲ  ಸಂಕೋಚದಿಂದ ಒಂದು ಮೂಲೆಗೆ ನಿಂತಿದ್ದರು. ಎಲ್ಲ ಒಂದೇ ಸಲ ಮಾತನಾಡಲು ಶುರು ಮಾಡಿದರು. ’ಮಿಸ್ಟರ್ ಆಂಡ್ರ್ಯೂಸ್, ಮಿಸ್ಟರ್ ಆಂಡ್ರ್ಯೂಸ್’ ಸಣ್ಣ ಹುಡುಗನೊಬ್ಬನ ದನಿ. ತಾಯಿಯೊಬ್ಬಳು ಮುಂದೆ ಬಂದು ’ನಮಸ್ತೆ’ ಎಂದಳು. ಆಂಡ್ರ್ಯೂಸ್ ವರು ಅವಳಿಗೆ ಕೈಮುಗಿದು ತಲೆ ಬಾಗಿಸಿದ್ದರು. ಶಾಲೆಯ ಸಮವಸ್ತ್ರದಲ್ಲಿದ್ದ ಸ್ವಲ್ಪ ದೊಡ್ಡ ವಯಸ್ಸಿನ ಹುಡುಗನೊಬ್ಬ ಕೈ ಮೇಲೆತ್ತಿ ಏನನ್ನೋ ಕೊಡುವವನಂತೆ ಅಲುಗಾಡಿಸುತ್ತಿದ್ದ. ಆಂಡ್ರ್ಯೂಸ್ ರವರು ಅದನ್ನು ಇಸಿದುಕೊಂಡು ತಮ್ಮ ಬೋಗಿಯೊಳಗಿನ ಬೆಳಕಿನಲ್ಲಿ ಹತ್ತಿರ ಹಿಡಿದು ನೋಡಿದರು. ಒಂದು ಶಿಲ್ಲಿಂಗಿನ ನಾಣ್ಯವಾಗಿತ್ತು. ನಂತರ  ಹೊರಗೆ ತಲೆ ಹಾಕಿ, “ಇದನ್ನು ಬಾಪೂಗೆ ಕೊಡುತ್ತೇನೆ. ಅವರಿದನ್ನು ಸರಿಯಾದ ಕೆಲಸಕ್ಕೆ ಬಳಸಿಕೊಳ್ಳುತ್ತಾರೆ, ಧನ್ಯವಾದ,” ಎಂದರು.

ಎಲ್ಲರಿಗೂ ಅವರೊಂದಿಗೆ ಮಾತನಾಡುವ ತವಕ. ಯಾರೋ ಒಬ್ಬರು ಸುಮ್ಮನಿರಿಸುವ ತನಕ ಅವರೆಲ್ಲ ಗೌಜಿ ಮಾಡುತ್ತಲೇ ಇದ್ದರು. ಶ್ರೀಯುತ ಬೇರಟ್ ರವರು ಕೆಮ್ಮಿ ಗಂಟಲು ಸರಿ ಮಾಡಿಕೊಂಡರು. ಕತ್ತಲಿನ ಮೌನದೊಳಗೆ ಅವರ ದನಿ ಅಗತ್ಯಕ್ಕಿಂತ ದೊಡ್ಡದಾಗಿ ಕೇಳಿಸಿತು. ಅವರು ಭಾಷಣದ ತಯಾರಿಯಲ್ಲಿದ್ದರು. ಶ್ರೀಯುತ ಬೇರಟ್ ರವರು ಕಿಸುಮು ಉಚ್ಚ ನ್ಯಾಯಾಲಯದ ಸೀನಿಯರ್ ಕ್ಲರ್ಕ್ ಆಗಿದ್ದರು. ಆ ದಿನ ಬೆಳಿಗ್ಗೆ ಅವರಿಗೆ ಕಾಂಗ್ರೆಸ್ಸಿನಿಂದ ನಿರ್ದಿಷ್ಟ ಸೂಚನೆಗಳು ಸಿಕ್ಕಿದ್ದವು. ಅದನ್ನು ಕೇಳಿ ತಕ್ಷಣ ಅವರು ಲುಂಬ್ವಾಗೆ ಧಾವಿಸಿ ಬಂದಿದ್ದರು. ದಾರಿಯಲ್ಲಿ ಅವರು ಉಚ್ಚ ನ್ಯಾಯಾಲಯದ  ಮುಖ್ಯ ನ್ಯಾಯಾಧೀಶರು ಹಿಂದೊಮ್ಮೆ ಕ್ರಿಮಿನಲ್ ಅಪೀಲ್ ಸೆಶನ್ಸ್ ಉದ್ಘಾಟಿಸುವಾಗ ಮಾಡಿದ ಭಾಷಣವನ್ನು ನೆನಪು ಮಾಡಿಕೊಳ್ಳುತ್ತ ಬಂದಿದ್ದರು. ಮುಖ್ಯ ನ್ಯಾಯಾಧೀಶರು ಏನೇನು ಹೇಳಿದ್ದರೋ ಅದನ್ನೆಲ್ಲ ಆದಷ್ಟರ ಮಟ್ಟಿಗೆ  ತಾನು ತನ್ನ ಭಾಷಣದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬೇರಟ್ ರವರು ಅಂದುಕೊಳ್ಳುತ್ತ ಬಂದಿದ್ದರು. ಆದರೆ ಸ್ಟೇಶನ್ ಮಾಸ್ಟರ್ ಇವರ ಕಿವಿಯಲ್ಲಿ ಉಸುರಿದ್ದರು, “ಬೇಗ ಮುಗಿಸಿ, ರೈಲು ಇಲ್ಲಿ ಜಾಸ್ತಿ ಹೊತ್ತು ನಿಲ್ಲುವುದಕ್ಕಾಗುವುದಿಲ್ಲ” ಎಂದು.  ಶ್ರೀಯುತ ಬೇರಟ್ ರವರು ಸ್ಟೇಶನ್ ಮಾಸ್ಟರ್ ಹೇಳಿದ್ದನ್ನು ಕೇಳಿಯೂ ಕೇಳದವರ ಹಾಗಿದ್ದರು. ಇವನು ಯಾರು ನನಗೆ ಹೇಳಲಿಕ್ಕೆ? ನಾನಾದರೋ  ಮುಖ್ಯ ನ್ಯಾಯಾಧೀಶರು ಮತ್ತು ಇತರ ಕಿರಿಯ ನ್ಯಾಯಾಧೀಶರುಗಳ ಜೊತೆ ದಿನಾ ಓಡಾಡಿಕೊಂಡು ಇರುವವನು, ಇವನಿಗೇನು ಗೊತ್ತು ಎಂಬಂತೆ ತಮ್ಮ ಭಾಷಣವನ್ನು ಪ್ರಾರಂಭಿಸಿಯೇ ಬಿಟ್ಟರು.

ಮಾನ್ಯ ರೆವರಂಡ್ ಆಂಡ್ರ್ಯೂಸ್ ರವರೇ, ಶಾಂತಿಯನ್ನು ಕೋರಿ ನಾವೆಲ್ಲ ಆ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ. ಸ್ವಾತಂತ್ರ್ಯಕ್ಕಾಗಿ ನೀವೆಲ್ಲ ಸೇರಿ ಹೋರಾಟ ನಡೆಸುತ್ತಿದ್ದೀರಿ, ಅದಕ್ಕಾಗಿ ನಿಮಗೂ ಆಭಾರಿಯಾಗಿದ್ದೇವೆ. ನಕುರುದಲ್ಲಿ ಕೆಲವರಿಂದ ನಿಮಗೆ ತೊಂದರೆಯಾಯಿತಂತೆ, ಆ ಕೆಟ್ಟ ಕೃತ್ಯವನ್ನು ನಾವು ಖಂಡಿಸುತ್ತೇವೆ. ಅದರ ನಂತರ ನಿಮಗೆ ಚಿಕಿತ್ಸೆ ಕೊಡಿಸಲಾಯಿತು ಎಂದು ಕೇಳಿದೆವು. ಅದೆಲ್ಲ ಆದರೂ ನೀವು ನಿಮ್ಮ ಉದ್ದೇಶದಿಂದ ಹಿಂದೆ ಸರಿದಿಲ್ಲ. ನಮಗೆಲ್ಲ ಸಹಾಯ ಮಾಡುತ್ತಿದ್ದೀರಿ. ನೀವು ತುಂಬಾ ಒಳ್ಳೆಯವರು. [ಗುಂಪಿನೊಳಗೆ ಸಮ್ಮತಿ ಸೂಚಕ ದನಿಗಳು ಕೇಳಿಬಂದವು] ನಮಗೆ ಗೊತ್ತು, ಮಹಾತ್ಮ ಗಾಂಧಿಯವರನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ನೀವು ಸಾಕಷ್ಟು ದೂಷಣೆಯನ್ನು ಹೊತ್ತಿದ್ದೀರಿ, ಹೊಡೆತ ತಿಂದಿದ್ದೀರಿ. ಗಾಡ್ ಸೇವ್ ದ ಕಿಂಗ್ ಎಂದು ಹೇಳಿ ತಮ್ಮ ಭಾಷಣವನ್ನು ಅರ್ಧದಲ್ಲೇ ನಿಲ್ಲಿಸಿಬಿಟ್ಟರು. “ನನ್ನ ಕಿರಿ ಮಗಳು ಈಗ ನಿಮಗೆ ಹೂಮಾಲೆಯನ್ನು ಅರ್ಪಿಸುತ್ತಾಳೆ” ಎಂದವರೆ ತಮ್ಮ ಪುಟ್ಟ ಮಗಳನ್ನು ಕಿಡಕಿಯ ಬಳಿ ಎತ್ತಿಹಿಡಿದರು.  ಆಗ ಅಲ್ಲಿದ್ದ ಹೆಂಗಸರೂ ತಮ್ಮ ಕೈಲಿದ್ದ ಮಾಲೆಯನ್ನು ಪುಟ್ಟ ಹುಡುಗಿಗೆ ಕೊಡತೊಡಗಿದರು. ಆ ಹುಡುಗಿ ಎಲ್ಲ ಮಾಲೆಗಳನ್ನೂ ಒಂದೊಂದಾಗಿ ಆಂಡ್ರ್ಯೂಸ್ ರವರಿಗೆ ರವಾನಿಸಿದಳು. ಹೂಮಾಲೆ ಯಾಕೆ ಹಾಕಲಾಗುತ್ತದೆ ಎಂಬುದರ ಅರಿವಿದ್ದ ಆಂಡ್ರ್ಯೂಸ್ ರವರು ಸ್ವಲ್ಪ ಭಾವುಕರೇ ಆದರು. ಧನ್ಯವಾದ ಧನ್ಯವಾದ ಎನ್ನುತ್ತ ಮಾಲೆಗಳನ್ನು ತಾವೇ ತಮ್ಮ ಕೊರಳಿಗೆ ಹಾಕಿಕೊಂಡರು. ಕೆಲವರು ಚಪ್ಪಾಳೆ ತಟ್ಟಿದರು.

ಇತ್ತ ಸ್ಟೇಶನ್ ಮಾಸ್ತರ್ ಅತ್ತಿಂದಿತ್ತ ಶತಪಥ ಮಾಡುತ್ತಿದ್ದ. ರೈಲು ಆವತ್ತು ಅಚಾನಕ್ಕಾಗಿ ಅಲ್ಲಿ ಯಾಕೆ ನಿಂತಿತು ಮತ್ತು ಯಾಕೆ ಅಷ್ಟು ಹೊತ್ತು ನಿಂತಿತು ಎಂಬುದಕ್ಕೆಲ್ಲ ಅವನು ತನ್ನ ಮೇಲಾಧಿಕಾರಿಗಳಿಗೆ ಸಮಜಾಯಿಶಿ ನೀಡಬೇಕಿತ್ತಲ್ಲ. ಹಾಗಾಗಿ ಆದಷ್ಟು ಬೇಗ ರೈಲು ಹೊರಟರೆ ಸಾಕು ಎಂದು ಅವನಿಗೆ ಅನಿಸುತ್ತಿತ್ತು. ಅದು ಪ್ಯಾಸೆಂಜರ್ ರೈಲು ಮತ್ತು ಅದು ಯಾವತ್ತೂ ಲುಂಬ್ವಾದಲ್ಲಿ ನಿಲ್ಲುತ್ತಿರಲಿಲ್ಲ. ಆದರೆ ಆವತ್ತು ಸಂಜೆ ನಕುರುದಲ್ಲಿನ ಸ್ಟೇಶನ್ ಮಾಸ್ಟರನಿಂದ ಅವನ ಸ್ಟೇಶನ್ನಿಗೊಂದು ಕರೆ ಬಂತು. ನಕುರು ಸ್ಟೇಶನ್ ಮಾಸ್ಟರ್ ಅವಸರ ಅವಸರವಾಗಿ ಪಂಜಾಬಿಯಲ್ಲಿ ಒಂದಿಷ್ಟು ಸೂಚನೆಗಳನ್ನು ಕೊಟ್ಟಿದ್ದ, ಅವನು ಹೇಳಿದ್ದು ಇವನಿಗೆ ಅಷ್ಟು ಸ್ಪಷ್ಟವಾಗಿರಲಿಲ್ಲ. ಅದು ಅಧಿಕೃತವಾದ ಹೊರಡಿಸಲ್ಪಟ್ಟ ಆದೇಶವಲ್ಲವಾದ್ದರಿಂದ ಅವನಿಗೆ ತಾನೇನು ಮಾಡಬೇಕೆಂಬುದು ಅರ್ಥವಾಯಿತು. ಆವತ್ತಿನ ರೈಲಿಗೆ ಬರುವ ಡ್ರೈವರ್ ಬಿಷನ್ ಸಿಂಗ್ ಬೇಡಿಗೂ ವಿಷಯ ಗೊತ್ತಿದೆ ಎಂಬುದು ತಿಳಿದುಬಂದಿದ್ದರಿಂದ ನಕುರುವಿನ ಸ್ಟೇಶನ್ ಮಾಸ್ಟರ್ ಹೇಳಿದ ಕೆಲಸಕ್ಕೆ ಲುಂಬ್ವಾದವನು ಒಪ್ಪಿಕೊಂಡ. ಆದರೆ ಎಲ್ಲವೂ ಬೇಗ ಬೇಗ ಮುಗಿದು ರೈಲು ಬೇಗನೇ ಅಲ್ಲಿಂದ ಹೊರಟರೆ ಮುಂದಿನ ಸಮಜಾಯಿಶಿಗೆ ಅನುಕೂಲವಾದೀತು ಎಂದಿತ್ತು ಅವನ ಮನಸ್ಸಿನಲ್ಲಿ.

ಎರಡು ದಿನಗಳ ಹಿಂದಷ್ಟೇ ಕೀನ್ಯಾದ ಭಾರತೀಯರಿಗೆಲ್ಲ ಒಂದು ಸುದ್ದಿ ಸಿಕ್ಕು ಅವರೆಲ್ಲ ದಿಗಿಲುಗೊಂಡಿದ್ದರು. ಮಹಾತ್ಮ ಗಾಂಧಿಯವರ ಪರಮಾಪ್ತರಾದ ರೆವರಂಡ್ ಆಂಡ್ರ್ಯೂಸ್ ರವರು ನಕುರುವಿಗೆ ಬಂದಿದ್ದರು. ಹಾಗೆ  ಬಂದಾಗ ಅವರನ್ನು ಕೆಲ ಬ್ರಿಟೀಶ್ ವಸಾಹತಿಗರು ರೈಲಿನಿಂದ ಹೊರಗೆಳೆದು ಹಲ್ಲೆ ಮಾಡಿದ್ದರು ಎಂಬ ಸುದ್ದಿಯು ಕೀನ್ಯಾದ ಭಾರತೀಯರನ್ನು ಘಾಸಿಗೊಳಿಸಿತ್ತು. ನಂತರ ಆಂಡ್ರ್ಯೂಸ್ ರವರನ್ನು ಆಸ್ಪತ್ರೆಗೆ ಕರೆದುಕಂಡು ಹೋಗಿ ಚಿಕಿತ್ಸೆ ನೀಡಲಾಗಿತ್ತು.
ಲಂಡನ್ನಿನಲ್ಲಿ ವಸಾಹತುಗಳ ವಿಭಾಗದ ಆಗಿನ ಸೆಕ್ರೆಟರಿ ಆಫ್ ಸ್ಟೇಟ್ ಆಗಿದ್ದ ವಿನ್ಸ್ಟನ್ ಚರ್ಚಿಲ್ ರವವರಿಗೆ ನಕುರುದಲ್ಲಾದ ದುರ್ಘಟನೆಯ ಸುದ್ದಿ ತಲುಪಿತು. ಅದನ್ನು ಕೇಳಿದ ಅವರು ಆ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕಿತ್ತು ಎಂದು ಹೇಳಿದ್ದರಂತೆ. ಚರ್ಚಿಲ್ ರವರ ಅಭಿಪ್ರಾಯದಿಂದ ಕೀನ್ಯಾದ ಭಾರತೀಯರಿಗೆ ಸ್ವಲ್ಪ ಸಮಾಧಾನವಾಗಿತ್ತು. ಆದರೆ ಆಂಡ್ರ್ಯೂಸ್ ರವರು ಆ ಪ್ರಸಂಗವನ್ನು ಬೆಳೆಸಲು ಇಚ್ಛಿಸಲಿಲ್ಲ. ಅದು ಗೊತ್ತಾದ ಮೇಲಂತೂ ಭಾರತೀಯ ಸಮುದಾಯಕ್ಕೆ ರೆವರಂಡ್ ರವರ ಮೇಲಿನ ಗೌರವ ಇಮ್ಮಡಿಯಾಯಿತು. ಇವರು ಖಂಡಿತ ಮಹಾತ್ಮರ ಪ್ರತಿನಿಧಿಯಾಗಲು ಯೋಗ್ಯರಿದ್ದಾರೆ ಎಂದು ಅವರೆಲ್ಲ ಮಾತಾಡಿಕೊಂಡರು.

ಆಂಡ್ರ್ಯೂಸ್ ರವರ ಮೇಲೆ ನಕುರುದಲ್ಲಾದ ಹಲ್ಲೆಯನ್ನು ಮಹಾತ್ಮರಿಗೆ ತೋರಿಸಿದ ಅಗೌರವ ಎಂದೇ ಕೀನ್ಯಾದ ಭಾರತೀಯ ಸಮುದಾಯವು ತೀರ್ಮಾನಿತು. ಎಲ್ಲರಿಗೂ ಸಿಟ್ಟು ಬಂದಿತ್ತು. ಪೂರ್ವ ಆಫ್ರಿಕಾ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಶಾಖೆಗಳಿದ್ದ  ನೈರೋಬಿ, ನೈವಾಶ, ನಕುರು, ಕಿಸುಮು ಮತ್ತಿತರ ಕೇಂದ್ರಗಳಲ್ಲಿ ಈ ಕುರಿತು ಭರದಿಂದ ಚರ್ಚೆಗಳಾದವು. ಬಿಳಿಯರ ಸರ್ವಾಧಿಕಾರವನ್ನು ತಾವು ಖಂಡಿಸುತ್ತೇವೆ ಎಂಬುದನ್ನು ಬಿಳಿಯರಿಗೆ ತೋರಿಸಿಕೊಡುವ ತುರ್ತು ಭಾರತೀಯ ಸಮುದಾಯಕ್ಕೆ ಬಂತು. ಅಲ್ಲದೇ ರೆವರಂಡ್ ಆಂಡ್ರ್ಯೂಸ್ ರವರು ವಸಾಹತಿನ ಭಾರತೀಯರ ಸಲುವಾಗಿ ಏನೆಲ್ಲ ಕೆಲಸ ಮಾಡುತ್ತಿದ್ದಾರೆ, ಅವರಿಗೆ ತಮ್ಮ ಬೆಂಬಲವಿದೆ, ತಾವು ಅವರಿಗೆ ಋಣಿಯಾಗಿದ್ದೇವೆ ಎಂದು ತೋರಿಸಬೇಡವೆ? ಎಲ್ಲ ಸೇರಿ ಒಂದು ತೀರ್ಮಾನಕ್ಕೆ ಬಂದರು.

ಆ ರಾತ್ರಿಯಂದು ಆ ರೈಲಿನ ಮೊದಲ ಅನಿಗದಿತ ನಿಲುಗಡೆಯು ಲುಂಬ್ವಾದಲ್ಲಾಯಿತು. ಆಂಡ್ರ್ಯೂಸ್ ರವರನ್ನು ಸ್ವಾಗತಿಸಿ ಸನ್ಮಾನಿಸಿದವರಲ್ಲಿ ಶ್ರೀಯುತ ಬೇರಟ್ ರವರ ಪಂಗಡದವರು ಮೊದಲಿಗರಾದರು. ನಂತರದ ನಿಲ್ದಾಣದಲ್ಲಿಯೂ ಲುಂಬ್ವಾದ್ದೇ ಸನ್ನಿವೇಶವು ಪುನರಾವರ್ತಿತಗೊಂಡಿತು. ಪಂಡಿತ ರಾವಲ್ ರವರು ಆಂಡ್ರ್ಯೂಸ್ ರವರಿಗಾಗಿ ಪ್ರಾರ್ಥಿಸಿದರು. ಮೂರು ಹುಡುಗಿಯರು ಸೇರಿ ಒಂದು ಭಜನೆಯನ್ನು ಹಾಡಿದರು. ಪಂಡಿತರು ಆಂಡ್ರ್ಯೂಸ್ ರವರಿಗೆ ಪ್ರಸಾದ ಕೊಟ್ಟರು. ಅದನ್ನು ಸ್ವೀಕರಿಸಿದ ರೆವರಂಡ್ ರವರು ತಮ್ಮ ಅರೆಮರ್ಧ ಹಿಂದಿಯಲ್ಲಿ ಧನ್ಯವಾದಗಳನ್ನು ಅರ್ಪಿಸಿದರು. ಅದನ್ನು ಕೇಳಿ ನೆರೆದವರ ಮುಖದಲ್ಲಿ ಹರ್ಷದ ಬೆಳಕು. ಅದು ಆ ಇರುಳಿನ ಕತ್ತಲನ್ನು ಬೆಳಗಿಸಿತ್ತು.

ರೈಲು ಕಿಬೋಸನ್ನು ತಲುಪಿದಾಗ ನಸುಕು ಹರಿದಿತ್ತು. ಅಲ್ಲಿ ಕಾಯುತ್ತಿದ್ದ ಸಿಖ್ ಸಭೆಯ ಅಧ್ಯಕ್ಷರು ಕೈಯಲ್ಲಿ ಖಡ್ಗ ಹಿಡಿದ ಸದೃಢಕಾಯರಾದ ನಾಲ್ಕು ಯುವಕರನ್ನು ತಮ್ಮ ರಕ್ಷಣೆಗೆಂದು ಇರಿಸುತ್ತೇನೆ, ಒಪ್ಪಿಕೊಳ್ಳಿ ಎಂದು ಆಂಡ್ರ್ಯೂಸ್ ರವರನ್ನು ಪ್ರಾರ್ಥಿಸಿಕೊಂಡರು.  ಆದರೆ ಆಂಡ್ರ್ಯೂಸ್ ರವರು ಅದನ್ನು ನಿರಾಕರಿಸಿದರು. ಮಹಾತ್ಮರು ನಕುರುವಿನಲ್ಲಿ ಆದಂತಹ ಘಟನೆಗೆ ಹಿಂಸಾತ್ಮಕ ಉತ್ತರವನ್ನು ಕೊಡಬಯಸುವುದಿಲ್ಲ. ಹಾಗಿದ್ದಮೇಲೆ ಯಾಕೆ ಎಂದು ಅವರು ನಿರಾಕರಿಸಿದರು.
ರೈಲು ಕಿಸುಮು ನಿಲ್ದಾಣವನ್ನು ಒಂದು ಗಂಟೆ ತಡವಾಗಿ ತಲುಪಿತು. ರೈಲು ತಡವಾಗಿದ್ದಕ್ಕೆ  ಫಸ್ಟ್ ಕ್ಲಾಸ್ ಬೋಗಿಯಲ್ಲಿದ್ದ ಯುರೋಪಿಯನ್ ಪ್ರಯಾಣಿಕರು ಕುಪಿತಗೊಂಡಿದ್ದರು. ರೈಲು ಬೇಕಾಬಿಟ್ಟಿ ನಿಲ್ಲಿಸಬಾರದ ಕಡೆಯೆಲ್ಲ ನಿಲ್ಲುತ್ತ ಬಂತು. ಕೆಟ್ಟ ಗದ್ದಲ, ಅನಾಗರಿಕ ಸಂಗೀತ, ಎಲ್ಲಕ್ಕಿಂತ ಹೆಚ್ಚಾಗಿ ಸಾರ್ವಜನಿಕವಾಗಿ ಹೇಗೆ ವರ್ತಿಸಬೇಕು ಎಂದು ಗೊತ್ತಿಲ್ಲದ ಕೊಳಕು ಜನರ ಬಗ್ಗೆ ಅವರಿಗೆ ಕಡಿಮೆಯೇ ಆಗದ ತಿರಸ್ಕಾರ  ಇವೇ ಸಂಗತಿಗಳು ಅವರು ಸಲ್ಲಿಸಿದ ದೂರಿನ ಪತ್ರದಲ್ಲಿ ತುಂಬಿಕೊಂಡಿದ್ದವು. ನೈರೋಬಿ ರೇಲ್ವೆ ನಿಲ್ದಾಣದ ಆಡಳಿತ ವರ್ಗಕ್ಕೆ ಯುರೋಪಿಯನ್ನರ ದೂರು ಪತ್ರದಿಂದ ಅಸಮಾಧಾನವಾಗಿತ್ತು. ಇನ್ನು, ನಿಜವೋ ಸುಳ್ಳೋ,  ತಮ್ಮ ಧಾರ್ಮಿಕ ಆಚರಣೆಗಳನ್ನು ಮಹಾತ್ಮರ ದೂತನ ಸಲುವಾಗಿ ಬೇಕಾಬಿಟ್ಟಿ ಬಳಸಿಕೊಳ್ಳಲು ಅವಕಾಶ ಮಾಡಿಕೊಟ್ಟು ರೇಲ್ವೆ ಅಧಿಕಾರಿಗಳು   ಅಕ್ರಮವೆಸಗಿದರು ಎಂದು ನೈರೋಬಿಯಲ್ಲಿದ್ದ ಭಾರತೀಯ ಧಾರ್ಮಿಕ ಸಂಸ್ಥೆಗಳಿಂದಲೂ  ದೂರು ಬರತೊಡಗಿದರೆ ಎಂಬ ಯೋಚನೆಯೂ ಅವರನ್ನು  ಚಿಂತೆಗೀಡುಮಾಡಿತ್ತು.

ಕಿಸುಮುವಿನಿಂದ ಹಿಂತಿರುಗುವಾಗ ಮತ್ತೆ ಆಂಡ್ರ್ಯೂಸ್ ರವರ ಮೇಲೆ ಹಲ್ಲೆ ನಡೆದರೆ ಅಥವಾ ಅದಕ್ಕೆ ಪ್ರತಿಯಾಗಿ ರೇಲ್ವೆ ಸಿಬ್ಬಂದಿಗಳು ಮತ್ತೆ ಅದೇ ರೀತಿ ರೈಲನ್ನು ಅನಧಿಕೃತವಾಗಿ ನಿಲ್ಲಿಸಿ ಮತ್ತೆ ಪ್ರಯಾಣಕ್ಕೆ ವಿಳಂಬ ಮಾಡಿದರೆ ಅದು ಎಷ್ಟೇ ಶಾಂತಿಯುತವಾಗಿ ನಡೆದರೂ ಅಪಾಯವೇ ಸರಿ, ಮತ್ತದೇ ಘಟನೆ ಮರುಕಳಿಸುವುದು ತಮಗೆ ವೃಥಾ ತಲೆನೋವು ಎಂದು ನೈರೋಬಿಯ ರೇಲ್ವೆ ಅಧಿಕಾರಿಗಳಿಗೆ ಅನಿಸಿತ್ತು. ಅದರಂತೆ ಪೊಲೀಸ್ ಕಮೀಶನರ್ ಅವರಿಗೊಂದು ಎಚ್ಚರಿಕೆಯ ಫೋನ್ ಕರೆ ಹೋಯಿತು. ಅದರ ನಂತರದ ವಾರದಲ್ಲಿ ಆಂಡ್ರ್ಯೂಸ್ ರವರು ನೈರೋಬಿಯಿಂದ ಮರಳಿ ಹೋಗುವಾಗ ರೈಲಿನಲ್ಲಿ ಅವರಿಗೆ ವಿಶೇಷ ರಕ್ಷಣಾ ವ್ಯವಸ್ಥೆಯನ್ನು ಒದಗಿಸಲಾಗಿತ್ತು.

ಆವತ್ತು ಲುಂಬ್ವಾದಲ್ಲಿ ರೈಲು ನಿಧಾನವಾಗಿ ನಿಲ್ದಾಣವನ್ನು ಬಿಟ್ಟು ಹೊರಟಿತ್ತು. ಗಾರ್ಡ್  ಇದ್ದ ಬೋಗಿಯ ಕೆಂಪು ದೀಪವು ಕಣ್ಣಿನಿಂದ ಮರೆಯಾಗಿ ಕೊನೆಗೆ ಕತ್ತಲಿನೊಳಗೆ ಒಂದಾಯಿತು. ನೆರೆದ ಗುಂಪು ಸಾವಕಾಶವಾಗಿ ಚದುರತೊಡಗಿತು. ಎಲ್ಲ ಒಬ್ಬೊಬ್ಬರೇ ಮರಳತೊಡಗಿದರು. ಮೆಲುದನಿಯ ಮಾತಿನೊಂದಿಗೆ. ಅವರಲ್ಲೊಬ್ಬ ಪಿಸುಗುಟ್ಟಿದ್ದ, “ನಿಮಗೆ ಗೊತ್ತೆ? ದಕ್ಷಿಣ ಆಫ್ರಿಕಾದಲ್ಲಿ ಗಾಂಧಿಯವರನ್ನು ಕೂಡ ಹೀಗೆಯೇ ರೈಲಿನಿಂದ ಹೊರದೂಡಲಾಗಿತ್ತು, ಅವರೂ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತ ಹೊಡೆತ ತಿಂದಿದ್ದರು. ಈಗ ಅವರ ಮಿತ್ರರಿಗೂ ಅದೇ ರೀತಿಯಾಗಿದೆ."  ಹಾಗೆ ಹೇಳಿದವನ ಸಹಚರ ಉತ್ತರಿಸಿದ್ದ, “ಇದೆಲ್ಲ ದೇವರೇ ಮಾಡಿಸಿದ್ದು."

ಆ ರಾತ್ರಿಯನ್ನು ಅವರೆಲ್ಲ ಮರೆಯಲೇ ಸಾಧ್ಯವಿರಲಿಲ್ಲ. ಆ ರಾತ್ರಿ ರೈಲಿನ ಸಂಚಾರವನ್ನು ವಿಳಂಬಗೊಳಿಸಿ ತಾವು ನಡೆಸಿದ ಅಸಹಕಾರದ ಸತ್ಯಾಗ್ರಹದಿಂದ ಬಿಳಿಯರಿಗೆ ಸಿಟ್ಟು ಬಂದಿದೆ ಮತ್ತು ತಮ್ಮ ಸತ್ಯಾಗ್ರಹ ಯಶಸ್ವಿಯಾಯಿತು ಎಂದು ಶ್ರೀಯುತ ಬೇರಟ್ ರವರು ಪೂರ್ವ ಆಫ್ರಿಕಾ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಕಾರ್ಯದರ್ಶಿಯಾಗಿದ್ದ ಎಮ್ ಎ ದೇಸಾಯಿ ಅವರಿಗೆ ಹೆಮ್ಮೆಯಿಂದ  ವರದಿ ಸಲ್ಲಿಸಿದರು. ಹಾಗಂತ, ರೆವರಂಡ್ ಆಂಡ್ರ್ಯೂಸ್ ರವರ ಮಾತುಗಳಿಂದ ಪ್ರಭಾವಿತರಾಗಿ ಅಥವಾ ಸ್ವಾತಂತ್ರ್ಯದ ಹೋರಾಟದಿಂದ ಪ್ರೇರಿತರಾಗಿ ತಾವು ಕೂಡಿಟ್ಟ ಅಲ್ಪಸ್ವಲ್ಪ ಹಣವನ್ನೇನೂ ಅವರು ಸ್ವಾತಂತ್ರ್ಯ ಹೋರಾಟದ ಸಲುವಾಗಿ ವಿನಿಯೋಗ ಮಾಡಲಿಲ್ಲ. ಮನೆಗಳಲ್ಲಿ ಮಕ್ಕಳು ತಮ್ಮ ತಾಯಂದಿರಿಗೆ ಆ ರಾತ್ರಿಯ ಕತೆ ಹೇಳು ಎಂದು ಪೀಡಿಸಿದವು.

ಅದಾಗಿ ವರ್ಷಗಳೇ ಉರುಳಿದವು. ಗಾಂಧಿಯವರನ್ನು ಹತ್ಯೆ ಮಾಡಲಾಯಿತು ಎಂಬ ಸುದ್ದಿ ಕೀನ್ಯಾವನ್ನು ತಲುಪಿದಾಗ ಅಲ್ಲಿನ ಜನ ಆವತ್ತಿನ ರಾತ್ರಿ ತಾವೂ ಹೇಗೆ ಆ ಚಳುವಳಿಯ ಒಂದು ಭಾಗವಾಗಿದ್ದೆವು ಮತ್ತು ಹೇಗೆ ತಾವು ಮಹಾತ್ಮರ ಸನಿಹಕ್ಕೆ ಹೋಗಿದ್ದೆವು  ಎಂಬುದನ್ನು ನೆನಪಿಸಿಕೊಂಡರು.

                 ****************************************************************

[ಫಿರೋಜ್ ನವರೋಜಿಯವರು ಕೀನ್ಯಾದಲ್ಲಿ ಹುಟ್ಟಿ ಬೆಳೆದು ಕೀನ್ಯಾದಲ್ಲಿಯೇ ವಾಸಿಸುತ್ತಿರುವ  ಲೇಖಕರು.  ವೃತ್ತಿಯಿಂದ ವಕೀಲರು ಮತ್ತು ಮಾನವ ಹಕ್ಕುಗಳ ಪರ ಇರುವ ಹೋರಾಟಗಾರರು. ಅವರ ಹಿರಿಯರು ಬಹಳ ಹಿಂದೆಯೇ ಕೀನ್ಯಾಕ್ಕೆ ವಲಸೆ ಬಂದ ಭಾರತೀಯರು. ಪ್ರಸ್ತುತ ಕತೆಯನ್ನು ಅವರ ’ದುಕ್ಕಾವಾಲಾ’ ಸಂಕಲನದಿಂದ ಆಯ್ದುಕೊಳ್ಳಲಾಗಿದೆ. ಇದು ಫಿರೋಜ್ ರವರು ತಮ್ಮ ಅನುಭವಗಳ ಸಂಚಿಯಿಂದ ಹೊರತೆಗೆದ ಒಂದು ಕತೆ. ದುಕ್ಕಾವಾಲಾಇಂಗ್ಲೀಶಿನಲ್ಲಿ ಪ್ರಕಟವಾಗಿದೆ  ಸಾಹಿತ್ಯಿಕವಾಗಿ ಈ ಕತೆಯು  ಅಷ್ಟೇನೂ ಗಾಢವಾಗಿ ಸೆಳೆಯುವಂಥದ್ದಲ್ಲ. ಸ್ವದೇಶದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಚಳುವಳಿ ಮತ್ತು ಗಾಂಧಿಯವರು ಆ ಹೊತ್ತಿಗೆ ನಡೆಸುತ್ತಿದ್ದ ಅಸಹಕಾರ ಆಂದೋಲನದ ಕಾವು ಕೀನ್ಯಾಕ್ಕೂ ಹರಡಿದ ಒಂದು ಸಂದರ್ಭವನ್ನು ಈ ಕತೆಯು ಹಿಡಿದಿಡುವುದರಿಂದ ಈ ಕತೆಯನ್ನು ಅನುವಾದಿಸಬೇಕೆಂದು ನನಗೆ ಅನಿಸಿತು,]


















Monday, November 19, 2018

ಸಂಗಮ್



ತಂಗಿ,                                                                                                                                


ನೀನಿಲ್ಲದ ನೈರೋಬಿಯಲ್ಲಿ ಕಾಲ ನಿಂತು ಹೋಗಿದೆಯೆನಿಸುತ್ತಿದೆ.   ಒಮ್ಮೊಮ್ಮೆ ದೂರದ ವೈಯ್ಯಾಕಿ ರಸ್ತೆಯಲ್ಲಿ ಓಡಾಡುವ ವಾಹನಗಳ ಸದ್ದನ್ನು ಆಲಿಸುತ್ತ ಬಾಲ್ಕನಿಯಲ್ಲಿ ನಿಲ್ಲುತ್ತೇನೆ. ಕಾಳು ತಿನ್ನಲು ಬರುವ ಹಕ್ಕಿಗಳ ಚಿಲಿಪಿಲಿ ಕೇಳಲು ಓಡಿ ಬರುತ್ತೇನೆ. ಆಲಿವ್ ಥ್ರಶ್ ಒಮ್ಮೊಮ್ಮೆ ಹಾಡುತ್ತವೆ. ಇತ್ತ ನಿನ್ನ ಕೋಣೆಯ ಹೊರಗಿನಿಂದ ಕಾಣುವ ಜಕರಾಂಡ ಮರವು ಬೀಸುವ ಗಾಳಿಯ ರಭಸಕ್ಕೆ ಸುಯ್ದಾಡುತ್ತಿರುತ್ತದೆ. ಬಿರು ಬಿಸಿಲಿನ ಮಧ್ಯಾಹ್ನದಲ್ಲಿ ಹಕ್ಕಿಗಳು ಒಂದೂ ಕಾಣುವುದಿಲ್ಲ.  ಜಗತ್ತು ಚಲಿಸುತ್ತಿದೆಯೆಂಬುದು ಭ್ರಾಂತಿಯೋ ಎಂಬಂತೆ ಬಾಲ್ಕನಿಯ ಹಕ್ಕಿಗಳು, ಅವುಗಳ ಚಿಲಿಪಿಲಿ, ವೈಯ್ಯಾಕಿ ರಸ್ತೆಯ ವಾಹನಗಳು, ಸುಯ್ಗುಡುವ ಗಾಳಿ, ಜಕರಾಂಡ ಮರ ಎಲ್ಲವೂ ಇದ್ದಕ್ಕಿದ್ದಂತೆ ಚೌಕಟ್ಟಿನ ಚಿತ್ರಗಳಾಗಿಬಿಡುತ್ತವೆ. ನೆಲ ಒರೆಸುತ್ತ ಕೋಣೆಯೊಳಗೆ ಬಂದ ಮೇರಿ ತನ್ನ ಗೆಳತಿಯ ತಂಗಿ  ಹದಿನಾರರ ಪೋರಿ ಪ್ಯೂರಿಟಿಗೆ ಹೆಣ್ಣು ಮಗುವಾಯಿತು ಎಂದು ಹಲ್ಲು ಕಿರಿಯುತ್ತಾಳೆ.  ’You know, her boy friend Ken ran away...' ಎನ್ನುತ್ತ ಬಾಯಿ ಕಳೆದವಳು ಅಲ್ಲೇ ಚಿತ್ರವಾಗುತ್ತಾಳೆ. ಚೌಕಟ್ಟಿನೊಳಗಿಂದ ಅವಳ ಅರೆ ತೆರೆದ ಬಾಯಿ ಕಾಣುತ್ತದೆ. ಅವಳ ಹಿಂದೆ ಕಾಳು ತಿನ್ನಲು ಬಗ್ಗಿದ ಥ್ರಶ್,  ವೈಯ್ಯಾಕಿ ರಸ್ತೆಯ ಮಟಾಟುಗಳು ಮತ್ತು ಎಲೆಯುದುರಿದ ಜಕರಾಂಡ ಮರ. ಇತ್ತ ಭುವಿಯೂ ಅಲ್ಲ ಅತ್ತ ನಭವೂ ಅಲ್ಲದ ಇರುಕಿನಲ್ಲಿ ಒಂದು ಹಣ್ಣೆಲೆ.

ಹೀಗಿರುತ್ತಲಿರುವಾಗ...

ಇಲ್ಲಿನ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಮೂರು ದಿನಗಳ ಇಸ್ರೇಲಿ ಚಿತ್ರೋತ್ಸವ ನಡೆಯುತ್ತಿದೆ. ಇವತ್ತು ’The Band's Visit' ಎನ್ನುವ ಸಿನೆಮಾವನ್ನು ನೋಡಿ ಬಂದೆ. ಒಬ್ಬಳೇ ಹೋಗಿದ್ದೆ.  ಈಜಿಪ್ತಿನ ಪೋಲೀಸ್ ಆರ್ಕೆಸ್ಟ್ರಾ ತಂಡವೊಂದು ಇಸ್ರೇಲಿಗೆ ಹೋಗಿ ತಾವು ತಲುಪಬೇಕಾಗಿದ್ದ  ಊರನ್ನಲ್ಲದೆ ಬೇರೆ ಯಾವುದೋ ಊರನ್ನು ತಲುಪಿ ಅಲ್ಲಿನ ಜನಜೀವನದೊಂದಿಗೆ ಮುಖಾಮುಖಿಯಾಗುವ ಕತೆ.  ದೇಶ-ಧರ್ಮ-ಸಂಸ್ಕೃತಿಗಳ ಎಲ್ಲೆಗಳಾಚೆ, ರಾಜಕೀಯ ಪ್ರೇರಿತ ರಕ್ತಪಾತದಾಚೆ  ಇರುವ ಸಾಮಾನ್ಯ ಮನುಷ್ಯರ  ಜಗತ್ತನ್ನು  ತಿಳಿ ಹಾಸ್ಯದ ಹಂದರದಲ್ಲಿ ಬಿಚ್ಚಿಡುವ ’The Band's Visit' ಸಿನೆಮಾ.  ಹಾಗಿದ್ದರೆ ಎಷ್ಟು ಚೆನ್ನ ಎನಿಸುವ ಜಗತ್ತು. ಇಸ್ರೇಲ್ ಮತ್ತು ಅರಬ್ ಸಮುದಾಯಗಳ ಸಂಘರ್ಷದ ಹಿನ್ನೆಲೆಯಲ್ಲಿ ಗ್ರಹಿಸುವುದಾದರೆ ಈ ಸಿನೆಮಾವು ವೈರುದ್ಧ್ಯಗಳ ನಡುವೆಯೂ ಮನುಷ್ಯ ಮನುಷ್ಯರ ನಡುವೆ ಸಾಮರಸ್ಯ ಸಾಧಿಸಬಲ್ಲ ಅಂಶಗಳನ್ನು ಶೋಧಿಸುತ್ತದೆ.  ಕೆಲವೊಮ್ಮೆ ಎಲ್ಲವನ್ನೂ ಸರಳೀಕರಿಸಿ ಸಮನ್ವಯಗೊಳಿಸಿಬಿಡುವ ನೋಟಗಳು ಪೂರ್ಣಸತ್ಯವನ್ನು ಹೇಳುತ್ತಿರುವುದಿಲ್ಲ ಎಂಬ ಒಂದು ಅಂಶವನ್ನೂ ಮನಸ್ಸಿನಲ್ಲಿ ಇಟ್ಟುಕೋ. 


ನಾನು ಸಮಯಕ್ಕಿಂತ ಸ್ವಲ್ಪ ಮುಂಚೆಯೇ ಹೋಗಿದ್ದರಿಂದ ನ್ಯಾಶನಲ್ ಮ್ಯೂಸಿಯಂನ ಹೊರಗೆ ಬೆಂಚಿನ ಮೇಲೆ ಕೂತಿದ್ದೆ.  ಸ್ವಲ್ಪ ಹೊತ್ತಿಗೆ ಕಛೇರಿಗೆ ಹೋಗುವವರು ಹಾಕಿಕೊಳ್ಳುವ ಒಂದು ಚರ್ಮದ ಚೀಲವನ್ನು ಮಣಿಕಟ್ಟಿಗೆ ನೇತು ಹಾಕಿಕೊಂಡಿದ್ದ ಒಬ್ಬಾತ ನಾನಿದ್ದ ಕಡೆ ಬಂದ. ಹಿಂದೆ  ದೂರದರ್ಶನದಲ್ಲಿ  ’ವ್ಯೋಮಕೇಶ ಭಕ್ಷಿ’  ಎಂಬ ಒಂದು ಧಾರಾವಾಹಿ ಬರುತ್ತಿತ್ತು. ಅದರಲ್ಲಿ ವ್ಯೋಮಕೇಶ ಭಕ್ಷಿಯ ಪಾತ್ರದಲ್ಲಿ ರಜಿತ್ ಕಪೂರ್ ಎನ್ನುವಾತ ನಟಿಸುತ್ತಿದ್ದ. ನಾನಿದ್ದಲ್ಲಿಗೆ ಬಂದವನು ಪಕ್ಕಾ ರಜಿತ್ ಕಪೂರನ ಹಾಗೆಯೇ ಕಾಣುತ್ತಿದ್ದ. ಅವನು ನನ್ನ ವರೆಗೆ ಬಂದವನು ಹಿಂದಿರುಗಿದ, ಮತ್ತೆ ಮರಳಿದ. ಸೀದಾ ನನ್ನ ಬಳಿ ಬಂದು ’ಚಿತ್ರೋತ್ಸವ ಎಲ್ಲಿ ನಡೆಯುತ್ತಿದೆ’ ಎಂದು ಕೇಳಿದ. ನಾನು ಎಲ್ಲಿ ಎಂದು ಹೇಳಿದೆ. ಅವನ ಕೈಗೆ ಜೋತು ಬಿದ್ದಿದ್ದ ಚೀಲವು ಬಾಯಿ ತೆರೆದುಕೊಂಡಿತ್ತು. ಅದರೊಳಗೆ ಎರಡು ನೀರಿನ ಬಾಟಲಿ ಒಂದಿಷ್ಟು ಕಡತಗಳಿದ್ದದ್ದು ಕಂಡಿತು. ಮತ್ತೆ ನೀವೂ ಅದಕ್ಕೇ ಬಂದಿದ್ದಾ ಎಂದು ಕೇಳಿದ. ಹೌದು ಎಂದೆ.   ನಿಮಗೆ ಇಸ್ರೇಲಿ ಸಿನೆಮಾ ಇಷ್ಟವಾ ಎಂದು ಕೇಳಿದ. ಇಲ್ಲಪ್ಪ, ಹೇಗಿರಬಹುದು ಅಂತ ನೋಡಲಿಕ್ಕೇ ಬಂದಿದ್ದು ಎಂದೆ.  ಅಂತರ್ಜಾಲದಲ್ಲಿ ಸಿನೆಮಗಳನ್ನು ನೋಡಬಹುದು ಗೊತ್ತಿಲ್ವಾ ಎಂದು ಕೇಳಿದ. ಗೊತ್ತಿದೆ. ಆದರೆ ಎಲ್ಲಾ ಸಿನೆಮಾಗಳೂ ಸಿಗೋದಿಲ್ಲ ಎಂದೆ. ಒಂದೆರಡು ವೆಬ್ ಸೈಟ್ ಹೆಸರು ಹೇಳಿದ. ನಾನು ಅಷ್ಟರವರೆಗೂ ಗಮನಿಸಿರಲಿಲ್ಲ. ಅವನು ತಾನು ಹಾಕಿದ್ದ ದೊಗಳೆ ದೊಗಳೆ  ಪ್ಯಾಂಟಿನ  ಝಿಪ್ ಹಾಕಿರಲಿಲ್ಲ.  ಮಧ್ಯ ವಯಸ್ಕ.  ಭಾರತೀಯ ಮೂಲದವನು.

ಅವನಿಗೆ ಮಾತಾಡುವ ಹುಕಿ. ಅಲ್ಲಿಯೇ ಕೂರಿ ಎಂದೆ, ಅವನು ಕೂರಲಿಲ್ಲ. ಜನ ಇದ್ದಾರಾ ಎಂದು ಕೇಳಿದ. ಅಷ್ಟೇನೂ ಕಾಣಲಿಲ್ಲ. ಇನ್ನೂ ಸಮಯವಿದೆಯಲ್ಲ ಎಂದೆ.  ’ಇಲ್ಲಿಯ ಜನಕ್ಕೆ ಇಂಥದ್ದರಲ್ಲಿ ಆಸಕ್ತಿ ಇಲ್ಲ. ನನಗೆ ಇವತ್ತಿನವರೆಗೂ ಅವರ ಜೊತೆ ಸಂಪೂರ್ಣವಾಗಿ ಬೆರೆಯಲು ಆಗುತ್ತಿಲ್ಲ. ನನಗೆ ವಿಜ್ಞಾನ, ತಂತ್ರಜ್ಞಾನಗಳ ಬಗೆಗೆ ತಿಳಿದುಕೊಳ್ಳುವುದೆಂದರೆ ಇಷ್ಟ. ಅವರೆಲ್ಲ ಸೇರಿದರೆ ರಾಜಕಾರಣದ ಮಾತು ಇಲ್ಲ ಎಂದರೆ ಒಂದಿಷ್ಟು ಕ್ರಿಶ್ಚಿಯನ್ ಸ್ಟಫ್ ಇರುತ್ತದೆ.  ನನ್ನಜ್ಜ  ಪೋರಬಂದರಿನಿಂದ ಇಲ್ಲಿಗೆ ಬಂದ. ಬಿಸಿನೆಸ್ ಆಗುತ್ತೆ, ದುಡ್ಡು ಮಾಡಬಹುದು ಅಂತ ಬಂದ. ಏನು ದುಡ್ಡು ಮಾಡುತ್ತಾರೆ? ಇಲ್ಲಿ ಜನಕ್ಕೆ ವ್ಯವಹಾರದ ಹಿಕ್ಮತ್ತೇ ಗೊತ್ತಿಲ್ಲ. ಇವರಿಗೆ ವೈಜ್ಞಾನಿಕವಾಗಿ ಮುಂದುವರೆಯುವುದೇ ಬೇಕಿಲ್ಲ. ಸ್ಪೇಸ್ ಸೈನ್ಸ್, ನ್ಯೂಕ್ಲಿಯರ್ ಸೈನ್ಸ್ ನಲ್ಲಿ ಏನು ಸಾಧಿಸಿದ್ದಾರೆ? ನನಗೆ ಅದೆಲ್ಲ ಇಷ್ಟ.  ಭಾರತದವರು ಮಂಗಳ ಗ್ರಹಕ್ಕೆ spacecraft ಕಳಿಸಿದರಲ್ಲ, (ಮಂಗಳಯಾನ, 2014) I was there. ಮೋದಿಗೆ ಕಣ್ಣಲ್ಲಿ ನೀರು ಬಂದಿತ್ತು.'  ಎನ್ನುತ್ತ ಪ್ಯಾಂಟಿನ ಝಿಪ್ ಮೇಲೇರಿಸಿಕೊಂಡ. ಮಂಗಳಯಾನದ ಪ್ರಾಜೆಕ್ಟ್ ನಲ್ಲಿ ಇವನೂ ಏನೋ ಇರಬಹುದು, ವಿಜ್ಞಾನಿ ಅಥವಾ ತಾಂತ್ರಿಕ ಸಲಹೆಗಾರರ ಥರದಲ್ಲಿ ಎಂದುಕೊಂಡೆ ಮನಸ್ಸಿನಲ್ಲೇ. ಆದರೆ ಈಗ ಇಲ್ಲೇಕೆ ಇದ್ದಾನೆ?   ಬಹುಶಃ ತಾನು ಅಲ್ಲಿದ್ದೆ ಅಂದರೆ ತಾನು ಭಾರತದಲ್ಲಿದ್ದೆ ಎಂಬ ಅರ್ಥದಲ್ಲಿ ಹೇಳಿದ್ದನೆ? ಬಗೆಹರಿಯಲಿಲ್ಲ. ತಾನು ಹಿಂದಿ ಸಿನೆಮಾ ನೋಡುವುದಿಲ್ಲ, ಹಾಲಿವುಡ್ ಸಿನೆಮಾಗಳನ್ನೂ ನೋಡುವುದಿಲ್ಲ. ತನಗೆ ವಿಜ್ಞಾನ, ತಂತ್ರಜ್ಞಾನದ ಬಗೆಗೆ ತಿಳಿದುಕೊಳ್ಳುವುದರಲ್ಲಿ ಆಸಕ್ತಿ ಎಂದ. ಹಾಗಿದ್ದರೆ ಇಲ್ಲಿ ಸಿನೆಮಾ ನೋಡುವುದಕ್ಕೆ ಯಾಕೆ ಬಂದಿದ್ದನೋ. ಅವನ ಮಾತು ಮತ್ತೆ ಸ್ಪೇಸ್ ಟೆಕ್ನಾಲಜಿಯತ್ತ ಹೊರಳಿತ್ತು. ’ಇಲ್ಲಿ ಎಷ್ಟೊಂದು ಭೂಮಿ ಇದೆ, ಸಂಪನ್ಮೂಲಗಳಿದ್ದಾವೆ. ಸರಿಯಾಗಿ ಬಳಸಿಕೊಳ್ಳಲು ಇಲ್ಲಿನವರಿಗೆ ಗೊತ್ತಿಲ್ಲ. ಇವರಿಗೆ ಅದೆಲ್ಲ ಬೇಡ, ಬರೀ ರಾಜಕಾರಣ’ ಎಂದ. 

’ಅದಕ್ಕೆಲ್ಲ ಸಮಯ ತೆಗೆದುಕೊಳ್ಳುತ್ತದೆ, ನಿಧಾನವಾಗಿ ಇಲ್ಲಿಯೂ ಎಲ್ಲ ಶುರುವಾಗುತ್ತದೆ ಬಿಡಿ. ಅದು ನಿಧಾನವಾದಷ್ಟೂ ಒಳ್ಳೆಯದೇ’ ಎಂದು ನಾನೆಂದೆ. ಅದು ಅಸಂಭವ ಎನ್ನುವ ರೀತಿಯಲ್ಲಿ ಕೈಯ್ಯಲ್ಲಾಡಿಸುತ್ತ  ನಕ್ಕು ಅಲ್ಲಿಂದ ಹೊರಟ. ಹೋಗುವಾಗ ನಾನು ಕುತೂಹಲ ತಡೆಯಲಾರದೇ ಕೇಳಿದೆ. ನೀವು ಸಂಶೋಧನೆಯಲ್ಲೇನಾದರೂ ತೊಡಗಿಕೊಂಡಿದ್ದೀರಾ ಎಂದು. ಇಲ್ಲ ಇಲ್ಲ ನಾನು ವಿಮಾ ಕಂಪೆನಿಯಲ್ಲಿದ್ದೇನೆ ಎಂದು ತನ್ನ ವಿಸಿಟಿಂಗ್ ಕಾರ್ಡ್ ಅನ್ನು ನನ್ನ ಕೈಗಿತ್ತು ಹೋದ. ನನಗೆ ಮನಸ್ಸಿನಲ್ಲಿಯೇ ನಗು. ನನಗೆ ಅಚ್ಚರಿಯಾಗಿದ್ದೇನೆಂದರೆ ಅವನು ಅಷ್ಟೆಲ್ಲ ಬಡಬಡಾಯಿಸಿದರೂ ಅವನು ಯಾವಾಗ ಹೋಗುತ್ತಾನಪ್ಪ ಎಂದು ನನಗೆ ಅನಿಸಿರಲಿಲ್ಲ.  ಬದಲಿಗೆ ಅವನ ಮಾತನ್ನು ಇನ್ನಷ್ಟು ಹೊತ್ತು ಕೇಳುತ್ತ ನಿಲ್ಲೋಣವೆನಿಸಿತ್ತು.


ಸ್ವಲ್ಪ ಹೊತ್ತಿಗೆ ನಾನೂ ಥಿಯೇಟರಿನೊಳಕ್ಕೆ ಹೋಗಿ ಕೂತೆ. ಅವನೆಲ್ಲಿದ್ದಾನೆ  ಎಂದು ಕಣ್ಣು ಹಾಯಿಸಿದೆ.  ಮುಂದುಗಡೆಯ ಸಾಲಿನಲ್ಲಿ  ಕೂತಿದ್ದವ ಕೈ ಅಲ್ಲಾಡಿಸಿದ. ಸಿನೆಮಾ ಶುರುವಾಗುವುದಕ್ಕೂ ಮುಂಚೆ ಸುಮಾರು ಬಾರಿ ಒಳಗೆ-ಹೊರಗೆ ಅಡ್ಡಾಡಿದ, ಸೆಲ್ ಫೋನಿನಿಂದ ಕೂತವರ ಫೋಟೋ ತೆಗೆದ. ಅಷ್ಟು ಹೊತ್ತಿಗೆ ಸುಮಾರು ಜನವಾಗಿದ್ದರು. ಐಷಾರಾಮಿ ಸಿನೆಮಾ ಮಂದಿರಗಳಲ್ಲಿ  ಹಿಂದಿ ಸಿನೆಮಾಗಳನ್ನು ನೋಡಲು ಹೋದರೆ ಎಣಿಸಿ ಎಣಿಸಿ ನಾಲ್ಕೈದು ಜನರನ್ನು ನೋಡಿ ನೋಡಿ ಬೇಸತ್ತ ನನಗೆ ಇವತ್ತು ಸಮಾಧಾನವಾಗಿತ್ತು. ಸಿನೆಮಾ ವೀಕ್ಷಣೆಯ ಅಸಲಿ ಮಜಾ ಇರುವುದೇ ತುಂಬಿದ ಸಿನೆಮಾ ಮಂದಿರಗಳಲ್ಲಿ ಕೂತು ವೀಕ್ಷಿಸುವದರಲ್ಲಿ. ನನ್ನ ಸಾಲಿನಲ್ಲಿ ನಾನೊಬ್ಬಳೇ ಕೂತಿದ್ದೆ. ಹಿಂದಿನಿಂದ ಹಾಯ್ ಎನ್ನುತ್ತ ಒಬ್ಬಳು ಬಂದು ನನ್ನ ಪಕ್ಕ ಕೂತಳು. ಮಾತಾಡುತ್ತ ಅವಳು ಇಥಿಯೋಪಿಯದವಳೆಂದು ಗೊತ್ತಾಯಿತು. ಕೂತ ಹತ್ತು ಹದಿನೈದು ನಿಮಿಷಕ್ಕೇ ಅವಳು ಯಾರದೋ ಫೋನ್ ಬಂತೆಂದು  ಹೋದಳು. ಸಿನೆಮಾ ಮುಗಿಯುವವರೆಗೆ ಪಕ್ಕದಲ್ಲಿ ಕೂರಬಾರದಿತ್ತೆ ಎಂದು ಮತ್ತೆ ಅಂದುಕೊಂಡೆ. 

15/11/2018

                                                      **                                                                               

ಇವತ್ತು Desperado Square ಎನ್ನುವ ಸಿನೆಮಾವನ್ನು ನೋಡಿ ಬಂದೆ. ಇಸ್ರೇಲಿನಲ್ಲಿ ನಮ್ಮ ಹಳೆಯ ಹಿಂದಿ ಸಿನೆಮಾಗಳು ಬಲು ಜನಪ್ರಿಯವಾಗಿದ್ದವು ಎಂದು ನನಗೆ ಈ ಸಿನೆಮಾ ನೋಡಿದ ಮೇಲೆ ಗೊತ್ತಾಯಿತು.  ಇಸ್ರೇಲಿನ ಪುಟ್ಟ ಪಟ್ಟಣವೊಂದರಲ್ಲಿ ಮುಚ್ಚಿ ಹೋಗಿದ್ದ ಸಿನೆಮಾ ಮಂದಿರವೊಂದನ್ನು ಮತ್ತೆ ಸಜ್ಜುಗೊಳಿಸಿ ಆರಂಭಿಸುವ ಕತೆ ಇರುವ Desperado Square  ನಲ್ಲಿ ಮೊದಲ ದಿನ ತೋರಿಸುವ ಸಿನೆಮಾ ಯಾವುದು ಗೊತ್ತಾ? ರಾಜ್ ಕಪೂರ್ ಅವರ ಸಂಗಮ್. ಅಯ್ಯೋ ರಾಜ್ ಕಪೂರ್ ಅಂತೆ, ಸಂಗಮ್ ಅಂತೆ...ಎಂದು ನೀನು ಅಣಕ ಮಾಡು ಅಡ್ಡಿಲ್ಲ.

ಸಿನೆಮಾ ಶುರುವಾಗಲು ಸಮಯವಿದ್ದದ್ದರಿಂದ  ಹೊರಗೆ ನಿಂತಿದ್ದೆ. ವ್ಯೋಮಕೇಶ ಭಕ್ಷಿ ಇವತ್ತೂ ಬಂದಿದ್ದ.  ನಿನ್ನೆ ಹೇಗಿತ್ತು ಎಂದು ಕೇಳಿದೆ. ' ಥೋ.  ಸರಿ ಇರಲಿಲ್ಲ. All Bums.  ಇಷ್ಟ ಆಗಲಿಲ್ಲ’  ಎನ್ನುತ್ತ ಆಚೆ ಹೋದ. ಅವನು ನಿನ್ನೆಯ ಅಷ್ಟೂ ಸಿನೆಮಾಗಳನ್ನು ನೋಡಿದ್ದ.  ಅವನು ಆಚೆ ಹೋದ ನಂತರ ಉದ್ದ ಸ್ಕರ್ಟ್ ಧರಿಸಿದ ಭಾರತೀಯ ಮೂಲದ ಮುದುಕಿಯೊಬ್ಬಳು ಆವತ್ತು ತೋರಿಸಿದ ಮೊದಲ ಸಿನೆಮಾ ಮುಗಿದ ಮೇಲೆ ಹೊರಗೆ ಬಂದಳು. ಅವಳನ್ನು ನಾನು ವೆಂಕಟೇಶ್ವರ ದೇವಸ್ಥಾನದಲ್ಲಿ ಒಮ್ಮೆ ನೋಡಿದ್ದೆ.  ಅವಳೂ ’ನಿನ್ನನ್ನು ಎಲ್ಲೋ ನೋಡಿದ್ದೇನೆ. ಪರಿಚಿತ ಮುಖ’ ಎನ್ನುತ್ತ ಬಂದು ಕೈಕುಲುಕಿದಳು. ಎರಡನೆಯದಕ್ಕೆ ನಿಲ್ಲದೆ ಮನೆಗೆ ಹೊರಟಿದ್ದಳು. ಯಾಕೆ ಎಂದು ಕೇಳಿದೆ. ಇಲ್ಲ ಮನೆ ದೂರದಲ್ಲಿದೆ, ಮಟಾಟುದಲ್ಲಿ ಬಂದೆ, ಮತ್ತೆ ಮಟಾಟುದಲ್ಲೇ ಹೋಗಬೇಕು.  ಒಬ್ಬಳೆ ಬಂದಿದ್ದೇನೆ, ಕತ್ತಲಾಯಿತಲ್ಲ ಎಂದಳು. ಎರಡನೆಯದು ನಿಮಗೆ ಇಷ್ಟವಾಗಬಹುದು. ರಾಜಕಪೂರ್ ಅವರ ಸಂಗಮ್ ಅನ್ನು ಇಸ್ರೇಲಿನ ಜನ ಎಷ್ಟು ಪ್ರೀತಿಸಿದ್ದರು ಎಂಬುದನ್ನು ನೋಡಬಹುದು ಇರಿ ಎಂದೆ. ಓಹೋ ಹೌದಾ! ಛೇ. ನೋಡಬೇಕಿತ್ತಲ್ಲಾ, ನಿಮ್ಮ ಮನೆ ಎಲ್ಲಿ ಎಂದು ನನ್ನನ್ನು ಕೇಳಿದಳು. ನಾನು ಊಬರ್ ನಲ್ಲಿ ಹೋಗುತ್ತೇನೆ ಎಂದು ತಿಳಿದ ಮೇಲೆ ನಾನು  ಮನೆಗೆ ಹೋಗುವ ದಾರಿಯಲ್ಲಿ  ಮಟಾಟು ಸಿಗುವ ಜಾಗವೊಂದಿದೆ, ತನ್ನನ್ನು ಅಲ್ಲಿ ಡ್ರಾಪ್ ಮಾಡಲು ಸಾಧ್ಯವೆ  ಎಂದು ಆಕೆ ಕೇಳಿದಳು. ನಾನು ನಿನಗೆ ಅಪರಿಚಿತೆ, ಹೀಗೆ ಕೇಳುತ್ತಿದ್ದೇನೆ ಎಂದು ಬೇಸರ ಮಾಡಿಕೊಳ್ಳಬೇಡ ಎಂದೂ ಸೇರಿಸಿದಳು. ಅಯ್ಯೋ ಅದಕ್ಕೇನಂತೆ ಖಂಡಿತ ಡ್ರಾಪ್ ಮಾಡುತ್ತೇನೆ, ನೀವು ನಿಶ್ಚಿಂತೆಯಿಂದ ಸಿನೆಮಾ ನೋಡಿ ಎಂದೆ. ಅವಳ ಮುಖ ಅರಳಿತ್ತು. ಇಂತಹ ಕಾರ್ಯಕ್ರಮಗಳಿಗೆ ತಾನು ಒಬ್ಬೊಬ್ಬಳೇ ಹೋಗುತ್ತೇನೆ. ಜೊತೆಗೆ ಬರಲು ಆಸಕ್ತಿ ಇರುವವರು ಇಲ್ಲ. ಇಲ್ಲಿ ಭಾರತೀಯರ ಹಲವಾರು ಸಮುದಾಯಗಳಿವೆ, ಅವರವರ ಸಂಘ ಸಂಸ್ಥೆಗಳಿವೆ. ಅಲ್ಲಿಗೆಲ್ಲ ಹೋಗುವುದಿಲ್ಲ ಅಂತಲ್ಲ, ಆದರೆ ಅಲ್ಲೆಲ್ಲ ಉಸಿರು ಕಟ್ಟುತ್ತಿರುತ್ತದೆ. I feel like... I am shrinking into something. ಇಲ್ಲಿ ಇಸ್ರೇಲ್,  ಈಜಿಪ್ಟ್, ಸೋಮಾಲಿಯ  ಮತ್ತು ಇನ್ಯಾವ ಬದಿಯವರು ಇದ್ದಾರೋ ಗೊತ್ತಿಲ್ಲ, ಇವರೆಲ್ಲರೊಂದಿಗೆ ನೋಡುವುದು ಖುಷಿ ಕೊಡುತ್ತದೆ. ಇವತ್ತು ನೀನು ಸಿಕ್ಕಿದ್ದು ಒಳ್ಳೆಯದಾಯಿತು, Thank you dear ಎಂದಳು. ನನ್ನ ಮನಸ್ಸಿನಲ್ಲಿರುವುದನ್ನೇ ನೀವು ಹೇಳುತ್ತಿದ್ದೀರಿ ಎಂದು ನಾನೆಂದೆ. ಅವಳೂ ಇಲ್ಲಿಯೇ ಹುಟ್ಟಿ ಬೆಳೆದವಳು. ವ್ಯೋಮಕೇಶ ಭಕ್ಷಿಯ ಅಜ್ಜನ ಹಾಗೆ ಅವಳ ಅಜ್ಜನೋ ಮತ್ತಜ್ಜನೋ ದುಡ್ಡು ಮಾಡಬಹುದು ಎಂದು ಇಲ್ಲಿಗೆ ಬಂದಿರಬೇಕು.

Deasparado Square ನಲ್ಲಿ ಅಪ್ಪ ಕನಸಿನಲ್ಲಿ ಬಂದು ಹೇಳಿದ ಎಂದು ಮಗನೊಬ್ಬ ಮುಚ್ಚಿ ಹೋಗಿದ್ದ ಸಿನೆಮಾ ಮಂದಿರವೊಂದನ್ನು ಮರಳಿ ಆರಂಭಿಸುತ್ತಾನೆ. ಅದು ಅವನ ಅಪ್ಪ ನಡೆಸುತ್ತಿದ್ದ ಸಿನೆಮಾ ಮಂದಿರವಾಗಿತ್ತು. ಮರಳಿ ಶುರು ಮಾಡಿದ ದಿನ ಪ್ರದರ್ಶನಗೊಂಡ ಸಿನೆಮಾ ರಾಜ್ ಕಪೂರ್ ಅವರ ಸಂಗಮ್. ಊರಿನ ಹಳೆಯ ತಲೆಮಾರಿಗೆಲ್ಲ ಹುಚ್ಚು ಹಿಡಿಸಿದ ಅದೇ ಸಿನೆಮಾವನ್ನೇ ಆ ದಿನ ತೋರಿಸಬೇಕೆಂದುಕೊಳ್ಳುವ ಮಗನಿಗೆ  ತನ್ನ ತಾಯಿ, ತನ್ನ ಅಪ್ಪ ಮತ್ತು ಚಿಕ್ಕಪ್ಪನಿಗೆ ಸಂಬಂಧಿಸಿದ  ಕತೆಯೊಂದು ಕೂಡ ಗೊತ್ತಾಗುತ್ತದೆ. ಸಂಗಮ್ ಸಿನೆಮಾದ ಹಾಡುಗಳು ತೆರೆಯ ಮೇಲೆ ಬಂದಾಗ ನನ್ನ ಪಕ್ಕದಲ್ಲಿ ಕೂತ ಮುದುಕಿಯೂ ’ಬೋಲ್ ರಾಧಾ ಬೋಲ್ ಸಂಗಮ್ ಹೋಗಾ ಕೀ ನಹೀ...’ ಎನ್ನುತ್ತ ಗುನುಗತೊಡಗಿದ್ದಳು. ಸಿನೆಮಾ ಮುಗಿದ ನಂತರ ಆಕೆ ನನ್ನನ್ನು ಬಿಗಿಯಾಗಿ ತಬ್ಬಿಕೊಂಡಳು. ನನ್ನೊಳಗೆ ಜಗತ್ತು ಚಲಿಸಿದ ಭಾವ.

ಇಬ್ಬರೂ ಎದ್ದು ಹೊರಟಾಗ ವ್ಯೋಮಕೇಶ ಭಕ್ಷಿ ಮತ್ತೆ ತಗುಲಿಕೊಂಡ. ಹೇಗಿತ್ತು ಎಂದು ಕೇಳಿದರೆ ’Big Bum' ಎಂದ.  ಅವನು ಮೂರೂ ದಿನದ ಎಲ್ಲಾ ಸಿನೆಮಾಗಳನ್ನೂ ನೋಡುವವನಿದ್ದ ಮತ್ತು ’All bums you know' ಎನ್ನುತ್ತ ಹೊರಬೀಳುವವನಿದ್ದ.  ನಂಗಂತೂ ಇಷ್ಟವಾಯಿತಪ್ಪ, ಎಂತೆಂತಹ ಜನ ಇರ್ತಾರೆ ಅಲ್ವಾ! ಅವನಿಗೆ ಹ್ಯಾಗೆ ಇಷ್ಟ ಆಗಲಿಲ್ಲ ಎಂದು ಬೈದುಕೊಳ್ಳುತ್ತ ಮುದುಕಿ ನನ್ನೊಂದಿಗೆ ಹೆಜ್ಜೆ ಹಾಕಿದಳು.

ಇವತ್ತಿಗೆ ಮೊದಲು ಅವಳೆಲ್ಲಿದ್ದಳೋ... ಆ ವಿಮಾ ಕಂಪೆನಿಯ ಅಕೌಂಟಂಟ್ ಎಲ್ಲಿದ್ದನೋ... ಇನ್ನು ಭೇಟಿಯಾಗುತ್ತೇವೆಯೋ ಇಲ್ಲವೋ ಗೊತ್ತಿಲ್ಲ.  ಹೃದಯ ಕಲಕುವಂತಹ ಯಾವುದೂ ನಮ್ಮ ನಡುವೆ ಆಗಲಿಲ್ಲ.  ಅತಿ ಸಾಮಾನ್ಯವೆನಿಸುವಂತಹ ಒಂದು ಭೇಟಿ. ಆದರೆ  ನಾವು ಮೂವರೂ ಮೂವರಿಗೂ  ಪರಿಚಿತವಾದ ಲೋಕವೊಂದರ ವಿಭಿನ್ನ ತಂತುಗಳೇನೋ ಎಂದು ಅನಿಸುತ್ತಿದೆ. I felt as if we were co-travelers of some unknown destination. 

ಅಮ್ಮ, ಸ್ವಲ್ಪ ನಂಗೆ ಅರ್ಥವಾಗುವ ಹಾಗೆ ಬರಿ ಎಂದೆಯಾ? ಎಂದಾದರೂ ನಿನಗೆ ಅರ್ಥವಾದೀತು ಎಂದು ಬರೆದಿದ್ದೇನೆ. 

16/11/2018


ಇಂತಿ, 
ನಿನ್ನ ಅಮ್ಮ








Tuesday, December 20, 2016

The Art Cafe



Before me is a cup of hot cappuccino
topped with  milk foam in the shape of a heart.
A  heart floating in a bowl of heavily scented silence.
In a silky white attire,
bewitching  the ailing minds,
assuring of an ethereal future.
A gentle kiss.  The milky foamy heart, a healer in pretense,
seeps slowly  into my overcast depth
only to stimulate dampen sparks                                 

Unfamiliar faces, yet so soothing
I stare at nothing in particular
A forwarded joke on my  WhatsApp and
I text back a smile.  “Still upset?”
“No, I am alright” a digital smile in return. 
Start everything again from the debris
seal   open wounds, and smile
we are resilient you see. Brave.
I stare at nothing in particular.

A Waitress in multicoloured synthetic hair braids
is returning with an empty tray
raking an uncomfortable past up.
Her young boyfriend, missing since a month
 was a thief with many women that she knew.  
Denying the rumours about his death in a police encounter
She waits. A kind lover, she is.

A unique blend  
Of half truth; the Cafe brews.

-Prajna




















Tuesday, February 2, 2016

ಬಾಗಿಲ ಮೇಲೆ ಬದುಕನ್ನು ಬರೆದವನ ಸ್ವಗತ

ನಾನು ಸಾಕ್ಷಿಯಾಗಬಯಸುತ್ತೇನೆ.

ಅದು ಆಗಿದ್ದು ಹತ್ತು ವರ್ಷಗಳ ಹಿಂದೆ. ಆದರೆ ಅದು ಪ್ರತಿನಿತ್ಯ ನನ್ನ ಕಣ್ಣೆದುರು ಬಂದು ನಿಲ್ಲುತ್ತದೆ.

ನಾವು ಪ್ರಿಪ್ಯಟ್ ನಲ್ಲಿ ಇದ್ವಿ. ಪ್ರಿಪ್ಯಟ್ ಟೌನ್.

ನಾನು ಬರಹಗಾರನೇನಲ್ಲ. ಅದನ್ನ ವರ್ಣಿಸುವುದು ನನ್ನ ಕೈಲಾಗೋದಿಲ್ಲ. ಅದನ್ನ ಅರ್ಥ ಮಾಡಿಕೊಳ್ಳುವುದು ನನ್ನ ಬುದ್ದಿಗೆ ನಿಲುಕದ್ದು.  ವಿಶ್ವವಿದ್ಯಾನಿಲಯದ ಡಿಗ್ರಿ ಇದ್ದರೇನು ಅದನ್ನು ಅರಗಿಸಿಕೊಳ್ಳುವುದು ತಿಳಕೊಂಡಷ್ಟು ಸರಳವಲ್ಲ. 

ನೀವು ತೀರಾ ಸಾಮಾನ್ಯವಾಗಿ ಜೀವನ ನಡೆಸುತ್ತಿರುತ್ತೀರಿ ಅಂದುಕೊಳ್ಳಿ. ಒಬ್ಬ ತೀರಾ ಸಾಮಾನ್ಯ ಗ್ರಹಸ್ಥ. ಸಣ್ಣ ಮನುಷ್ಯ. ಎಲ್ಲರ ಹಾಗೆ ದಿನಾ ಕೆಲಸಕ್ಕೆ ಹೋಗ್ತೀರಿ, ಸಂಜೆ ಮನೆಗೆ ಮರಳುತ್ತೀರಿ. ಅಂತಾ ಹೇಳಿಕೊಳ್ಳುವಂತಹ ಪಗಾರೇನಲ್ಲ, ವರ್ಷಕ್ಕೊಂದು ಸಲ ರಜಾದಿನಗಳಲ್ಲಿ  ಸಂಸಾರದೊಟ್ಟಿಗೆ ಎಲ್ಲಾದರೂ ಪ್ರವಾಸಕ್ಕೆ ಹೋಗಿ ಬರ್ತೀರಿ.  ತೀರಾ ಸಾಮಾನ್ಯ ವ್ಯಕ್ತಿ! ಇನ್ನೇನು ಹೇಳೋದು. ಆಮೇಲೊಂದು ದಿನ ನೀವು ಚೆರ್ನೋಬಿಲ್ ವ್ಯಕ್ತಿಯಾಗಿಬಿಡುತ್ತೀರಿ. ಒಂದು ಪ್ರಾಣೀನೋ ಅನ್ನೋ ಹಾಗೆ ಇದ್ದಕ್ಕಿದ್ದಂತೆ ಎಲ್ಲರಿಗೂ ನಿಮ್ಮ ಮೇಲೆ ಆಸಕ್ತಿ ಕೆರಳುತ್ತದೆ. ಎಲ್ಲರಿಗೂ ಆಸಕ್ತಿ, ಆದರೆ ತಿಳಕೊಂಡಿರೋದು ಏನೂ ಇಲ್ಲ. ನಿಮಗೆ ಎಲ್ಲರ ಹಾಗೇ ಬದುಕಬೇಕು ಅನಿಸುತ್ತದೆ, ಆದರೆ ಜನ ನಿಮ್ಮನ್ನ ಬೇರೇ ಥರ ನೋಡಲಿಕ್ಕೆ ಶುರು ಮಾಡ್ತಾರೆ. ನಿಮ್ಮನ್ನ ಕೇಳೋದಕ್ಕೆ ಶುರು ಮಾಡ್ತಾರೆ. ಭಯ ಆಯ್ತಾ? ಸ್ಟೇಶನ್ ಹೇಗೆ ಸುಟ್ಟಿತು? ನೀವೇನು ನೋಡಿದ್ರಿ? ಮತ್ತೇ, ನಿಮಗೆ ಮಕ್ಕಳು ಆಗೋಕೇನೂ ಸಮಸ್ಯೆ ಇಲ್ಲ ಅಲ್ವಾ? ನಿಮ್ಮ ಹೆಂಡತಿ ಏನಾದ್ರೂ ನಿಮ್ಮನ್ನ ಬಿಟ್ಟು ಹೋದ್ರಾ? ಮೊದ ಮೊದಲಿಗೆ ನಮ್ಮನ್ನೆಲ್ಲಾ ಪ್ರಾಣಿಗಳನ್ನಾಗಿ ಮಾಡಿಬಿಟ್ಟಿದ್ರು. ’ಚೆರ್ನೋಬಿಲ್’ ಅನ್ನೋ ಪದ ಕಿವಿಗೆ ಬಿದ್ರೆ ಸಾಕು, ಅದೊಂಥರಾ ಎಲ್ಲರಿಗೂ ಸುಳಿವು ಸಿಕ್ಕು ಬಿಡುತ್ತಿತ್ತು. ಎಲ್ಲ ಈ ಕಡೆ ತಿರುಗಿ, ’ಹೋ ಇವರು ಅಲ್ಲಿಯವರು!’ ಅನ್ನೋ ಥರ ಮುಖ ಮಾಡೋದು.

ಶುರು ಶುರುವಿನಲ್ಲಿ ಹೀಗೇ ಇತ್ತು. ನಾವು ಬರೀ ಒಂದು ಪಟ್ಟಣವನ್ನು ಕಳಕೊಂಡಿಲ್ಲ. ನಮ್ಮಿಡೀ ಬದುಕನ್ನೇ ಕಳಕೊಂಡ್ವಿ. ನಾವು ಅದಾದ ಮೂರನೇ ದಿನ ಊರು ಬಿಟ್ವಿ. ರಿಯಾಕ್ಟರಿಗೆ ಬೆಂಕಿ ಬಿದ್ದಿತ್ತು.  ನನ್ನ ಸ್ನೇಹಿತನೊಬ್ಬ ಹೇಳಿದ್ದು ನೆನಪಿಗೆ ಬರ್ತಿದೆ  “ರಿಯಾಕ್ಟರಿನ ವಾಸನೆ ಎಲ್ಲ ಕಡೆ”. ಹೇಳೋಕಾಗೋದಿಲ್ಲ, ಅದ್ಯಾವ ತರಹರದ ವಾಸನೆ ಅಂತ, ಆ ತರಹ ಇತ್ತು. ಅಷ್ಟೊತ್ತಿಗಾಗಲೇ ಪೇಪರಿನವರು ಅದರ ಬಗ್ಗೆ ಬರೆಯೋಕೆ ಶುರು ಮಾಡಿದ್ರು.  ಅವರ ಲೇಖನಗಳಲ್ಲಿ, ವರದಿಗಳಲ್ಲಿ ಚೆರ್ನೊಬಿಲ್ಲನ್ನು ಒಂದು ಭಯದ ಗೂಡನ್ನಾಗಿ ಮಾಡಿಬಿಟ್ಟಿದ್ದರು, ಆದರೆ ನಮಗೆ ಅವರು ಬರೆದದ್ದು ಕಾರ್ಟೂನ್ ಥರ ಅನಿಸುತ್ತಿತ್ತು. ನಾನೀಗ ನನ್ನ ಕತೆಯನ್ನು ಮಾತ್ರ ಹೇಳ್ತೀನಿ. ನನ್ನ ಪಾಲಿನ ಸತ್ಯವನ್ನು ಮಾತ್ರ.

ಅದು ಹೇಗಾಯ್ತೆಂದರೆ: ಊರು ಬಿಡೋವ್ರು ತಮ್ಮೊಂದಿಗೆ ತಾವು ಸಾಕಿದ ಪ್ರಾಣಿಗಳನ್ನೆಲ್ಲ ಒಯ್ಯೋ ಹಾಗಿಲ್ಲ ಅಂತ ರೇಡಿಯೋದಲ್ಲಿ ಪ್ರಕಟಣೆ ಹೊರಡಿಸಿದರು. ನಾವು ನಮ್ಮ ಬೆಕ್ಕನ್ನ ಒಯ್ಯೋ ಹಾಗಿರಲಿಲ್ಲ. ನಾವೇನ್ಮಾಡಿದ್ವಿ, ಅದನ್ನ ಸೂಟ್ಕೇಸಿನಲ್ಲಿ ಇಟ್ಟು ಕೊಂಡ್ವಿ. ಆದರೆ ಅದು ಹೊರಗೆ ಬಂದುಬಿಡ್ತು. ಸುತ್ತಮುತ್ತ ಇರೋವ್ರನ್ನ ಪರಚೋಕೆ ಶುರು ಮಾಡ್ತು. ಬಂದೇ ಬಿಡ್ತಪ್ಪ ಎಲ್ಲಿಂದಲೋ ಆವಾಜ್! ನೀವು ನಿಮ್ಮ ಸಾಮಾನುಗಳನ್ನೆಲ್ಲ ಒಯ್ಯೋಹಾಗಿಲ್ಲ ಅಂತ. ಸರೀನಪ್ಪ, ಎಲ್ಲವನ್ನೂ ಒಯ್ಯೋದಿಲ್ಲ. ಒಂದನ್ನ ಮಾತ್ರ ಒಯ್ತೀನಿ. ಒಂದೇ ಒಂದು ಸಾಮಾನು. ನಮ್ಮ ಅಪಾರ್ಟಮೆಂಟಿನ ಬಾಗಿಲೊಂದನ್ನ ಕಳಚಿಕೊಂಡು  ಬರ್ತೀನಿ. ಆ ಬಾಗಿಲನ್ನ ಬಿಡೋ ಹಾಗಿಲ್ಲ. ಮನೆಗೆ ಬೇರೇ ಏನಾದ್ರೂ ಹಲಗೆ ಪಲಗೆ ಹಾಕಿ ಮುಚ್ತೀನಿ. ಅದು ನಮ್ಮ ತಾಯಿತ ಇದ್ದ ಹಾಗೆ. ನಮ್ಮ ಕುಟುಂಬದ ಕುರುಹು. ನನ್ನ ತಂದೆಯನ್ನ ಈ ಬಾಗಿಲ ಮೇಲೇ ಇರಿಸಿದ್ದರು. ಇದು ಯಾರ ಪರಂಪರೆ ಅಂತ ನನಗೆ ಗೊತ್ತಿಲ್ಲ. ಈ ಪರಂಪರೆ ಎಲ್ಲ ಕಡೆಯೂ ಇಲ್ಲ. ನನಗೆ ನನ್ನಮ್ಮ ಹೇಳಿದ್ದು, ಸತ್ತವರನ್ನ ಅವರ ಮನೆಯ ಬಾಗಿಲ ಮೇಲೆ ಇಡಬೇಕು. ಜನ ಕಾಫಿನ್ ತರುವಲ್ಲಿಯವರೆಗೆ ಹೆಣವನ್ನ ಅದರ ಮೇಲೆ ಇಡಬೇಕು. ಅಪ್ಪ ಸತ್ತಾಗ ಅವನನ್ನ ಇದರ ಮೇಲೇ ಇಟ್ಟಿದ್ದರು. ನಾನು ರಾತ್ರಿಯಿಡೀ ಅವನ ಪಕ್ಕದಲ್ಲಿದ್ದುಕೊಂಡು ಕಾದಿದ್ದೆ, ಕಾಫಿನ್ ಬೆಳಿಗ್ಗೆ ಬಂತು. ಮನೆ ತೆರೆದೇ ಇತ್ತು, ಇಡೀ ರಾತ್ರಿ,  ಬಾಗಿಲ ಮೇಲೆ ಅಲ್ಲಲ್ಲಿ ಕೊರೆದಿರೊ ಹಾಗೆ ಕಾಣ್ತದೆ, ಅದು ನಾನು ಹೇಗೆ ಬೆಳೆಯುತ್ತ ಬಂದೆ ಅನ್ನೋದನ್ನ ಗುರುತು ಮಾಡಿಟ್ಟದ್ದು. ಮೊದಲನೆ ತರಗತಿ, ಎರಡನೆ ತರಗತಿ ನಂತರ ಏಳನೆಯ ತರಗತಿ. ಆಮೇಲೆ ಸೈನ್ಯ ಸೇರೋಕೆ ಮುಂಚಿಂದು. ಅದರ ಪಕ್ಕದಲ್ಲಿರೋದು ಮಗ ಹೇಗೆ ದೊಡ್ಡೋನಾದ ಅನ್ನೋದು, ಆಮೇಲೆ ಮಗಳು. ನನ್ನಿಡೀ ಬದುಕು ಇದರ ಮೇಲೆ ಬರೆದುಕೊಂಡಿದೆ. ಇದನ್ನ ಹ್ಯಾಗೆ ಬಿಟ್ಟು ಬರಲಿ?

ನನ್ನ ಪಕ್ಕದ್ಮನೆಯವನ ಹತ್ತಿರ ಕಾರಿತ್ತು. ಸಹಾಯ ಮಾಡಪ್ಪ ಅಂದೆ. ಅವನು, ’ನಿಂಗೆ ತಲೆಗಿಲೆ ಏನಾದ್ರೂ ಕೆಟ್ಟಿದೆಯಾ’ ಅನ್ನೋ ತರಹ ನೋಡಿದ. ಆದರೆ ನಾನು ಬಾಗಿಲನ್ನ ತೊಗೊಂಡು ಹೋದೆ, ಬಿಡಲಿಲ್ಲ. ರಾತ್ರಿ ಬೈಕಿನ ಮೇಲೆ ಹಾಕಿಕೊಂಡು ತೊಗೊಂಡು ಹೋದೆ. ಕಾಡಿನ ಹಾದಿಯಲ್ಲಿ ಹೋದೆ. ಅದು ಇವೆಲ್ಲ ಆಗಿ ಎರಡು ವರ್ಷಗಳ ನಂತರ ಆದದ್ದು. ಅಷ್ಟೊತ್ತಿಗಾಗಲೇ ನಮ್ಮ ಅಪಾರ್ಟ್ಮೆಂಟುಗಳನ್ನೆಲ್ಲ ಕೊಳ್ಳೆ ಹೊಡೆದಾಗಿತ್ತು. ಸುಮಾರು ದೂರದವರೆಗೆ ಪೋಲೀಸರು ನನ್ನನ್ನು ಹಿಂಬಾಲಿಸಿಕೊಂಡು ಬಂದರು, ’ಶೂಟ್ ಮಾಡ್ತೀವಿ, ಶೂಟ್ ಮಾಡ್ತೀವಿ” ಅನ್ನುತ್ತ. ಅವರೆಲ್ಲ ನಾನು ಕಳ್ಳ ಅಂದುಕೊಂಡರು. ಹೀಗೆ ನಾನು ನನ್ನ ಮನೆಯ ಬಾಗಿಲನ್ನೇ ಕದ್ದೆ.

ಆಮೇಲಿನ ಕತೆ...

ನನ್ನ ಹೆಂಡತಿ ಮತ್ತು ಮಗಳನ್ನ ಆಸ್ಪತ್ರೆಗೆ ಕರೆದುಕೊಂಡು ಹೋದೆ. ಅವರ ಮೈಮೇಲೆಲ್ಲ ಬಿಲ್ಲೆಯಾಕಾರದ ಕಪ್ಪು ಚುಕ್ಕೆಗಳು  ತುಂಬಿಕೊಂಡಿದ್ದವು. ಈ ಚುಕ್ಕೆಗಳು ಆವಾಗಾವಾಗ ಕಾಣಿಸಿಕೊಳ್ಳುತ್ತಿದ್ದವು, ಆಮೇಲೆ ಮಾಯವಾಗುತ್ತಿದ್ದವು. ಐದು  ಕೊಪೆಕ್ ನಾಣ್ಯ ಗಾತ್ರದಲ್ಲಿದ್ದವು. ನೋವೇನೂ ಇರಲಿಲ್ಲ. ಸುಮಾರು ಬಗೆಯ ಟೆಸ್ಟುಗಳಾದವು. ನಾನು ರಿಪೋರ್ಟ್ ಕೇಳಿದರೆ, ಅದು ನಿನಗಲ್ಲ ಅಂದುಬಿಟ್ಟರು. ಮತ್ಯಾರಿಗೆ ಅಂದೆ.

ಆವಾಗ ಎಲ್ಲರ ಬಾಯಲ್ಲೂ ಒಂದೇ ಮಾತು. ’ನಾವೆಲ್ಲ ಸತ್ತು ಹೋಗುತ್ತೀವಿ. ನಾವೆಲ್ಲ ಸಾಯೋವ್ರೆ. 2000 ದ ಹೊತ್ತಿಗೆ ಒಬ್ಬ ಬೆಲರೂಸಿಯನ್ ಕೂಡ ಇರೋದಿಲ್ಲ’ ಅಂತ. ಆವಾಗ ನನ್ನ ಮಗಳಿಗೆ ಆರು ವರ್ಷ ಆಗಿತ್ತು. ಅವಳನ್ನ ಮಲಗಿಸ್ತಾ ಇದ್ದೀನಿ, ನನ್ನ ಕಿವಿಯಲ್ಲಿ ಉಸುರಿದಳು, “ಅಪ್ಪಾ ನಂಗೆ ಬದುಕಬೇಕು ಅಂತಿದೆ. ನಾನಿನ್ನೂ ಚಿಕ್ಕವಳು”  ಅವರೆಲ್ಲ ಹಾಗೆ  ಮಾತಾಡಿದ್ದು ಇವಳಿಗೇನೂ ಅರ್ಥವಾಗಿರಲಿಕ್ಕಿಲ್ಲ ಅಂದುಕೊಂಡಿದ್ದೆ.

ಒಂದು ರೂಮಿನಲ್ಲಿ ತಲೆ ಬೋಳಿಸಿಕೊಂಡ ಏಳು ಚಿಕ್ಕ ಚಿಕ್ಕ ಹೆಣ್ಣು ಮಕ್ಕಳನ್ನ ಕಲ್ಪನೆ ಮಾಡಿಕೊಳ್ಳುತ್ತೀರಾ? ಆಸ್ಪತ್ರೆಯ ಆ ರೂಮಿನೊಳಗೆ ಹಾಗೆ ಏಳು ಮಕ್ಕಳು ಇದ್ದವು....ಸಾಕಪ್ಪ! ಅಷ್ಟೇ! ನಾನು ಆ ಬಗ್ಗೆ ಮಾತಾಡಿದರೆ ನನ್ನ ಹೃದಯ ಕೂಗಿ ಹೇಳುತ್ತದೆ –ನೀನು ಅವರಿಗೆ ದ್ರೋಹ ಮಾಡ್ತಾ ಇದ್ದೀಯೆ. ಯಾಕೆಂದರೆ, ಅದನ್ನು ಅಪರಿಚಿತನ ಥರ ವರ್ಣಿಸಬೇಕಾಗುತ್ತದೆ. ನನ್ನ ಹೆಂಡತಿ ಆಸ್ಪತ್ರೆಯಿಂದ ಮನೆಗೆ ಬಂದಳು. ಇನ್ನವಳಿಗೆ ಅದನ್ನು ಭರಿಸುವುದು ಸಾಧ್ಯವಿರಲಿಲ್ಲ. “ಅವಳು ಹೀಗೆ ಸಂಕಟ ಅನುಭವಿಸುವ ಬದಲು ಸತ್ತು ಹೋಗುವುದೆ ಒಳ್ಳೆಯದು. ಅಥವಾ ನಾನೇ ಸತ್ತು ಹೋಗುವುದು ಒಳ್ಳೆಯದು, ಅದನ್ನು ನೋಡುವುದಾದರೂ ತಪ್ಪುತ್ತದೆ”

ಇಲ್ಲ, ಇನ್ನು ಆಗೋದಿಲ್ಲ! ಆಯ್ತು, ಇಷ್ಟೇ! ನನ್ನ ಹತ್ರ ಇನ್ನು ಏನು ಹೇಳೋಕೂ ಆಗೋದಿಲ್ಲ.

ನಾವು ಅವಳನ್ನ ಆ ಬಾಗಿಲ ಮೇಲೆ ಇಟ್ವಿ...ನನ್ನಪ್ಪನನ್ನು ಇರಿಸಿದ ಬಾಗಿಲು. ಪುಟ್ಟ ಕಾಫಿನ್ ತರುವ ತನಕ. ಪುಟ್ಟ ಪೆಟ್ಟಿಗೆ, ಒಂದು ದೊಡ್ಡ ಗೊಂಬೆ ಹಿಡಿಸುವಷ್ಟು ಇದ್ದ ಪುಟ್ಟ ಪೆಟ್ಟಿಗೆ.

ನಾನು ಸಾಕ್ಷಿಯಾಗಬಯಸುತ್ತೇನೆ: ನನ್ನ ಮಗಳು ಸತ್ತಿದ್ದು ಚೆರ್ನೋಬಿಲ್ ನಿಂದ. ನಾವದನ್ನ ಮರೆಯಲಿ ಅಂತ ಅವರು ಬಯಸುತ್ತಾರೆ.


-ನಿಕೊಲಾಯ್ ಕಲುಜಿನ್, ತಂದೆ
ಕನ್ನಡಕ್ಕೆ: ಪ್ರಜ್ಞಾ


Voices from the Chernobyl


This is a collection of interviews by Svetlana Alexievich. In 2015, the author received the Nobel Prize for literature. It is collection of ‘voices’ from those who were caught in the tragic moment, it is a collection of real–life stories.  Voices, here, resonate pain. The Chernobyl tragedy occurred in 1986. But, it is a never ending struggle for people over there for life due to invisible radiation.  You can’t read the stories, can’t hear the voices without moistening your eyes. 


[ಇದು ಅವಧಿಯಲ್ಲಿ ಪ್ರಕಟಗೊಂಡಿದೆಯಾದರೂ ನನ್ನ ಎಲ್ಲ ಬರಹಗಳೂ ಒಂದೇ ಕಡೆ ಜಮಾ ಆಗಲಿ ಎಂಬ ಉದ್ದೇಶದಿಂದ ಇಲ್ಲಿ ಹಾಕಿಕೊಂಡಿದ್ಧೇನೆ,]

Wednesday, October 7, 2015

ನ್ಯಾಸ -ನನ್ನ ಗ್ರಹಿಕೆಯಲ್ಲಿ




ಹರೀಶ ಹಾಗಲವಾಡಿಯವರ ಚೊಚ್ಚಲ ಕಾದಂಬರಿ ’ನ್ಯಾಸ’ ವನ್ನು ಓದಿ ಮುಗಿಸಿದ ಮೇಲೆ ನೆನಪಾದದ್ದು, ಶಿಶುನಾಳ ಶರೀಫರ ಈ ಸಾಲುಗಳು.

ನಿಶ್ಚಿಂತನಾಗಬೇಕಂತಿ ಬಹು
ದುಶ್ಚಿಂತೆಯೊಳಗೆ ನೀ ಕುಂತಿ

’ನ್ಯಾಸ’ ದ ಕತೆ  ಬಂಧಮುಕ್ತರಾದೆವೆಂದುಕೊಂಡವರು  ಅದರೊಳಗೇ ಸೆರೆಯಾದವರ ಕತೆ. ಬಿಟ್ಟೆನೆಂದುಕೊಂಡವರು ಅದಕ್ಕೇ ಅಂಟಿಕೊಂಡವರ ಕತೆ. ಸ್ಥೂಲವಾಗಿ ಹೇಳಬೇಕೆಂದರೆ, ಅದು, ಸಂಸಾರ ತೊರೆದು ಸೇವೆ, ಸಾಧನೆ ಎಂಬ ಭ್ರಮೆಯಲ್ಲಿ ಸ್ವ ಇಚ್ಛೆಯಿಂದ  ಸನ್ಯಾಸ ಸ್ವೀಕರಿಸಿ ಮಠ ಎಂದೋ ಆಶ್ರಮವೆಂದೋ ಒಳ ಹೊಕ್ಕಿದವರ ಬದುಕಿನ ಆಂತರಿಕ ಸಂಘರ್ಷದ ಕತೆ. ಅವರ  ಬದುಕಿನ ವಿವಿಧ ಮಗ್ಗುಲುಗಳನ್ನು ವಿಶ್ಲೇಷಿಸುವ ಕತೆ. ಆದರೆ ಅದು ಅದಷ್ಟೇ ಅಲ್ಲ.

ಸಾಧನೆ, ಸನ್ಯಾಸ, ಸೇವೆ, ಆಧ್ಯಾತ್ಮ, ಸತ್ಯಾನ್ವೇಷಣೆ, ಎಂಬಿತ್ಯಾದಿ  ಪದಗಳೆಲ್ಲ ತೂಕ ಕಳೆದುಕೊಂಡು, ಸವಕಲಾಗಿ, ನಿಸ್ತೇಜಗೊಂಡು, ನಗೆಪಾಟಲಿಗೀಡಾಗುತ್ತಿರುವ ಹೊತ್ತಿನಲ್ಲಿ ಆ ಪದಗಳ ಬೇರಿಗಿಳಿದು ಅರ್ಥ ಅನರ್ಥವಾದದ್ದು ಎಲ್ಲಿ ಎಂದು ಹುಡುಕುವ ಪ್ರಯತ್ನ ಮಾಡುತ್ತದೆ ಈ ಕಾದಂಬರಿ. ಕಾದಂಬರಿಯೇ ಒಂದು ಕನ್ನಡಿಯಂತೆ ಕೆಲಸ ಮಾಡುತ್ತದೆ, ಅರ್ಥ-ಅನರ್ಥಗಳ ನಡುವಿನ ಗೆರೆ ಮಸುಕಾದ್ದು ಎಲ್ಲಿ ಹೇಗೆ ಎಂಬ ಚಿತ್ರಣವನ್ನು ತಾನು ಪ್ರತಿಫಲಿಸುತ್ತದೆ. ಓದುಗರ ತಲೆಯೊಳಗೆ ಗುಂಗಿ ಹುಳ ಮೊಟ್ಟೆಯಿಡುವುದಕ್ಕೆ ಅಷ್ಟು ಸಾಕು!

ಸಾಧಕನಾಗಲಿಕ್ಕೆ ಸನ್ಯಾಸ ಬೇಕೆ? ಸನ್ಯಾಸ ಸ್ವೀಕರಿಸಿದ ಮಾತ್ರಕ್ಕೆ ಸಾಧಕನಾಗುವ ಅರ್ಹತೆ ಬಂದು ಬಿಡುತ್ತದೆಯೆ? ಸಂಸಾರದೊಳಗಿದ್ದುಕೊಂಡೂ, ಮನೆ-ಮಠ ತೊರೆಯದೇ ಎಲ್ಲ ನಿಭಾಯಿಸಿಕೊಂಡೂ ಯೋಗಿಗಳಂತೆ ಬದುಕಿದವರ ಬದುಕೂ ನಮ್ಮ ಅನುಭವಕ್ಕೆ ಬರುತ್ತದೆ. ಮನೆ-ಮಠ ತೊರೆದು, ಸಂಸಾರಿಕ ಬಂಧಗಳಿಂದ ಮುಕ್ತರಾಗಿ ಪರಮಾತ್ಮನ ಸೇವೆ ಮಾಡಿಕೊಂಡು ಇರ್ತೀನಿ ಅಂತ ಆಶ್ರಮ ಕಟ್ಟಿಕೊಂಡವರು ಹೇಗೆ ಆಶ್ರಮಕ್ಕೊಂದು ಕಟ್ಟಡ ಬೇಕು, ನಂತರ ಜಮೀನು ಬೇಕು, ನಂತರ ಸ್ಕೂಲ್ ಬೇಕು, ಅತ್ಯಾಧುನಿಕ ವ್ಯವಸ್ಥೆ ಬೇಕು, ಕೊನೆಗೊಂದು ಗೆಳತೀನೂ ಬೇಕು, ಎಂದುಕೊಂಡು  ಸಂಸಾರಿಗಳಿಗಿಂತ ಜಾಸ್ತಿ ಒದ್ದಾಡುವುದೂ ನಮ್ಮ ಅನುಭವಕ್ಕೆ ಬರುತ್ತದೆ. ಸಾಧಕರೆಂದರೆ ಯಾರು? ಏನದು ಸಾಧನೆಯೆಂದರೆ? ಸೇವೆ ಅಥವಾ ಸನ್ಯಾಸ ಯಾವಾಗ ಸಾರ್ಥಕವಾಗುತ್ತದೆ? ನ್ಯಾಸ ಸಾಧ್ಯವೆ?  ಎಂಬಿತ್ಯಾದಿ ಪ್ರಶ್ನೆಗಳನ್ನು ನಮ್ಮ ಕಾಲಘಟ್ಟದ ಗ್ರಹಿಕೆಗೆ ನಿಲುಕುವಂತೆ ಬಿಡಿಸುವ ನಿಟ್ಟಿನಲ್ಲಿ ಸೂಕ್ಷ್ಮ ಒಳನೋಟಗಳನ್ನು ನೀಡುವ ಕಾದಂಬರಿ ’ನ್ಯಾಸ’.

ಈ ಕಾದಂಬರಿಯಲ್ಲಿ ಬರುವ ಪ್ರತಿ ಪಾತ್ರಕ್ಕೂ ವ್ಯಕ್ತಿಗತ ನೆಲೆಯಲ್ಲಿ ಅವರವರದ್ದೇ ಆದ ಹುಡುಕಾಟವಿದೆ. ಕೆಲವು ಪಾತ್ರಗಳು ತಮ್ಮ ಹುಡುಕಾಟದ ಪ್ರಶ್ನೆಯನ್ನೆ ಗೋಜಲಾಗಿಸಿಕೊಂಡವರು. ಕೆಲವರು ಅವರವರ ನೆಲೆಯಲ್ಲಿ ಉತ್ತರ ಪಡೆದುಕೊಂಡು ನೆಮ್ಮದಿ ಪಡಕೊಂಡವರು. ಕೆಲವರದ್ದು ಕಪಟ. ಕೆಲವರದ್ದು ಭ್ರಮೆ.  ಪ್ರತಿ ಪಾತ್ರವೂ ಒಂದು ಪಯಣದಂತೆ, ಅವುಗಳ ಆರಂಭ-ಅಂತ್ಯದ ನಡುವಿನ ಹಾದಿ ಕವಲೊಡೆದು ಒಂದಲ್ಲ ಒಂದು ರೀತಿಯಲ್ಲಿ ಈ ಕಾದಂಬರಿಯ ಮುಖ್ಯ ಪಾತ್ರವಾದ ಸತ್ಯಪ್ರಕಾಶನೊಂದಿಗೆ ತಳಕು ಹಾಕಿಕೊಳ್ಳುತ್ತದೆ.  ಈ ಪಾತ್ರ ಮುಖ್ಯವೆನಿಸಿಕೊಳ್ಳುವುದು ಅದು ಈ ಕಾದಂಬರಿಯ ಕೇಂದ್ರವೆನ್ನುವ ಕಾರಣಕ್ಕಲ್ಲ, ಅದು ಇನ್ನುಳಿದ ಎಲ್ಲ ಪಾತ್ರಗಳೊಂದಿಗೆ ಪ್ರತ್ಯಕ್ಷವಾಗಿಯೋ ಅಪ್ರತ್ಯಕ್ಷವಾಗಿಯೋ ಸಂವಾದ ನಡೆಸುತ್ತದೆ ಅನ್ನುವ ಕಾರಣಕ್ಕೆ.  ಬರಿಯ  ಪಾತ್ರ ವಿಶ್ಲೇಷಣೆಯೇ ಒಂದು ಮಹಾಪ್ರಬಂಧವಾಗಬಹುದು!

ತನ್ನ ಮಗ ತನ್ನಂತೆ ಎಡಬಿಡಂಗಿಯಾಗದೇ ಕಲಿತು ಒಳ್ಳೇ ಒಂದು ನೌಕರಿ ಹಿಡಿದು ನೆಮ್ಮದಿಯ ಜೀವನ ನಡೆಸಬೇಕೆಂದು ಕನಸು ಕಂಡಿದ್ದ ರುದ್ರಯ್ಯನವರಿಗೆ ಆಘಾತವಾಗುತ್ತದೆ. ಮುದ್ದಿನ ಮಗ ಸಂಸಾರದಲ್ಲಿ ವಿರಕ್ತಿ ಹೊಂದಿ ಸನ್ಯಾಸಿಯಾಗುತ್ತೇನೆ,  ಸಾಧಕನಾಗುತ್ತೇನೆ, ಈ ಸಂಸಾರ ಸೀಮಿತ ಪರಿಧಿ ಉಳ್ಳದ್ದು, ಇದರಲ್ಲಿ ನನಗೆ ತೃಪ್ತಿ ಇಲ್ಲ, ಅಹಂಕಾರ ಮಮಕಾರಗಳನ್ನು ಕಳಕೊಳ್ಳದೆ ಸತ್ಯ ಗೊತ್ತಾಗೋದಿಲ್ಲ ಅಪ್ಪನಿಗೆ ಪತ್ರ ಬರೆದಿಟ್ಟು ಸ್ವ ಇಚ್ಛೆಯಿಂದ ಮನೆ ಬಿಟ್ಟು ಹೋಗುತ್ತಾನೆ. ಹೊರಟವನು ತುಮಕೂರಿನ  ದೇವಪ್ರಿಯಾನಂದರ ಆಶ್ರಮ ಸೇರುತ್ತಾನೆ, ಅಲ್ಲಿಂದ ಹುಬ್ಬಳ್ಳಿಯ ಧರ್ಮಾತ್ಮಾನಂದರ ಆಶ್ರಮ ಸೇರುತ್ತಾನೆ. ಅದನ್ನೂ ಬಿಟ್ಟು ಒಂಟಿಯಾಗಿ ಉತ್ತರದ ತೀರ್ಥ ಕೇತ್ರಗಳಲ್ಲಿ ಅಲೆದಾಡುತ್ತಾನೆ. ಸತತ ಅಭ್ಯಾಸಿ, ಶ್ರದ್ಧೆ ಮತ್ತು ಮನೋನಿಗ್ರಹವುಳ್ಳ ಸತ್ಯನೆಂದರೆ ಅವನೊಂದಿಗೆ ಒಡನಾಡಿದ ಎಲ್ಲರಿಗೂ ಅದೇನೋ ಸೆಳೆತ. ಅವನ ಗಾಂಭೀರ್ಯವೋ, ಅಂತರ್ಮುಖಿ ವ್ಯಕ್ತಿತ್ವವೋ ಅಥವಾ ನಿಷ್ಠುರವಾಗಿ ಸತ್ಯಕ್ಕೆ ಕನ್ನಡಿ ಹಿಡಿಯುವ ವರಸೆಗೋ ಹಿರಿಯರು ಕಿರಿಯರಾದಿಯಾಗಿ  ಅವನೆಡೆಗೆ ಆಕರ್ಷಿತರಾಗಿರುತ್ತಾರೆ.  ಅವನ ಪ್ರಭಾವಕ್ಕೊಳಪಟ್ಟಿರುತ್ತಾರೆ. ತಮ್ಮಿಂದಾಗದ್ದನ್ನು ಅವನು ಸಾಧಿಸಿ ತೋರುತ್ತಾನೆಂಬ ನಿರೀಕ್ಷೆ. ಆದರೆ, ಇತ್ತ ಸತ್ಯನಿಗೆ ಈ ಆಶ್ರಮಗಳ ಆವರಣಗಳೂ ಸೀಮಿತವನಿಸತೊಡಗುತ್ತದೆ.  ಸಾಮಾಜಿಕ ಸೇವೆಯ ನೆಪದಲ್ಲಿ ಆಶ್ರಮಗಳು ಸಂಘ-ಸಂಸ್ಥೆಗಳಾಗಿ ಮಾರ್ಪಡುವುದು, ಆಶ್ರಮವನ್ನು ನಡೆಸುವವರು ಸಂಘಸಂಸ್ಥೆಗಳ ಆಡಳಿತ ಮಂಡಳಿಯಂತೆ, ನೌಕರರಂತೆ ವರ್ತಿಸುವದು, ಅವರೊಳಗೇ ಆಂತರಿಕ ವೈಮನಸ್ಸು, ಮತ್ಸರ, ಸ್ವಾರ್ಥ, ಒಳ ಜಗಳ –ನಾವೆಲ್ಲ ಮನೆ ಬಿಟ್ಟು ಏನೋ ಸಾಧಿಸುತ್ತೇವೆಂದು, ಸೇವೆ ಮಾಡಬೇಕೆಂದೂ ಬಂದದ್ದು ಇದಕ್ಕಾ ಅನಿಸುವಂತಹ ಆವರಣ. ಹಾಗೆಂದೇ ಅವನು ಅಲ್ಲೆಲ್ಲೂ ನಿಲ್ಲದೆ, ಯಾವುದಕ್ಕೂ ಅಂಟಿಕೊಳ್ಳದೆ ಒಂಟಿಯಾಗಿ ಅಲೆದಾಡುತ್ತಾನೆ.  ಆ ಅಲೆದಾಟದ ದಿನಗಳಲ್ಲಿ ಆತನ  ಹುಡುಕಾಟ ಮಹತ್ವದ ತಿರುವನ್ನು ಪಡೆದುಕೊಳ್ಳುತ್ತದೆ. 


ಕಾದಂಬರಿಯಲ್ಲಿನ ಕೆಲವು ಪಾತ್ರಗಳು ತಾವು ಸಾಗಿ ಬಂದ ದಾರಿಯನ್ನ ಅವಲೋಕಿಸಿಕೊಂಡಾಗ ಅವರ ಮನದೊಳಗೆ ನಡೆಯುವ ಜಿಜ್ಞಾಸೆಯ ಕೆಲವು ತುಣುಕುಗಳು ಇಲ್ಲಿವೆ:

[ಈ ಜಿಜ್ಞಾಸೆ ’ಆತ್ಮ ಸ್ವರೂಪ’ ದ ಕುರಿತಾದದ್ದಲ್ಲ. ಕಾದಂಬರಿಯೊಳಗೆ ನಡೆಯುವ ಮಂಥನವು ಬದುಕಿನ ಕುರಿತಾದದ್ದು, ಹೇಗೆ ಬದುಕಿದರೆ ಸಾರ್ಥಕವಾದಿತು, ಯಾವುದು ತೃಪ್ತಿದಾಯಕ ಬದುಕು? ಯಾವುದು ಹೆಚ್ಚು ಸಂತೋಷವನ್ನುಂಟು ಮಾಡುವ ಬದುಕು...ಈ ರೀತಿ]

“ತಾನು ತನ್ನದು ಎಂಬುದನ್ನೆಲ್ಲಾ ಬಿಟ್ಟುಬಿಡುವ ಸಂಕಲ್ಪವನ್ನು ಮಾಡಿ ಇಲ್ಲಿಗೆ ಬಂದಮೇಲೂ ಹ್ಯಾಗೆ ಅವೆಲ್ಲಾ ನಮಗೆ ಗೊತ್ತಿಲ್ಲದೇ ನಮ್ಮನ್ನೇ ಸುತ್ತಿಕೊಂಡಿರುತ್ತದೆ ಎನ್ನಿಸಿ ಒಳಗೆ ತುಂಬಿದ್ದ ಶೂನ್ಯ ಇನ್ನೂ ಗಾಢವಾಯಿತು. ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ, ದಂಭ, ದರ್ಪ, ಅಹಂಕಾರ, ಸ್ವಾರ್ಥ, ದ್ವೇಷಗಳನ್ನು ಬಿಡಬೇಕು ಅನ್ನೋದನ್ನೇ ದಿನವೂ ಬಂದವರಿಗೆಲ್ಲಾ ಹೇಳುತ್ತ ಬದುಕಿದರೂ ಅವು ನಮ್ಮ ಮನಸ್ಸಿನಲ್ಲಿಯೆ ಇಷ್ಟು ಆಟವಾಡುವಾಗ ಗೊತ್ತಾಗೋದೇ ಇಲ್ಲವಾ? ಅಥವಾ ಬೇರೆಯವರಿಗೆ ಹೇಳುವ ರಭಸದಲ್ಲಿ ನಮ್ಮನ್ನು ನಾವು ನೋಡಿಕೊಳ್ಳೋದನ್ನೇ ಮರೆತುಬಿಡ್ತೀವಾ?”

“ಬ್ರಹ್ಮಚಾರಿಗಳಲ್ಲದವರು ಪವಿತ್ರರೂ ಶುದ್ಧರೂ ಆಗೋದಕ್ಕೆ ಸಾಧ್ಯವಿಲ್ಲವಾ? ಬರೀ ವೀರ್ಯನಷ್ಟವಾಗದಂತೆ ಹೆಣಗಿ ಸತ್ತು ಬಿಟ್ಟರೆ ಬ್ರಹ್ಮಚರ್ಯ ಸಿದ್ದಿಸಿದಂತೆ ಆಗುತ್ತಾ? ತಂತ್ರ ಸಾಧಕರು ಸಾಧಕರಲ್ವ? ಬ್ರಹ್ಮಚರ್ಯದ ಅಹಂಕಾರವೂ ಸಾಧನೆಗೆ ವೈರಿ.”

“ಹ್ಞಾ...ಏನೂ ಗೊತ್ತಿಲ್ಲದೇ ಬರೀ ತ್ಯಾಗ ಮಾಡಿಬಿಟ್ಟೆ ಅಂದರೆ ಅದು ಹೋಗಿಬಿಡುತ್ತದಾ? ಯಾವುದನ್ನಾದರೂ ಬಿಡೋಕೆ ಮುಂಚೆ ಹಿಡೀಬೇಕು ಅದನ್ನ ತಿಳಕಳಿ, ನೀವು ಸುಖವನ್ನು ಬಿಟ್ಟಿರಿ ಮೋಹವನ್ನು ಇಟ್ಟುಕೊಂಡಿರಿ”

“ಇಷ್ಟೆಲ್ಲ ಸಾಧನೆಯಿಂದ ಸಾಧಿಸಲಾಗದ ವೈರಾಗ್ಯ ಒಂದು ಜೀವನಾನುಭವದಿಂದ ಬರೋದದರೆ ಬಂದುಬಿಡಲಿ ಎನ್ನಿಸಿ ಹೊರಟುಬಿಟ್ಟೆ.”

                                                                ***




ಫೋಟೋ: ಪ್ರಜ್ಞಾ
ಇಟ್ಟೆ. ಬಿಟ್ಟೆ. ಪಡೆದೆ.
ಏನಿಟ್ಟೆ? ಏನ್ ಬಿಟ್ಟೆ? ಏನ್ ಪಡೆದೆ?
ಎಲ್ಲ ಕಣ್ಕಟ್ಟೇ.

ಸ್ಥೂಲವಾಗಿ ಈ ಕಾದಂಬರಿ ಉನ್ನತ ಧ್ಯೇಯಗಳನ್ನು ಹೊತ್ತು ಅಥವಾ ಆ ಭ್ರಮೆಯಲ್ಲಿ ಸನ್ಯಾಸಿಗಳಾಗಿ ಮಠ ಸೇರಿದವರ ಬದುಕನ್ನು ಪರಾಮರ್ಶಿಸುತ್ತದೆಯಾದರೂ ಕಾದಂಬರಿಯ ಶೀರ್ಷಿಕೆಯೇ ಅದರ ಕಥಾವಸ್ತು ಎಂದರೆ ತಪ್ಪಾಗಲಿಕ್ಕಿಲ್ಲ. ನ್ಯಾಸ ಎಂಬ ಪದವು ನಾನಾ ಅರ್ಥಗಳನ್ನು ಒಳಗೊಂಡಿದೆ. ಕನ್ನಡದ ಜಾಲತಾಣವಾದ ’ಚುಕ್ಕುಬುಕ್ಕು”ವಿನಲ್ಲಿ ಈ ಪದದ ಅರ್ಥವ್ಯಾಪ್ತಿಯ ಬಗ್ಗೆ ಚರ್ಚೆಯಾಗಿತ್ತು.  ’ನ್ಯಾಸ’ ಎಂದರೆ ನೆಚ್ಚುಕೂಟ, ವಿಶ್ವಸ್ಥ ಮಂಡಳಿ, ಇಡಲ್ಪಟ್ಟದ್ದು, ಇಟ್ಟಿದ್ದು, ಕೇಳಿದಾಗ ಕೊಡುವಂತೆ ಹೇಳಿ ನಂಬಿಕೆಯಿಂದ ಕಾಪಾಡುವುದಕ್ಕಾಗಿ ಇನ್ನೊಬ್ಬರಲ್ಲಿ ಇಟ್ಟ ವಸ್ತು, ವಿಧಾನ, ರಚನೆ, ನಿತ್ಯ ಪೂಜೆಯ ವೇಳೆಗೆ ಮಂತ್ರಪೂರ್ವಕ ಅಂಗನ್ಯಾಸ ಮಾಡುವುದು, ವ್ಯಾಖ್ಯಾನ, ಭಾಷ್ಯ ಎಂದೆಲ್ಲ ಅರ್ಥೈಸಿಕೊಳ್ಳಬಹುದು.

ಕವಯತ್ರಿ ಲಲಿತಾ ಸಿದ್ದಬಸವಯ್ಯನವರು ಇನ್ನೊಂದು ಅರ್ಥವನ್ನು ಸೂಚಿಸುತ್ತಾರೆ. “ನ್ಯಾಸ ಅಂದರೆ ಇಟ್ಟುಬರೋದು, ಸಂ-ನ್ಯಾಸ ಅಂದರೆ ಆ ಇಟ್ಟಿದ್ದನ್ನ ಬಿಟ್ಟು ಬರೋದು ಅಂತ ತುಮಕೂರು ಹಿರೇಮಠದ ಸ್ವಾಮೀಜಿಯವರ ಪ್ರವಚನದಲ್ಲಿ ಕೇಳಿದ್ದೆ. ನಮ್ಮ ಹರೀಶರು ತಗೊಂಡಿರುವ ಸಬ್ಜೆಕ್ಟ್ ನೋಡಿದರೆ ಈ ಅರ್ಥದಲ್ಲೆ ಬಳಸಿರಬಹುದು ಅಂತ ಅನ್ನಿಸುತ್ತೆ.” ಕಾದಂಬರಿಯ ಮೊದಲ ಓದಿಗೆ ನನಗೆ ಸಿಕ್ಕ ಅನುಭವ ಈ ಅರ್ಥವ್ಯಾಪ್ತಿಗೆ ಸಂಬಂಧಪಟ್ಟದ್ದು.

ಸನ್ಯಾಸ’ ದೊಳಗಿನ  ’ನ್ಯಾಸ’ ಕ್ಕೆ ಬಿಡುವುದು, ತ್ಯಜಿಸುವುದು, ಪರಿತ್ಯಾಗ ಮಾಡುವುದು ಎಂಬ ಅರ್ಥವೂ ಇದೆ. ಅದನ್ನು ಸರಳಗೊಳಿಸಿ ಹೇಳುವುದಾದರೆ ಸಾಂಸಾರಿಕ ಕರ್ಮಗಳನ್ನು, ಬಂಧಗಳನ್ನು ಸಂಪೂರ್ಣವಾಗಿ ಬಿಟ್ಟು ಸಾಧಕರಾದವರು ಸನ್ಯಾಸಿಗಳು. ಗೆಳೆಯ ದತ್ತರಾಜ್ ’ನ್ಯಾಸ’ ಕ್ಕೆ ಮತ್ತೊಂದು ನಮನಿ ಅರ್ಥ ಕೊಟ್ಟರು. ನ್ಯಾಸ ವೆಂದರೆ ಒಂದರೊಳಗೊಂದು ಐಕ್ಯವಾಗುವುದು, ಲೀನವಾಗುವುದು ಅಂತಲೂ ಆಗುತ್ತದೆ ಅಂತ. ಈಗ ಆಚರಣೆಗಳಲ್ಲಿ ಅಂಗ ನ್ಯಾಸ, ಕರನ್ಯಾಸ ಮಾಡುವಾಗ, ಪ್ರತಿ ಮಂತ್ರಕ್ಕೆ ಒಂದೊಂದು ಅಂಗವನ್ನ ಸ್ಪರ್ಶಿಸುತ್ತಾರೆ. ಆ ಕ್ರಿಯಯೊಂದಿಗೆ ಸ್ಪರ್ಶಿಸಲ್ಪಟ್ಟ ಅಂಗ ಆ ಮಂತ್ರವೇ ಆಗುತ್ತದೆ, ಅಥವಾ ಮಂತ್ರದ ಸುಪ್ತ ಚೈತನ್ಯವೇ ತಾನಾಗುತ್ತದೆ. ಹೀಗೆ ಈ ಅರ್ಥದಲ್ಲಿ ತೆಗೆದುಕೊಂಡರೆ,  ನಿತ್ಯ ಬದುಕಿನ ಬಂಧಗಳನ್ನು ಬಿಟ್ಟ ಸಾಧಕರು ಆತ್ಯಂತಿಕ ಸತ್ಯ, ಆನಂದ ಅಥವಾ ಪರಮಾತ್ಮ ಅಂತೇನು ನಾವು ಕರೀತೇವೆ ಅದರೊಳಗೆ ಐಕ್ಯರಾಗುವ ಇಡೀ ಪ್ರಕ್ರಿಯೆಯೇ ಸನ್ಯಾಸ ಅಂತ ಅಂದುಕೊಳ್ಳಬಹುದು. ಬಂಧಗಳೆಂದರೆ  ಇಲ್ಲಿ ಮೋಹ, ಮದ, ಮತ್ಸರ, ದ್ವೇಷ, ಅಹಂಕಾರ, ಮಮಕಾರ ಇತ್ಯಾದಿ ಮಿತಿಗಳು ಎಂದು ಅರ್ಥ ಮಾಡಿಕೊಳ್ಳಬೇಕು.

ಆ ಚರ್ಚೆಯ ವೇಳೆಗೆ  ಕಾದಂಬರಿಕಾರರೇ ಹೇಳಿದಂತೆ ಅವರ ಕಾದಂಬರಿಯು ’ನ್ಯಾಸ’ ಎಂಬ ಪದ ಒಳಗೊಂಡಿರಬಹುದಾದ ಎಲ್ಲ ಅರ್ಥಮೂಲಗಳನ್ನೂ ಪರಿಶೋಧಿಸುತ್ತದೆ. ಇವತ್ತಿನ ಕಾಲಕ್ಕೆ ಪ್ರಸ್ತುತವೆನಿಸುವ ಪ್ರಶ್ನೆಗಳನ್ನು ಪಾತ್ರಗಳ ಮೂಲಕ ವಿಶ್ಲೇಷಿಸುತ್ತ, ನಿತ್ಯ ಬದುಕಿನ ಅನುಭವಕ್ಕೆ ಆ ಪ್ರಶ್ನೆಗಳ ಔಚಿತ್ಯವನ್ನು ಒರೆ ಹಚ್ಚಿ, ಜರಡಿ ಹಿಡಿದು ಅದರಲ್ಲಿ ಸಿಕ್ಕ ಜೊಳ್ಳು ಅಥವಾ ಗಟ್ಟಿ ವಿಚಾರಗಳನ್ನು ಓದುಗರ ಮುಂದಿಟ್ಟು ನೀವೇ ನಿರ್ಣಯಿಸಿ ಎನ್ನುವ ಈ ಕಾದಂಬರಿ, ಕಾದಂಬರಿಕಾರರೇ ಹೇಳುವಂತೆ ’ನ್ಯಾಸ’ ಪದದ ಅರ್ಥಾನ್ವೇಷಣೆಗೆ  ಸ್ವತಃ  ತಾನೇ ಒಂದು ಪ್ರಮಾಣವಾಗಿದೆ. 

ಹಿರಿಯ ವಿದ್ವಾಂಸರಾದ ಶತಾವಧಾನಿ ಆರ್ ಗಣೇಶ್ ರವರು ಬೆನ್ನುಡಿಯಲ್ಲಿ ಹೇಳಿದಂತೆ ನ್ಯಾಸವು ತನ್ನ ಕಥಾವಸ್ತುವನ್ನು ಯಾವದೇ “ಸರಳೀಕರಣ ಹಾಗೂ ಸಮಯಸಾಧಕತೆಯಿಲ್ಲದೆ”  ಶ್ರದ್ಧೆಯಿಂದ ವಿಶ್ಲೇಷಿಸುತ್ತದೆ. ಗಡಚು ತಾತ್ವಿಕತೆಯಿಂದ ಗೊಂದಲಕ್ಕೀಡು ಮಾಡುವುದಿಲ್ಲ. ಖಂಡಿತಕ್ಕೂ “ಕಾವ್ಯಾತ್ಮಕ ಬನಿ”ಯುಳ್ಳ ಭಾಷೆ.  ಇದು ಧಾವಂತದ ಓದಿಗಲ್ಲ. 

ಇದನ್ನು ಬರೆದ ಲೇಖಕರಿಗೆ ಅಷ್ಟೇ ೨೬ ರ ವಯಸ್ಸು ಅಂದರೆ ನಂಬಲಿಕ್ಕಾಗುವುದಿಲ್ಲ! ಇಂತಹದ್ದೊಂದು ಕಾದಂಬರಿಯನ್ನು ಕನ್ನಡಕ್ಕೆ ಕೊಟ್ಟ ಹರೀಶ ಹಾಗಲವಾಡಿಯವರಿಗೂ ಅದನ್ನು ಪ್ರಕಟಿಸಿದ ಛಂದ ಪುಸ್ತಕಕ್ಕೂ ಅಭಿನಂದನೆಗಳು.


ನ್ಯಾಸ
ಲೇಖಕರು: ಹರೀಶ ಹಾಗಲವಾಡಿ
ಪ್ರಕಾಶಕರು: ಛಂದ ಪುಸ್ತಕ


Tuesday, May 26, 2015

ಶ್ರೀಯುತ ಪಿಂಟೋ ಮತ್ತವರ ಪತ್ನಿಯ ಬಗ್ಗೆ ಹೇಳುವುದಾದರೆ...



ಅವರು ಎಷ್ಟು ನಿರುದ್ವಿಗ್ನರೆನಿಸುತ್ತಿದ್ದರೋ ಅಷ್ಟೇ ವಿಲಕ್ಷಣವೆನಿಸುತ್ತಿದ್ದರು. ಅವರ ಬಗ್ಗೆ ಹೇಳಲು ಹೊರಟರೆ..... ಕೊಲಾಬಾದ ಅವರ ಮನೆ ಕಣ್ಣ ಮುಂದೆ ಬರುತ್ತದೆ. ಮರದಂಕಣದ ಮನೆ. ಮನೆಗೊಂದು ವರಾಂಡ, ಆ ವೆರಾಂಡದ ಮೇಲೆ ಹರಡಿರುತ್ತಿದ್ದ ಬೋಗನ್ ವಿಲ್ಲಾದ ನೆರಳು ಮತ್ತು...ಎದುರಿಗೆ ಒಂದು ಚಿಕ್ಕ ಕರವಸ್ತ್ರದಳತೆಯ ಗಾರ್ಡನ್..... ಆ ಗಾರ್ಡನ್ನಿನಲ್ಲೊಂದು ಯಾರೂ ಉಪಯೋಗಿಸದಿದ್ದ  ಖಾಲಿ ಉಯ್ಯಾಲೆ,..

ಕೊಲಾಬದಲ್ಲಿ ಅವರಿದ್ದ ಮನೆಯ ಏರಿಯಾವನ್ನು ಪ್ರತಿ ವಾರಾಂತ್ಯದ ಮಧ್ಯಾಹ್ನಗಳಲ್ಲಿ ನೋಡಬೇಕು ನೀವು. ಕರ್ಫ್ಯೂ ವಿಧಿಸಿದ್ದಾರೇನೋ ಅನ್ನುವಷ್ಟು ನೀರವ. ಮಿಸ್ಟರ್ ಪಿಂಟೋ ದಂಪತಿಗಳಿಗೆ ಎಷ್ಟು ನೆನಪಿದೆಯೋ ಅಷ್ಟು ವರುಷಗಳ ಹಿಂದಿನಿಂದಲೂ ಅದು ಹೀಗೆಯೆ. ಲಾಗಾಯ್ತಿನಿಂದಲೂ ಹೀಗೆಯೇ. ಅಂತಿಪ್ಪ ರಜಾದಿನಗಳಲ್ಲಿ ಪಿಂಟೋ ದಂಪತಿಗಳು ಮಧ್ಯಾಹ್ನ ಎರಡರಿಂದ ನಾಲ್ಕರವರೆಗೆ ಜಗತ್ತಿನ ಮಟ್ಟಿಗೆ ಅದೃಶ್ಯರಾಗುತ್ತಿದ್ದರು. ಅದಾದ ನಂತರ ಒಂದಿಷ್ಟು ವಿಧ್ಯಾರ್ಥಿಗಳು ಒಬ್ಬೊಬ್ಬರಾಗೇ ಮನೆಯ ಮೆಟ್ಟಿಲೇರಲು ಶುರು ಮಾಡುತ್ತಿದ್ದರು. ಅವರೆಲ್ಲ ಪಿಂಟೋರವರ ಸಾರ್ವಜನಿಕ ಭಾಷಣ ಕಲೆಯ ಕ್ಲಾಸುಗಳ ವಿದ್ಯಾರ್ಥಿಗಳು. ನಾಲ್ಕು ಜನರ ಮುಂದೆ ನಿಂತು ಮಾತಾಡುವಾಗ ತಾವು ಹೇಗೆ ನಿಲ್ಲಬೇಕು, ತಮ್ಮ ಹಾವಭಾವ ಹೇಗಿರಬೇಕು, ಮುಖಚರ್ಯೆ ಹೇಗಿರಬೇಕು ಎಂಬುದನ್ನೆಲ್ಲ ಕರಗತ ಮಾಡಿಕೊಳ್ಳಲು ಬರುತ್ತಿದ್ದರು. ಅವರಿಗೆಲ್ಲ  ಜ್ಯೂಲಿಯಸ್ ಸೀಜರ್‌ನ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಮಾತಾಡಿದ ಬ್ರೂಟಸ್‌ನೆ ರೋಲ್ ಮಾಡೆಲ್. ಅವನ ಆತ್ಮಬಲವನ್ನು ತಾವು ಅಂತಸ್ಥಗೊಳಿಸಿಕೊಳ್ಳುವ ದಿನವನ್ನ ಎದುರು ನೋಡುತ್ತ......ಮೆಟ್ಟಿಲೇರುತ್ತಿದ್ದರು.

ಇಡೀ ಮುಂಬೈಯಲ್ಲಿ ಸಾರ್ವಜನಿಕ ಭಾಷಣ ಕಲೆಯ ಮಟ್ಟಿಗೆ ಹೇಳೋದಾದರೆ ಅದರ ಆಳ-ಅಗಲಗಳನ್ನು ತಿಳಿದವರು  ಮಿಸ್ಟರ್ ಪಿಂಟೋ ಒಬ್ಬರೇ ಆಗಿದ್ದರು. ಪೂರ್ಣ ಹೆಸರು ಮಿಸ್ಟರ್ ಡೇನಿಯಲ್ ಪಿಂಟೋ. ಬಿಸಿಲುಗಂದು ಬಣ್ಣದ ಮುಖ, ಯಾವತ್ತೂ ಹೇಗ್ ಹೇಗೋ ಇದ್ದವರಲ್ಲ. ಗಡ್ಡ-ಮೀಸೆ ಶೇವ್ ಮಾಡಿಕೊಂಡು ಠಾಕುಠೀಕಾಗಿ ಇರುತ್ತಿದ್ದರು.  ಯಾವಾಗಲೂ ಅವರು ಧರಿಸುತ್ತಿದ್ದುದು ಇಂಡಿಗೋ ನೀಲಿ, ಬೂದಾ ಇಲ್ಲವೆ ಕಡು ನೀಲಿ ಬಣ್ಣದ ಸೂಟ್. ಕೆಂಪು ಸಸ್ಪೆಂಡರ್ ಬೆಲ್ಟನ್ನು ಸಿಕ್ಕಿಸಿಕೊಂಡ ಪ್ಯಾಂಟು, ಅದರೊಳಗೆ ಟಕ್ ಮಾಡಿದ ಬಿಳಿ ಅಂಗಿ ಮತ್ತು  ಮಾಮೂಲು ಆಕ್ಷಫರ್ಡ್ ಟೈ -ಇವಿಷ್ಟಿಲ್ಲದೇ ಪಿಂಟೋರವರನ್ನು ಊಹಿಸಿಕೊಳ್ಳುವುದ ಅಸಾಧ್ಯವಾಗಿತ್ತು. ಕೆಲವೊಮ್ಮೆ ಮಾಮೂಲು ಟೈ ಬದಲಿಗೆ ಬೋ-ಟೈ ಇರುತ್ತಿತ್ತು. ಆವಾಗೆಲ್ಲ ಅವರು ಖುಷಿ ಖುಷಿ ಅನಿಸುತ್ತಿದ್ದರು. ಇವೆಲ್ಲದರ ಜೊತೆಗೆ ಮಿರಿ ಮಿರಿ ಮಿಂಚುವ ಹಾಗೆ ಚೆರ್ರಿ ಪಾಲಿಶ್ ಹಚ್ಚಿ ತಿಕ್ಕಿ-ತೀಡಿದ ಶೂಗಳು ಇರದಿದ್ದರೆ ವರ್ಣನೆ ಪೂರ್ಣವೆನಿಸುವುದಿಲ್ಲ.

ಅವರ ಮಡದಿ ಶ್ರೀಮತಿ ಮಾರ್ಗರೆಟ್ ಪಿಂಟೋ. ಅವರ ಗಂಡನಿಗಿಂತಲೂ ತುಸು ಎತ್ತರದ ಆಳ್ತನ. ಭುಜಮಟ್ಟ ಇದ್ದ ಕೂದಲನ್ನ ತುಸು ಹಿಂದಕ್ಕೆ ಏರಿಸಿ ಪಫ್ ಮಾಡಿಕೊಳ್ಳುತ್ತಿದ್ದರು. ವಯೋಮಾನಕ್ಕೆ ತಕ್ಕಂತೆ ಬಿಳಿಯಾದ ಕೂದಲಿಗೆ ಸಮೀಪದ ಪಾರ್ಲರ್ ಒಂದರಲ್ಲಿ ಆವಾಗಾವಾಗ ಬಣ್ಣ ಹಾಕಿಸಿಕೊಳ್ಳುತ್ತಿದ್ದರು. ಈಜಿಪ್ಶಿಯನ್ ಶೈಲಿಯ ಉದ್ದನೆಯ  ಸ್ಕರ್ಟ ಮತ್ತು ಅದರ ಮೇಲೆ ಸಾಮಾನ್ಯವಾಗಿ ಕಂದು ಅಥವಾ ಅದಕ್ಕೆ ಸಮೀಪದ ರಂಗಿನ ಹೆಣಿಕೆಯ ಅಂಗಿಗಳನ್ನ ತೊಡುತ್ತಿದ್ದರು. ವಾರಾಂತ್ಯಗಳಲ್ಲಿ ಹೆಚ್ಚು ಆರಾಮವೆನಿಸುವ ಮನೆಯುಡುಪುಗಳನ್ನ ಇಷ್ಟ ಪಡುತ್ತಿದ್ದರು, ಸ್ಲ್ಯಾಕ್ಸ ಮತ್ತು ಮೇಲೊಂದು ಅಳ್ಳಕವಾದ ಕಸೂತಿ ಅಂಗಿ, ಅದಿಲ್ಲದೇ ಇದ್ದರೆ ನೆಲ ಗುಡಿಸಿಕೊಂಡು ಹೋಗುವಷ್ಟು ಉದ್ದವಿದ್ದ ಬಾಟಿಕ್ ಪ್ರಿಂಟಿನ ಕಫ್ತಾನ್ [ಅಳ್ಳಕವಾದ ನಿಲುವಂಗಿ] ತೊಟ್ಟಿರುತ್ತಿದ್ದರು.

ಪಿಂಟೋರವರು ಸಣಕಲು ಆಸಾಮಿ, ಆದರೆ ಅವರ ಪತ್ನಿ ಅವರ ಎರಡರಷ್ಟು ದಪ್ಪವಿದ್ದರು. ದಪ್ಪ ಇರೋದು ಅಥವಾ ತೆಳ್ಳಗಿರೋದು ಕೆಲವೊಮ್ಮೆ ಆನುವಂಶಿಕವಾಗಿರುತ್ತದೆ ಬಿಡಿ. ಮನೆಯೊಳಗೆ ಪತ್ನಿಯ ತೂಕದ ಕುರಿತು ಪಿಂಟೋರವರು ರೇಗಿಸುತ್ತಲೇ ಇರುತ್ತಿದ್ದರು. ಆದರೆ ವಿಧ್ಯಾರ್ಥಿಗಳೆದುರು ಎಚ್ಚರ ವಹಿಸುತ್ತಿದ್ದರು. ವೃತ್ತಿ ಮರ್ಯಾದೆಯನ್ನ ಕಾಪಾಡಿಕೊಳ್ಳಬೇಕಲ್ಲ ಅದಕ್ಕೆ. ಕೊನೆಯ ಕಾಲಕ್ಕೆ ತಾನು ಗೋವಾಕ್ಕೆ ಮರಳುತ್ತೇನೆ ಎಂದವರೆಂದರೆ, ಅವರ ಪತ್ನಿ ಇಲ್ಲ ಪುಣೆಗೆ ಹೋಗೋಣ ಎನ್ನುತ್ತಿದ್ದರು. “ಡಿಯರ್, ಈಗ ಎಲ್ಲರೂ ಪುಣೆಗೆ ಹೋಗಿರಲು ಇಷ್ಟಪಡುತ್ತಾರೆ, ಗೊತ್ತಾ?”  ಪಿಂಟೋರವರಿಗೆ ಅದು ಸರಿ ಬರುತ್ತಿರಲಿಲ್ಲ. ’ಎಲ್ಲರೂ ಎಂದರೆ...ಯಾರೆಲ್ಲರೂ? ಏನು ಹಂಗಂದ್ರೆ?” ಆಗ ಅವರ ಪತ್ನಿ ಕುಡಿಗಣ್ಣಲ್ಲಿಯೇ ಕೆಂಡ ಕಾರುತ್ತ ’ಡ್ಯಾನಿ, ಸಾಕು ಸಾಕು...ನಿಮಗೆ ಗೊತ್ತಿಲ್ವಾ’ ಎನ್ನುವಂತ ನೋಟ ಬೀರಿದರೆ ಸಾಕು ಪಿಂಟೋ ಮುಂದುವರೆಸುತ್ತಿರಲಿಲ್ಲ. ’ಹೌದಮ್ಮ. ನೀನು ಹೇಳೋದು ಗೊತ್ತಾಯ್ತು. ನಿವೃತ್ತಿಯ ನಂತರ ಎಲ್ಲಿರಬೇಕು, ಏನು-ಎತ್ತ ಎಂಬುದರ ಬಗ್ಗೆ ಈಗಿನಿಂದಲೇ ಗಂಭೀರವಾಗಿ ಯೋಚಿಸಿ ಎಲ್ಲ ತಯಾರಿ ಮಾಡಬೇಕು.’ ಅನ್ನುತ್ತ, ಪತ್ನಿಯ ಮಾತಿಗೆ ಸಮ್ಮತಿ ಸೂಚಿಸುತ್ತಿದ್ದರು.  

ತರಗತಿಯಲ್ಲಿ ಪ್ರತಿ ಅಕ್ಷರ,  ಪ್ರತಿ ಸ್ವರ, ಪ್ರತಿ ಮಾತ್ರೆಯನ್ನೂ ಕರಾರುವಕ್ಕಾಗಿ ಉಚ್ಚರಿಸಬೇಕಿತ್ತು.  ಆ ಮಟ್ಟಿಗೆ ಅವರು ಪ್ರೊಫೆಸರ್ ಹಿಗ್ಗಿನ್ಸ್ ರವರೇ.  ಅವರ ಪತ್ನಿಯೂ ಅವರಷ್ಟೇ ಕರಾರುವಕ್ಕಾಗಿ ಇಂಗ್ಲೀಷ್ ಮಾತಾಡುತ್ತಿದ್ದರು. ಪಿಂಟೋರವರ ಉಚ್ಚಾರ ನೂರಕ್ಕೆ ನೂರು ಪ್ರತಿಶತ ಬ್ರಿಟಿಷ್, ಲಂಡನ್ ಟೈಮ್ಸಿನ ಇಂಗ್ಲೀಷ್ ಕೂಡ ಅವರ ಇಂಗ್ಲೀಷ್ ಮುಂದೆ ಏನೂ ಅಲ್ಲ. ಅವರ ಪದೋಚ್ಚಾರಣೆಯ ಏರಿಳಿತ ಪಕ್ಕಾ ಬ್ರಿಟಿಷ್ ಅನಿಸುತ್ತಿತ್ತು. ಅವರ ಉಚ್ಚಾರಣೆಯ ಸ್ಪಷ್ಟತೆ ಮತ್ತು ಅವರ ಶಿಕ್ಷಣದ ಬಗ್ಗೆ ಯಾರೂ ಬೊಟ್ಟು ಮಾಡುವಂತಿರಲಿಲ್ಲ. ಹಾಗೇನಾದರೂ ಸಂಶಯಿಸಿದವರು ನರಕಕ್ಕೆ ಹೋಗಬೇಕಾದೀತು. ಅವರು ಹುಟ್ಟತಾನೇ ಎಲ್ಲ ಕಲಿತು ಬಂದಿದ್ದಾರೇನೋ ಅನ್ನುವಷ್ಟು ಸುಲಲಿತ ಭಾಷೆ ಮತ್ತು ನಡೆನುಡಿ ಮತ್ತು ಹುಟ್ಟಾ ಸಂಭಾವಿತರು.
ಶ್ರೀಯುತ ಪಿಂಟೋ ದಂಪತಿಗಳು ತಮ್ಮ ಬದುಕಿನ ಬಗ್ಗೆ ಮತ್ತು ಜಗದ ರೀತಿಯ ಬಗ್ಗೆ ಯಾವುದೇ ತಂಟೆ ತಕರಾರುಗಳಿಲ್ಲದೆ ತಮ್ಮಷ್ಟಕ್ಕೆ ತಾವು ನೆಮ್ಮದಿಯಿಂದ ಇದ್ದಂತ ದಂಪತಿಗಳು. ತಾಜಾ ಮೋಸಂಬಿ ರಸ, ಕಾರ್ನ್ ಫ್ಲೇಕ್ಸ್, ಬೇಯಿಸಿದ ಮೊಟ್ಟೆ ಮತ್ತು ನೀಲಗಿರಿ ಚಹಾವನ್ನೊಳಗೊಂಡ ಬೆಳಗಿನ ಉಪಹಾರ ಮರದ ಕೆತ್ತನೆಯಿರುವ ಪುಟ್ಟ ಮೇಜಿನ ಮೇಲೆ ನಡೆಯುತ್ತಿತ್ತು. ಅವರ ಮನೆಯ ಇನ್ನೊಬ್ಬ ಸದಸ್ಯನಾದ ಟೆಡ್ಡಿ, ಮುದಿ ಲ್ಯಾಬ್ರಡಾರ್ ತನ್ನ ಪಾಲಿನ ಟೋಸ್ಟಿನ ಸಲುವಾಗಿ ಅವರ ಪ್ರಾರ್ಥನೆಯೆಲ್ಲ ಮುಗಿಯುವವರೆಗೆ ಸಹನೆಯಿಂದ ಕಾಯುತ್ತ ಕುಳಿತಿರುತ್ತಿತ್ತು, ಮಧ್ಯಾಹ್ನದ ಊಟ ಸರಿಯಾಗಿ ಒಂದು ಗಂಟೆಗೆ ಹಾಗೂ ರಾತ್ರಿಯ ಊಟ ಸರಿಯಾಗಿ ಎಂಟು ಗಂಟೆಗೆ ಆಗಬೇಕು, ಕ್ರಿಸ್ಮಸ್ ವೇಳೆಗೆ ಶ್ರೀಯುತ ಪಿಂಟೋರವರಿಗೆ ಸ್ಕಾಚ್ ಮತ್ತು ಶ್ರೀಮತಿ ಪಿಂಟೋಗೆ ಒಂದೆರಡು ಗುಟುಕು ಶೆರಿ ಆಗಲೇಬೇಕಿತ್ತು. ತಿಂಗಳಿಗೊಮ್ಮೆ ತೋಳಿಗೆ ತೋಳು ಸೇರಿಸಿ ಒಪೆರಾ ನೋಡಲು ಹೋಗುತ್ತಿದ್ದರು. ಅಥವಾ ಯಾವುದಾದರೂ ಪಾಶ್ಚಿಮಾತ್ಯ ಸಂಗೀತದ ಕಛೇರಿ ಯಾದರೂ ಆದೀತು ಇಲ್ಲವೇ ಜೆ.ಜೆ. ಕಲಾಮಂದಿರದಲ್ಲಿ ಯಾರದ್ದಾದರೂ ಚಿತ್ರಗಳ ಪ್ರದರ್ಶನವಿದ್ದರೂ ಆದೀತು.

ಅವರ ತರಗತಿಗಳು ವಾರಾಂತ್ಯದಲ್ಲಿ ಮಾತ್ರ ಇರುತ್ತಿದ್ದವು. ಅದೂ ಎಲ್ಲರಿಗೂ ಮುಕ್ತ ಪ್ರವೇಶವಿರಲಿಲ್ಲ.  ವಿದ್ಯಾರ್ಥಿಗಳನ್ನು ಸಂದರ್ಶನದ ಮೂಲಕ ಆರಿಸಿ, ಯಾರಿಗೆ ನಿಜವಾಗಿಯೂ ವಿಶೇಷ ತರಗತಿಗಳ ಅಗತ್ಯವಿದೆಯೋ ಅದನ್ನು ಕೂಲಂಕುಶವಾಗಿ ಪರಿಶೀಲಿಸಿ, ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಎಷ್ಟರಮಟ್ಟಿಗೆ ಶ್ರದ್ಧೆ ಇದೆ ಮತ್ತು ಅವರೆಷ್ಟು ಪ್ರಾಮಾಣಿಕವಾಗಿ ಅದರಲ್ಲಿ ತೊಡಗಿಸಿಕೊಳ್ಳಬಲ್ಲರು, ಕಲಿಯಲೇಬೇಕೆಂಬ ತೀವ್ರ ಆಸಕ್ತಿ ಎಷ್ಟಿದೆ ಎಂಬುದನ್ನೆಲ್ಲ ಗಮನಿಸಿ ಆ ಆಧಾರದ ಮೇರೆಗೆ ಅವಕಾಶ ನೀಡಲಾಗುತ್ತಿತ್ತು. ವಾರದ ದಿನಗಳಲ್ಲಿ ಪಿಂಟೋ ಇಂಡೋ-ಅಮೇರಿಕನ್ ಸೊಸೈಟಿಯಲ್ಲಿನ ವಿದ್ಯಾರ್ಥಿಗಳಿಗೆ ತರಬೇತು ನೀಡಲು ಹೋಗುತ್ತಿದ್ದರು. ಕೆಲವೊಮ್ಮೆ ಆ ತರಗತಿಗಳು ಫೋರ್ಟ್‌ ಏರಿಯಾದಲ್ಲಿ [ದಕ್ಷಿಣ ಮುಂಬೈನ ಫೋರ್ಟ್ ಜಾರ್ಜ್] ಅಥವಾ ತಾಜ್ ಮಹಲ್ ಹೊಟೆಲ್ಲಿನವರು ಬಿಟ್ಟುಕೊಟ್ಟಿದ್ದ ಕಾನ್‌ಫರೆನ್ಸ್ ಹಾಲಿನಲ್ಲಿ ನಡೆಯುತ್ತಿದ್ದವು. ಅವರ ಹೆಂಡತಿ ಒಂದಿಷ್ಟು ಶಾಲೆಗಳಿಗೆ ಪಿಯಾನೋ ಕಲಿಸಲು ಹೋಗುತ್ತಿದ್ದರು.

ವಾರಾಂತ್ಯದ ತರಗತಿಗಳಿಗೆ ಪ್ರವೇಶ ಪಡೆಯುವುದು ಸುಲಭವಿರಲಿಲ್ಲ. ಒಂದು ಬ್ಯಾಚಿಗೆ ಹತ್ತೆಂದರೆ ಹತ್ತೇ ವಿದ್ಯಾರ್ಥಿಗಳಿಗೆ ಅವಕಾಶವಿರುತ್ತಿತ್ತು.  ತರಗತಿಗಳು ಕೊಲಾಬಾದ ಅವರ ಮನೆಯಲ್ಲಿ ನಡೆಯುತ್ತಿದ್ದವು. ಅವು ಸುಮ್ಮನೇ ಮನೆಯಲ್ಲಿ ಹೊತ್ತು ಹೋಗದೇ ಬಂದು ಕುಳಿತುಕೊಳ್ಳುವ ಹವ್ಯಾಸಿ ತರಗತಿಗಳಾಗಿರಲಿಲ್ಲ. ಶ್ರೀಯುತ ಪಿಂಟೋ ಒಳ್ಳೇ ಶಿಸ್ತಿನ ಸಿಪಾಯಿ. ವಿದ್ಯಾರ್ಥಿಗಳನ್ನು ಸರಿಯಾಗಿ ದುಡಿಸಿಕೊಳ್ಳುತ್ತಿದ್ದರು.  ಏನು ಮಹಾ ಯಕಶ್ಚಿತ್ ಒಂದು ಟ್ಯೂಶನ್ ಕ್ಲಾಸಿನ ಶಿಕ್ಷಕ, ನಾವು ಫೀಸ್ ಕೊಟ್ಟರೆ ತಾನೇ ಅವನ ತರಗತಿಗಳು ನಡೆಯುವುದು ಎಂಬ ಉಡಾಳರಿಗೆ ಅಲ್ಲಿ ಜಾಗವಿರಲಿಲ್ಲ. ಅವರ ನೀತಿ ಸಂಹಿತೆಯಲ್ಲಿ ಅಲ್ಪಪ್ರಾಣ, ಮಹಾಪ್ರಾಣಗಳಿಗೆ ಎಷ್ಟು ಪ್ರಾಮುಖ್ಯತೆ ಇತ್ತೋ ಅಷ್ಟೇ ಪ್ರಾಮುಖ್ಯತೆ ಶಿಸ್ತಿನ ನಡವಳಿಕೆಗೂ ಇತ್ತು. ಇದಕ್ಕೆ ಸಂಬಂಧಿಸಿ ಒಂದು ಘಟನೆ ಇದೆ. ಒಮ್ಮೆ ಏನಾಯಿತೆಂದರೆ, ಒಬ್ಬ ಶ್ರೀಮಂತರ ಮನೆಯ ಹುಡುಗ ಬಹುಶಃ ಗಾಂಜಾವನ್ನು ಚೆನ್ನಾಗೇ ಏರಿಸಿಕೊಂಡಿದ್ದ ಅಂತ ಕಾಣುತ್ತದೆ, ಅದರ ಅಮಲಿನಲ್ಲಿ ಹುಚ್ಚುಚ್ಚಾಗಿ ಆಡತೊಡಗಿದ. ಮೇಷ್ಟ್ರನ್ನು ಅವಾಚ್ಯ ಶಬ್ಧಗಳಲ್ಲಿ ನಿಂದಿಸತೊಡಗಿದ. ನೀವೊಬ್ಬ ದಗಾಕೋರರು, ಹಾಗೆ ಹೀಗೆ ಎಂದೆಲ್ಲ. ಮಿಸ್ಟರ್ ಪಿಂಟೋ ನಿಧಾನವಾಗಿ ಎದ್ದು ಬಂದು ನಗುತ್ತ ಅವನ ಕಿವಿ ಹಿಡಿದೆಳೆದುಕೊಂಡು ಬಾಗಿಲವರೆಗೆ ಕರೆದೊಯ್ದು,“ ಒಳ್ಳೇದು ಕಣಪ್ಪ. ನೀನಿನ್ನು ದಯಮಾಡಿಸು. ನಿನ್ನ ಫೀಸನ್ನು ಅಂಚೆಯ ಮೂಲಕ ಹಿಂದಿರುಗಿಸಲಾಗುವುದು” ಎಂದು ಹೇಳಿ ಸ್ವಸ್ಥಾನಕ್ಕೆ ಹಿಂದಿರುಗಿದರು. ಮುಖದಲ್ಲಿ ನಗೆ ಮಾಸಿರಲಿಲ್ಲ. ಮರಳಿದವರು ಒಮ್ಮೆ ಕೈಕೊಡವಿ ಏನೂ ಆಗದವರಂತೆ ನಮ್ಮನ್ನೆಲ್ಲ ನೋಡುತ್ತ ಕೇಳಿದ್ದರು “ಸರಿ, ಎಲ್ಲಿದ್ವಿ ನಾವು?”

ನಾನು ವಾರಕ್ಕೆ ಮೂರುದಿನಗಳ ಕೋರ್ಸಿಗೆ ಪ್ರವೇಶ ಪಡೆದಿದ್ದೆ. ಅದು ಫೋರ್ಟ್ ಏರಿಯಾದಲ್ಲಿದ್ದ ಇಂಡೋ-ಅಮೆರಿಕನ್ ಸೊಸೈಟಿಯ ಹವಾನಿಯಂತ್ರಿತ ಕೊಠಡಿಯಲ್ಲಿ ನಡೆಯುತ್ತಿತ್ತು. ಒಂದು ಅಂಡಾಕೃತಿಯ ಮೇಜಿನ ಸುತ್ತ ನಾವು ಸುಮಾರು ಮೂವತ್ತರಿಂದ ಮೂವತ್ತೈದು ಜನ, ಮಾತಾಡುವುದೇ ದೊಡ್ಡ  ಸವಾಲಾದ ಮಂದಿ ಕೂರುತ್ತಿದ್ದೆವು. ಒಂದರ್ಥದಲ್ಲಿ ನಮ್ಮನ್ನು ವಾಕ್‌ಶಕ್ತಿಹೀನರೆಂದರೂ ಆದೀತು. ಹಾಗೆ ಸವಾಲಾದವರದ್ದು ಒಬ್ಬೊಬ್ಬರದು ಒಂದೊಂದು ಕತೆ. ಆಗಷ್ಟೇ ಪ್ರತಿಷ್ಠಿತ ಕಾಲೇಜುಗಳಲ್ಲಿ ಮ್ಯಾನೇಜ್ ಮೆಂಟ್ ಪದವಿ ಮುಗಿಸಿ ಹೊರಬಿದ್ದವರು, ಹೊಸದಾಗಿ ನೌಕರಿ ಸೇರಿದವರು ತಮ್ಮ ತಮ್ಮ  ವಾಕ್ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸೇರಿದ್ದರು. ಒಂದಿಷ್ಟು ಮಂದಿ ಗೃಹಿಣಿಯರೂ ಇದ್ದರು. ಗಂಡಂದಿರೆಲ್ಲ ಸ್ವಂತ ವ್ಯಾಪಾರ ವಹಿವಾಟು ಉಳ್ಳವರೆಂದು ಕಾಣುತ್ತದೆ, ಅವರ ಕಛೇರಿಗಳಿಗೆ ಬರುವ ಗ್ರಾಹಕರ ಜೊತೆ ಇಂಗ್ಲೀಷಿನಲ್ಲಿ ನಿಭಾಯಿಸಬೇಕಾದ್ದರಿಂದ ಅವರೆಲ್ಲ  ಮಾತಿನ ಹಿಕ್ಮತ್ತನ್ನು ಕಲಿಯಲು ಸೇರಿದ್ದರು. ನಲವತ್ತರ ಆಸುಪಾಸಿನಲ್ಲಿದ್ದ ಒಬ್ಬ ಮಧ್ಯವಯಸ್ಕ, ಒಳ್ಳೇ ಕಾಸು ಕೂಡಿಟ್ಟವರೆಂದು ತೋರುತ್ತದೆ, ಇನ್ನಷ್ಟು ಸೊಗಸುಗಾರಿಕೆಯನ್ನು ಸಂಪಾದಿಸಲು ಸೇರಿದ್ದರು. ನಾನೂ ಅಲ್ಲಿದ್ದೆ. ಹದಿಮೂರು-ಹದಿನಾಲ್ಕರ ವಯಸ್ಸಿನ ತರುಣ...ಒಬ್ಬ ಗಂಡಸಾಗಬೇಕೆಂದು ಬಯಸುತ್ತ,.. ಅದನ್ನೇ ಎದುರು ನೋಡುತ್ತ,.. ಅದಕ್ಕಾಗಿ ತವಕದಿಂದ ಪ್ರಾರ್ಥಿಸುತ್ತ...

ಅಲ್ಲಿ ಸೇರುವ ವೇಳೆಗಾಗಲೇ ನನಗೆ ನನ್ನ ಹೆಣ್ಣಿಗತನದ ಬಗ್ಗೆ ಅರಿವುಂಟಾಗಿತ್ತು. ಜೊತೆಗೆ ಅಗತ್ಯಕ್ಕಿಂತಲೂ ಜಾಸ್ತಿಯಾಗಿ ಹೇರಿಕೊಂಡಿದ್ದ  ಬೊಜ್ಜು ಈಗಾಗಲೇ ಇದ್ದ ಮುಜುಗುರವನ್ನ ಇಮ್ಮಡಿಗೊಳಿಸಿತ್ತು. ಆ ವಾಸ್ತವವನ್ನು ಮರೆಯಲೆತ್ನಿಸಿದರೂ ಪ್ರತಿದಿನ ನೆನಪು ಮಾಡಿಕೊಡಲು ನನ್ನ ಸ್ನೇಹಿತರು, ಸಹಪಾಠಿಗಳು ಸದಾ ಸನ್ನದ್ಧರಾಗಿರುತ್ತಿದ್ದರು. ಎಲ್ಲರೂ ನನ್ನನ್ನು ’ಫ್ಯಾಟೀ’ ಎಂದೇ ಕರೆಯುತ್ತಿದ್ದರು. ಅದಿಲ್ಲದಿದ್ದರೆ ’ಪ್ಯಾನ್ಸಿ’. ಒಮ್ಮೊಮ್ಮೆ ಎರಡೂ ಬಳಕೆಯಾಗುತ್ತಿತ್ತು. ’ಗೇ’ [ಸಲಿಂಗಿ] ಅನ್ನುವ ಪದವಿನ್ನೂ ಎಲ್ಲೆಡೆ ಬಳಕೆಗೆ ಬಂದಿರಲಿಲ್ಲ.

ಬೀದಿಯಲ್ಲಿ ಹುಡುಗರ ಜತೆ ಕ್ರಿಕೆಟ್ಟಾಟ ಆಡುವದಕ್ಕಿಂತ  ಹುಡುಗಿಯರೊಂದಿಗೆ ಕುಂಟಬಿಲ್ಲೆ ಆಡುವುದನ್ನ ಹೆಚ್ಚು ಇಷ್ಪಡುತ್ತಿದ್ದೆ. ಶಾಲೆಯ ಫುಟ್ಬಾಲ್ ತಂಡಗಳಿಗಂತೂ ಸೇರುವ ಪ್ರಶ್ನೆಯೆ ಇರಲಿಲ್ಲ. ಆದರೇನಂತೆ? ನನ್ನ ಅಮ್ಮನಿಗೆ ನನ್ನಲ್ಲಿ ಯಾವ ದೋಷವೂ ಕಂಡಿರಲಿಲ್ಲ, ಅವಳ ಪ್ರೀತಿ ಕಿಂಚಿತ್ತೂ ಕಮ್ಮಿಯಾಗಲಿಲ್ಲ. ಅಪ್ಪನಿಗೂ ಅವೆಲ್ಲ ಸಮಸ್ಯೆಯಾಗಲಿಲ್ಲ. ಅಪ್ಪ ಅಂದರೆ ಸುರಲೋಕದಿಂದಿಳಿದ ದೇವತೆಯೇ ಎನಿಸುವಷ್ಟು ಒಳ್ಳೆಯವನು. ಅಪ್ಪ- ಅಮ್ಮ ಇಬ್ಬರೂ ಮದುವೆಯಾದಾಗ ಹೆಚ್ಚುಕಮ್ಮಿ ಮದುವೆಯ ವಯಸ್ಸು ಮೀರಿತ್ತು. ನಾನು ಹುಟ್ಟಿದ್ದೂ ಅಪ್ಪನಿಗೆ ನಲವತ್ತಾದ ನಂತರವೇ. ಅವನು ನನಗೆ ಅಪ್ಪ ಮತ್ತು ಅಜ್ಜ ಎರಡೂ ಆಗಿದ್ದ, ಟು ಇನ್ ಒನ್.

ನಾನ್ಯಾಕೆ ಹೀಗಾದೆ ಅನ್ನುವುದಕ್ಕೆ ಸುಲಭವಾಗಿ ಒದಗಿ ಬರುವ ಕಾರಣವೆಂದರೆ ಮನೆಯಲ್ಲಿನ ವಿಪರೀತ ಮುದ್ದು. ನನ್ನ ಅಪ್ಪ-ಅಮ್ಮ ನನ್ನನ್ನು ಅಗತ್ಯಕ್ಕಿಂತ ಜಾಸ್ತಿಯಾಗಿ ಕಾಪಿಡುತ್ತಿದ್ದರು. ಅತಿ ಅನಿಸುವಷ್ಟು ಕಾಳಜಿ. ಶಾಲೆಯಲ್ಲಿ ಯಾರಾದರೂ ನನ್ನನ್ನು ಚುಡಾಯಿಸಿದರೆ ಅಥವಾ ಗೇಲಿ ಮಾಡಿದರೆ ನನ್ನಮ್ಮ ನನ್ನನ್ನು ಬರಸೆಳೆದು ಮುತ್ತಿಕ್ಕಿ ಮುಜುಗುರ ಮಾಡುತ್ತಿದ್ದಳು. ಗೂಡೊಳಗೇ ಬಚ್ಚಿಟ್ಟು ಕಾವ ಒಬ್ಬನೇ ಮಗ ಮುದ್ದು ನಾನಾಗಿದ್ದೆ, ಅಪ್ಪ-ಅಮ್ಮ ಇಬ್ಬರೂ ಒಮ್ಮತಕ್ಕೆ ಬಂದು ನನ್ನನ್ನು ಪಂಚಗಣಿಯ ಬೋರ್ಡಿಂಗ್ ಶಾಲೆಗೆ ಸೇರಿಸುವ ನಿರ್ಣಯ ತೆಗೆದುಕೊಂಡರು. ಅಲ್ಲಿಯ ವಾತಾವರಣಕ್ಕೆ ನಾನು ಗಟ್ಟಿಯಾದರೂ ಆಗಬಹುದೆಂಬ ಆಸೆಯಿತ್ತೇನೋ. ಅದೊಂದು ಮಹಾದುರಂತವಾಯಿತು. ಆ ಶಾಲೆಯ ಬಹುತೇಕ ಮಕ್ಕಳ ಪಾಲಕರಲ್ಲಿ ಒಂದೋ ಅಪ್ಪ ತೀರಿಕೊಂಡಿರುತ್ತಿದ್ದರು, ಇಲ್ಲ ಅಮ್ಮ.  ಅಥವಾ ಇಬ್ಬರ ವಿಚ್ಛೇದನವಾಗಿದ್ದಿರುತ್ತಿತ್ತು. ವಿಚ್ಛೇದನಕ್ಕೂ ಮುನ್ನ ಅಪ್ಪ ಅಮ್ಮನ ಮಧ್ಯೆ ನಡೆದ ಕಹಿ ಪ್ರಸಂಗಗಳನ್ನೂ, ಹೊಗೆಯಾಡುವ ವೈಷಮ್ಯವನ್ನೂ ಈ ಮಕ್ಕಳು ನೋಡಿದ್ದವು. ನನಗೆ ಅಂತಹ ಅನುಭವವೇನೂ ಆಗಿರಲಿಲ್ಲ. ನನಗೇನಾದರೂ ಸಮಸ್ಯೆಗಳಿದ್ದವು ಎಂದರೆ ಅವು ನನ್ನ ವ್ಯಕ್ತಿತ್ವದ ನ್ಯೂನತೆಗಳನ್ನು ಕುರಿತೇ ಆಗಿದ್ದವು.

ಪಂಚಗಣಿಯ ಶಾಲೆಯನ್ನು ಸೇರಿದ ಕೆಲವು ದಿನಗಳಲ್ಲಿಯೇ ನನಗೆ ಸಾಯುವಷ್ಟು ಬೇಸರ ಬಂದಿತ್ತು. ಶೌಚಾಲಯದಲ್ಲಿ ನನ್ನನ್ನಿಟ್ಟು ಸತತ ಎರಡು ದಿನ ರಯಾಗಿಂಗ್  (ragging)  ಮಾಡಿದ್ದರು. ನನ್ನ ಪರಿಸ್ಥಿತಿ ಶೋಚನೀಯವಾಗಿತ್ತು. ಊಟ ತಿಂಡಿ ಮಾಡಲಾಗುತ್ತಿರಲಿಲ್ಲ, ನೀರು ಕುಡಿಯಲೂ ಆಗುತ್ತಿರಲಿಲ್ಲ.  ಟೀನಾ ಮತ್ತು ಚಿಂಕೀ ಕಪಾಡಿಯಾ ಕೂಡ ಅದೇ ಶಾಲೆಯಲ್ಲಿ ಓದುತ್ತಿದ್ದರು. ನನ್ನ ಸಂಕಷ್ಟವನ್ನು ನೋಡಲಾಗದೇ ಟೀನಾ ಸಲಹೆ ಇತ್ತಿದ್ದಳು, ’ನಿನಗೆ ಖುಷಿ ಇಲ್ಲದಿದ್ದ ಮೇಲೆ ಇಲ್ಯಾಕೆ ಇದ್ದೀ? ಇದು ನಿನ್ನ ಬದುಕು, ನೀನು ನಡೆಸಬೇಕು. ಓಡೋಗು ಇಲ್ಲಿಂದ’ ಎಂದಿದ್ದಳು.

ನಾನು ಅದನ್ನೇ ಮಾಡಿದ್ದೆ. ತತ್ ಕ್ಷಣ ಮುಂಬೈಗೆ ಹೋಗುವ ಯಾವುದಾದರೂ ಬಸ್ಸನ್ನು ಹಿಡಿಯಬೇಕಿತ್ತು. ನನ್ನ ಹತ್ತಿರ ಟಿಕೆಟ್ಟಿಗಾಗುವಷ್ಟು ಹಣವಿತ್ತು. ಶಾಲೆಯ ಕ್ಯಾಂಪಸ್ಸಿನಿಂದ ಬಸ್ ನಿಲ್ದಾಣದವರೆಗೆ ಇದ್ದ  ಕಾಡಿನ ಹಾದಿಯಲ್ಲಿ ಕತ್ತಲೆಯನ್ನೂ ಲೆಕ್ಕಿಸದೇ ಓಡಿದ್ದೆ. ಏರುತಗ್ಗುಗಳ ಆ ಹಾದಿಯಲ್ಲಿ ಹೆದರಿಕೆಯಾಗಿತ್ತು. ಆದರೂ ಓಡಿದ್ದೆ, ದಾರಿ ಮಧ್ಯದಲ್ಲಿ ಇಳಿಜಾರೊಂದರಲ್ಲಿ ಜಾರಿ ಬಿದ್ದೆ. ಮೈಯ್ಯೆಲ್ಲ ತರಚು ಗಾಯ. ಅಲ್ಲಿಯವರೇ ಆದ ಒಂದಿಷ್ಟು ಜನ ನನ್ನನ್ನು ನೋಡಿ ಮರಳಿ ಶಾಲೆಗೆ ಕರೆತಂದರು. ಆಮೇಲೆ ತೀವ್ರ ಜ್ವರ ಬಂದು ಶಾಲೆಯ ಆಸ್ಪತ್ರೆಯಲ್ಲಿ ದಾಖಲಾಗಿದ್ದೆ.

ಅದಾದ ಕೆಲವು ಗಂಟೆಗಳಿಗೇ ಅಪ್ಪ ಅಲ್ಲಿದ್ದರು. ಅಮ್ಮ ಬರಲಿಲ್ಲ. ಅವನನ್ನು ನೋಡುತ್ತಿದ್ದಂತೆಯೇ ನಾನು ಅಳಲು ಆರಂಭಿಸಿದ್ದೆ, ’ನನಗೆ ಇಲ್ಲಿರಲಾಗುವುದಿಲ್ಲ, ನಿಮ್ಮನ್ನು ಬಿಟ್ಟು ಇರಲಾಗುವುದಿಲ್ಲ, ಕರೆದುಕೊಂಡು ಹೋಗಿ’......ಅದೇನು ಅಂಥಾ ಯೋಗ್ಯ ಕಾರಣವೇನೂ ಆಗಿರಲಿಲ್ಲ ಬೋರ್ಡಿಂಗ್ ಶಾಲೆಯಿಂದ ಹೊರಬೀಳಲು. ಆದರೆ ಅಪ್ಪ ರಾಜಿಯಾಗಿದ್ದರು. ನಾನು ಮನೆಗೆ ಬಂದೆ. ಅಮ್ಮನಿಗೆ ಸ್ವಲ್ಪ ನಿರಾಶೆಯಾಗಿತ್ತು ಅಂತ ಕಾಣಿಸುತ್ತದೆ. ತಾನೂ ಹಾಗೆ ಬೋರ್ಡಿಂಗ್ ಶಾಲೆಯಲ್ಲಿ ಕಲಿತದ್ದರಿಂದ ಮಗನೂ ಹಾಗೇ ಮಾಡಲಿ, ಸ್ವಲ್ಪ ಬದಲಾವಣೆಯಾಗುತ್ತದೆ ಎಂದು ನಿರೀಕ್ಷಿಸಿದ್ದ ಅವಳಿಗೆ  ನಿರಾಶೆಯಾಗಿದ್ದು ಸಹಜ. ’ಅಮ್ಮ, ಕ್ಷಮಿಸು. ನಾನು ನೀನಲ್ಲ’ ಎಂದಷ್ಟೇ ಹೇಳಲು ನನಗೆ ಸಾಧ್ಯವಾಯಿತು. ಅಮ್ಮ ಕರಗಿದ್ದಳು. ಆದರೂ ಅವಳಿಗೆ ಚಿಂತೆಯಾಗಿದ್ದ ಒಂದು ಸಂಗತಿಯೆಂದರೆ, ನಾನೂ ಎಲ್ಲರಂತೆ ಮೀಡಿಯೋಕರ್ [ಮಾಮೂಲಿ] ಆಗಿಬಿಡುತ್ತೆನೆ ಎನ್ನುವುದು. ’ನಿನ್ನ ಕಷ್ಟ ನನಗರ್ಥವಾಗುತ್ತದೆ. ಆದರೆ ಯಾವ ವಿಶೇಷ ಸಾದನೆಯಿಲ್ಲದೆ ಮಾಮೂಲಿ ಅನಿಸಿಕೊಂಡರೆ ನಿನಗದು ಸಹ್ಯವೆ’ ಎಂದು ಕೇಳಿದ್ದಳು. ನನ್ನ ಬಳಿ ಅದಕ್ಕೆ ಉತ್ತರವಿರಲಿಲ್ಲ. ನಿಜ ಹೇಳಬೇಕೆಂದರೆ ನಾನದುವರೆಗೂ ಒಂದು ಟ್ರೋಫಿಯನ್ನಾಗಲೀ, ಮೆಡಲನ್ನಾಗಲಿ, ಅಥವಾ ಒಂದು ಸಮಾಧಾನಕರ ಬಹುಮಾನವನ್ನೂ ಪಡೆದಿರಲಿಲ್ಲ.

ಮರಳಿ ಗೂಡಿಗೆ ಬಂದೆ. ಮುಂಬೈಯಲ್ಲಿನ ಶಾಲೆ ಮನೆಗೆ ಕೂಗಳತೆಯಷ್ಟು ದೂರದಲ್ಲಿತ್ತು.  ಮನೆ ಮಲಬಾರ್ ಹಿಲ್ ನ ಅಕ್ರೋಪೋಲಿಸ್ ಏರಿಯಾದಲ್ಲಿತ್ತು. ಇಲ್ಲಿ ಹಿತವಾಗಿತ್ತು. ಅಮ್ಮ ಹತ್ತಿರದಲ್ಲೇ ಇದ್ದ ಹಾಗೆ, ಅದೇನು ಪ್ರಯೋಜನವಾಗುತ್ತಿತ್ತು ಅಂತಲ್ಲ. ಹೆಣ್ಣಪ್ಪಿ ಹೆಣ್ಣಪ್ಪಿ ಅಂತನ್ನಿಸಿಕೊಳ್ಳೋದೇನೂ ತಪ್ಪಿರಲಿಲ್ಲ. ಅದೃಷ್ಟವಶಾತ್, ನಾನು ಪ್ರೌಢಶಾಲೆಯಲ್ಲಿ ಓದುತ್ತಿರುವ ಸಮಯದಲ್ಲಿ ಶ್ರೀಯುತ ಪಿಂಟೋರವರ ಸಾರ್ವಜನಿಕ ಭಾಷಣ ತರಬೇತು ಶಾಲೆಯ ಬಗ್ಗೆ ಪತ್ರಿಕೆಯೊಂದರಲ್ಲಿ ಬಂದ ಜಾಹಿರಾತು ಕಣ್ಣಿಗೆ ಬಿತ್ತು.  ಗುಟ್ಟಾಗಿ ಸೇರಿಬಿಟ್ಟೆ. ಫೀಸ್ ಕಟ್ಟಬೇಕಿತ್ತಲ್ಲ.  ಆಗ ಎಲ್ಲರೂ ಒಂದಿಲ್ಲೊಂದು ಕಂಪ್ಯೂಟರ್ ಕೋರ್ಸ್  ಮಾಡುತ್ತಿದ್ದರಲ್ಲವಾ, ಹಾಗೆ ನಾನೂ ಒಂದು ಕಂಪ್ಯೂಟರ್ ಕೋರ್ಸ್ ಮಾಡುತ್ತೇನೆ ಎಂದು ಅಪ್ಪ ಮತ್ತು ಅಮ್ಮನಿಗೆ ಸುಳ್ಳು ಹೇಳಿ ದುಡ್ಡು ಇಸಗೊಂಡು ಪಿಂಟೋರವರ ಕ್ಲಾಸಿಗೆ ಕಟ್ಟಿದೆ. ಅವರೆದುರು ಸುಳ್ಳಾಡಿ ಅಭ್ಯಾಸವಿರಲಿಲ್ಲ  ಆದರೆ ಅದು ಅನಿವಾರ್ಯವಾಗಿತ್ತು. ಫೀಸ್ ಕಟ್ಟಿಯಾಯಿತು, ಇನ್ನು ದಿನಾ ಅಡ್ಡಾಡಬೇಕಲ್ಲ, ಯಾರಿಗೂ ಗೊತ್ತಾಗದ ಹಾಗೆ ಕ್ಲಾಸಿಗೆ ಹೋಗಿ ಬರುವುದೊಂದು ದೊಡ್ಡ ತಲೆಬಿಸಿಯಾಗಿತ್ತು. ಯಾರಾದರೂ ನೋಡುತ್ತಿದ್ದಾರಾ ಎಂದು ಆಚೆ ಈಚೆ ಕಣ್ಣು ಕಾಯಿಸುತ್ತ ಟ್ಯಾಕ್ಸಿ ಹತ್ತುತ್ತಿದ್ದೆ, ಡ್ರೈವರನಿಗೆ  ಇಂತಾ ಜಾಗಕ್ಕೆ ಹೋಗಬೇಕೆಂದು ಪಿಸುದನಿಯಲ್ಲಿ ಉಸುರುತ್ತಿದ್ದೆ. ಅವನಿಗೆ ಇದ್ಯಾಕೆ ಈ ನಮನಿ ಮಾಡುತ್ತಿದ್ದಾನೆ ಈ ಹುಡುಗ ಅಂತ ಅನಿಸಿರಲಿಕ್ಕೂ ಸಾಕು, ಆದರೆ, ನನ್ನ ನದರಿಗೆ ಬಂದ ಹಲವರು ಆ ರೀತಿ ಮಾಡುತ್ತಿದ್ದುದರಿಂದ ಅವರನ್ನು ನೋಡಿಯೇ ನಾನೂ ತಲೆ ಉಪಯೋಗಿಸಿದ್ದು.  

ಒಂದೆರಡು ವಾರಗಳ ನಂತರ, ಒಂದು ದಿನ ಎಂದಿನಂತೆ ಕ್ಲಾಸ್ ಮುಗಿಸಿ ಮನೆಗೆ ಹೊರಡಲು ಅನುವಾದೆ, ಅಷ್ಟರಲ್ಲಿ ಪಿಂಟೋರವರು ಸ್ವಲ್ಪ ನಿಲ್ಲು ತಡೆದು ಹೋಗುವಿಯಂತೆ ಎಂದರು. ವಾತ್ಸಲ್ಯಭರಿತ ದನಿಯಲ್ಲಿ ಕೇಳಿದರು, ’ಮಗನೆ, ನಿಂಗೇನೋ ಚಿಂತೆ ಇದ್ದಂತಿದೆ. ಏನದು, ನಂಗೆ ಹೇಳು. ಈ ವಯಸ್ಸಿನಲ್ಲಿ ಹೇಗಿರಬೇಕಿತ್ತು ನೀನು! ನಗುನಗುತ್ತ...ಒಳ್ಳೇ ಆತ್ಮವಿಶ್ವಾಸದಿಂದ ನಳನಳಿಸುತ್ತ ಇರಬೇಕಿತ್ತು.’ ಅವರ ಮಾತಿಗೆ ಸುಮ್ಮನೆ ತಲೆಯಾಡಿಸಿದೆ. ಏನು ಹೇಳಬೇಕೆಂದು ತೋಚಲಿಲ್ಲ. ಅವರು ಮುಂದುವರೆಸಿದರು. ’ನಾನೂ ನಿನ್ನ ಮನೆಯ ಒಬ್ಬ ಸದಸ್ಯ ಎಂದೇ ಅಂದುಕೋ. ಮುಂದಿನ ವಾರದಿಂದ ನಮ್ಮ ಮನೆಯಲ್ಲಿ ನಡೆಯುವ ತರಗತಿಗಳಿಗೆ ಬಾ ಬೇಕಾದರೆ, ಅಲ್ಲಿ ಜಾಸ್ತಿ ವಿದ್ಯಾರ್ಥಿಗಳು ಇರೋದಿಲ್ಲ, ನಿನ್ನ ಬಗ್ಗೆ ಜಾಸ್ತಿ ಗಮನ ಕೊಡುವುದು ಸಾಧ್ಯವಾಗುತ್ತದೆ’

ನನಗೆ ಗಲಿಬಿಲಿಯಾಯಿತು. ಆ ವಿಶೇಷ ತರಗತಿಗಳಿಗೆ ಎಲ್ಲಿಂದ ಹಣ ಹೊಂದಿಸೋದು? ಅವರು ನನ್ನ ಮನಸ್ಸನ್ನು ಓದಿದವರಂತೇ ಹೇಳಿದರು, ’ಫೀಸಿನ ಬಗ್ಗೆ ತಲೆಕೆಡಿಸಿಕೊಳ್ಳಬೇಡ. ಬಾ ಸುಮ್ಮನೆ’. ಆಯಿತು ಎಂದು ಗೋಣಲ್ಲಾಡಿಸಿ ಹೊರಟೆ. ’ಅಲ್ಲಯ್ಯ, ಈಗಲಾದರೂ ನಗಪ್ಪಾ!’ ಎಂದಿದ್ದರು.  

ನನ್ನ ಜೀವಮಾನದಲ್ಲೇ  ಅಷ್ಟು ಖುಷಿ ಯಾವತ್ತೂ ಆಗಿರಲಿಲ್ಲ. ನಾನು ಬಾಯೊಡೆದು ಹೇಳದೇ ಇದ್ದರೂ ನನ್ನೊಳಗಿನ ತುಮುಲವನ್ನು ಅರ್ಥಮಾಡಿಕೊಂಡು ಅದಕ್ಕೆ ಸ್ಪಂದಿಸುವವರೊಬ್ಬರು ಈ ಜಗತ್ತಿನಲ್ಲಿ ಇದ್ದಾರೆ ಅನ್ನೋದೇ ನನಗೊಂದು ಸಂಭ್ರಮದ ಸಂಗತಿಯಾಗಿತ್ತು. ನಾನೊಬ್ಬ ವಿಲಕ್ಷಣ ವ್ಯಕ್ತಿಯೇನಲ್ಲ ಹಾಗಾದರೆ. ನಾನು ಹೇಗಿದ್ದೇನೋ ಹಾಗಿರುವದು ನನ್ನ ಆಯ್ಕೆಯಿಂದಲ್ಲ, ಹಾಗಲ್ಲದೇ ಬೇರೆ ಥರ ನನ್ನನ್ನು ನಿಭಾಯಿಸಿಕೊಳ್ಳುವುದು ನನಗೆ ಗೊತ್ತಿರಲಿಲ್ಲ ಅದಕ್ಕೆ. ಅದನ್ನು ಯಾರೋ ಒಬ್ಬರು ಗುರುತಿಸಿಬಿಟ್ಟರಲ್ಲ. ಅಂತೂ ಇಂತೂ ನನ್ನನ್ನು ಪಿಂಟೋ ಒಬ್ಬರೇ ಪಾರು ಮಾಡಬಲ್ಲರು ಎನಿಸಿಬಿಟ್ಟಿತು. ಕೇವಲ ಕೆಲವೇ ಕೆಲವು ವಿಧ್ಯಾರ್ಥಿಗಳಿಗೆ ಲಭ್ಯವಾಗುವ ಅವಕಾಶ ನನ್ನದೂ ಆಗಿತ್ತು. ಪಿಂಟೋರವರು ನಡೆಸುತ್ತಿದ್ದ ವಾರಾಂತ್ಯದ ತರಗತಿಗಳ ಅದೃಷ್ಟವಂತ ವಿದ್ಯಾರ್ಥಿಗಳ ಗುಂಪಿನಲ್ಲಿ ಈಗ ನಾನೂ ಇದ್ದೆ. ನನ್ನ  ಭವಿಷ್ಯಕ್ಕೆ ಇದೊಂದು ಕ್ವಾಂಟಮ್ ಜಿಗಿತವಾಯಿತು.

ಕೊಲಾಬಾ ಮನೆಯ ಬ್ಯಾಚನ್ನು ಸೇರಿದ್ದಕ್ಕೆ ನನಗೆ ದೊರೆತ ಅಮೂಲ್ಯ ನಿಧಿಯೆಂದರೆ ಶ್ರೀಮತಿ ಪಿಂಟೋ. ಅದೊಂಥರಾ ಹೆಚ್ಚುವರಿ ಬೋನಸ್ ಆಯಿತು ಅಂತಿಟ್ಟುಕೊಳ್ಳಿ. ಮೊದಲರೆಡು ವಾರ ಅವರು ನನ್ನನ್ನು ಗಮನಿಸಿರಲಿಕ್ಕಿಲ್ಲ ಎಂದುಕೊಂಡೇ ಕಳೆದೆ. ಇದ್ದಕ್ಕಿಂದ್ದಂತೆ ಒಂದು ದಿನ, ನಾನೂ ಗಮನಿಸ್ತಾ ಇದೀನಿ. ಡೇನಿಯಲ್ ನಿನ್ನ ಬಗ್ಗೆ ಮಾತಾಡ್ತಿರ್ತಾರೆ’ ಎಂದು ಹೇಳಿ ನನ್ನನ್ನು ಬೆಚ್ಚಿ ಬೀಳಿಸಿದ್ದರು.

’ನನ್ನ ಬಗ್ಗೆ ಒಳ್ಳೊಳ್ಳೇದನ್ನೇ ಹೇಳಿದಾರೆ ಅಂತ ಅಂದುಕೋತೀನಿ’ ಎಂದಿದ್ದೆ ನಾನು ಮುಖ ಕೆಂಪಾಗಿಸಿಕೊಂಡು.

’ಹೌದೌದು.’ ಎನ್ನುತ್ತ ಹೆದರಿಸುವ ರೀತಿಯಲ್ಲಿ ನನ್ನತ್ತ ಬಾಗಿದರು. ’ಡೇನಿಯಲ್ ಯಾವತ್ತೂ ಯಾರ ಬಗ್ಗೂ ಕೆಟ್ಟದಾಗಿ ಮಾತಾಡುವುದಿಲ್ಲ. ಹಾಗಂತ ಹೊಗಳ್ತಾನೂ ಕೂರೋದಿಲ್ಲ’ 

ನನ್ನ ಮೋರೆ ಇನ್ನೂ ಕೆಂಪಾಯಿತು. ಅವರ ಕೈಯ್ಯೊಳಗೊಂದು ಆಲ್ಯುಮಿನಿಯಮ್ ಫಾಯಿಲ್ ಸುತ್ತಿದ ಪೊಟ್ಟಣವೊಂದಿತ್ತು. ಸೇಬಿನ  ಕಡುಬು ಬೇಯಿಸಿದ್ದೆ. ಇದು ನಿನಗೆ ತೊಗೊಎನ್ನುತ್ತ ಅದನ್ನು ನನ್ನ ಕೈಗಿತ್ತರು. ನನಗೆ ಅದನ್ನು ನಂಬಲೇ ಆಗಲಿಲ್ಲ.  ಕೈಯ್ಯಲ್ಲಿದ್ದದ್ದು ಬಾಂಬೋ ಎನ್ನುವಂತೆ ಅದನ್ನು ದಿಟ್ಟಿಸಿದ್ದೆ.

’ಅರೇ, ಅದ್ಯಾಕೆ ಆಗೆ ನೋಡ್ತಿದ್ದಿ? ಅದಕ್ಕೇನು ವಿಷ ಹಾಕಿಲ್ಲ’ ಎಂದವರು ದೊಡ್ಡದಾಗಿ ನಕ್ಕರು.  

’ಖಂಡಿತ ಇಲ್ಲ ಶ್ರೀಮತಿ ಪಿಂಟೊ’. ನಾನು ಸ್ವಲ್ಪ ಸಾವರಿಸಿಕೊಂಡು ಹೇಳಿದೆ. ಕೈಯ್ಯಲ್ಲಿದ್ದ ಕಡುಬಿನ ಪೊಟ್ಟಣದ ಬಗ್ಗೆ ಎಲ್ಲಿಲ್ಲದ ಮಮತೆ ಉಕ್ಕಿ ಬಂತು. ’ತುಂಬಾ ಧನ್ಯವಾದಗಳು. ನನಗೆ ಸೇಬಿನ ಕಡುಬೆಂದರೆ ಇಷ್ಟ. ಆದರೂ ನಾನು ಅತಿಯಾಗಿ ತಿನ್ನೋಕೆ ಹೆದರುತ್ತೇನೆ, ತೂಕ ಜಾಸ್ತಿಯಾದರೆ ಕಷ್ಟ’ ಎಂದೆ.

ನಾನ್ಸೆನ್ಸ್! ನೀನಿನ್ನೂ ಬೆಳೆಯೋ ಹುಡುಗ. ಈ ವಯಸ್ಸಿನ ಕೊಬ್ಬು ಉಳಿಯೋದಿಲ್ಲ ಹೆದರಬೇಡ’
’ನಿಜವಾಗಿಯೂ?’ ......
ಆ ಕಡುಬನ್ನ ಮನೆಗೆ ಒಯ್ದರೆ ನೂರೆಂಟು ಪ್ರಶ್ನೆಗಳೇಳುತ್ತವೆ. ಎಲ್ಲಿಂದ ತಂದೆ ಎಂದು ಕೇಳಿದರೆ ಸುಳ್ಳು ಹೇಳುವುದು ಕಷ್ಟವಾಗಬಹುದೆಂದೆನ್ನಿಸಿ ದಾರಿಯಲ್ಲೇ ಟ್ಯಾಕ್ಸಿ ಒಳಗೆ ಕೂತಾಗ ಗಬಗಬನೆ ತಿಂದು ಮುಗಿಸಿದೆ. ಮನೆಗೆ ತಲುಪುತ್ತಿದ್ದಂತೆ ಅಪ್ಪ ಕೇಳಿದ್ದರು, ’ಮತ್ತೆಕಂಪ್ಯೂಟರ್ ಕ್ಲಾಸ್ ಹೇಗೆ ನಡೀತಾ ಇದೆ? ಬೇಕಾ ನಿಂಗೊಂದು ಕಂಪ್ಯೂಟರ್?’ ಎಂದು.
ಅಯ್ಯೋ ಬೇಡ ಬೇಡಎಂದು ಅನಗತ್ಯವಾಗಿ ಕಿರುಚಿದ್ದೆ.
ಯಾಕೆ ಬೇಡ? ಮನೆಯಲ್ಲೇ ಕಂಪ್ಯೂಟರ್ ಇದ್ದರೆ ಒಳ್ಳೆಯದೇ ಅಲ್ವಾ. ಇಲ್ಲೇ ಅಭ್ಯಾಸ ಮಾಡಬಹುದು. ಗಂಟೆಗಟ್ಟಲೇ ಹೊರಗಿರೋದು ತಪ್ಪುತ್ತದೆ
ಬೇಡಪ್ಪ! ಅಲ್ಲೇ ಕಲೀಬೇಕಂತೆ ಸರ್ ಹೇಳಿದಾರೆಅಂದೆ.
ಅದೇನು ಎಲ್ಲರಿಗೂ ಅದೇ ರೂಲ್ಸಾ?’
ಹೀಗೆ ಮುಂದುವರೆದೆರೆ ನನ್ನ ಗುಟ್ಟೆಲ್ಲ ರಟ್ಟಾಗುವ ಸಂಭವನೀಯತೆ ಹೆಚ್ಚಾಗಿದ್ದುದರಿಂದ ಅಪ್ಪನ ಕುತೂಹಲವನ್ನ ಅಲ್ಲೇ ಮೊಟಕುಗೊಳಿಸುವ ಕೊನೆಯ ಯತ್ನ ಮಾಡಿದೆಥೂ ಏನಪ್ಪ ನೀವು. ಮುಗೀತಾನೆ ಇಲ್ಲ ಪ್ರಶ್ನೆಗಳು’
’ಅರೆ ಯಾರ್....ನಿಂಗೆ ಸಹಾಯ ಮಾಡೋಣ ಅಂತನೇ ಕೇಳಿದ್ದು’
’ನನಗೆ ಹೇಗನ್ನಿಸುತ್ತದೆಯೋ ಹಾಗೆ ಇರಲಿಕ್ಕೆ ಬಿಡ್ತೀರಾ ಅಪ್ಪ, ನಿಮಗೇನೂ ಅಭ್ಯಂತರವಿಲ್ಲದಿದ್ದರೆ’ ಎಂದೆ ಸಿಡಿಮಿಡಿಗೊಂಡವರ ಥರ.
’ನೀವು ಸುಮ್ನಿರಿ. ಅವನಿಗೆ ಹೇಗೆ ಬೇಕೋ ಹಾಗಿರಲಿ. ಮತ್ತೆ... ಅವನಿಗೆ ಯಾರ್ ಅಂತೆಲ್ಲ ಅನ್ನಬೇಡಿ’ ಅದೃಷ್ಟಕ್ಕೆ ಅಮ್ಮ ಮಧ್ಯ ಪ್ರವೇಶಿಸಿದಳು. ನಿರಾಳವಾಯಿತು.  

ಪಿಂಟೋರವರ ಮನೆ ಸ್ವರ್ಗದಂತಿತ್ತು. ಪಿಂಟೋರವರ ಮಡದಿ ದಿನಾ ತರಗತಿಯ ಅವಧಿ ಮುಗಿದ ನಂತರ ನನ್ನೊಬ್ಬನನ್ನೇ ಕರೆದು ಸ್ಯಾಂಡ್ವಿಚ್, ಕೇಕ್ ಮತ್ತು ತರಾವರಿ  ಮನೆಯಲ್ಲೇ ಮಾಡಿದ ತಿನಿಸುಗಳನ್ನು ತಿನ್ನಿಸುತ್ತಿದ್ದರು. ಜೊತೆಗೆ ಗಮಗಮಿಸುವ ಕಾಫಿ ಬೇರೆ ಇರುತ್ತಿತ್ತು. ಆದರೆ, ಈ ಬಗ್ಗೆ ಬೇರೆ ವಿದ್ಯಾರ್ಥಿಗಳಿಗೆ ತಿಳಿಸಬೇಡ ಎನ್ನುತ್ತಿದ್ದರು. ಹೇಳಿದ್ದರೆ ಅವರಿಗೆ ಬೇಸರವಾಗುತ್ತಿತ್ತು ಅನ್ನುವುದಂತೂ ಸತ್ಯ. ಅಲ್ಲದೇ ತರಗತಿಯಲ್ಲಿ ವಿಶೇಷ ಸವಲತ್ತನ್ನು ಪಡೆದವನು ಎಂಬ ನೋಟವನ್ನು ಭರಿಸಲು ನನಗೂ ಇಷ್ಟವಿರಲಿಲ್ಲ. ’ಟೀಚರ್ಸ್ ಪೆಟ್’ ಟೀಚರ್ಸ್ ಪೆಟ್’ ಎನ್ನುವ ಬಿರುದು ಯಾರಿಗೆ ಬೇಕಿತ್ತು?!
ಹೀಗಿದ್ದ ಈ ಭಾಷಣ ಕಲೆಯ ಗುರು ಮತ್ತು ಪಿಯಾನೋ ಬೋಧಕಿಯ ಜೋಡಿಯನ್ನು ನೋಡಿದರೆ ಮೇಲ್ನೋಟಕ್ಕೆ ಇವರೆಷ್ಟು ವರ್ಣರಂಜಿತ, ಎಷ್ಟೊಂದು ಲವಲವಿಕೆಯ ಜೋಡಿ ಎನಿಸುತ್ತಿತ್ತು. ಆದರೆ ಅಂತರಾಳದಲ್ಲಿ ಅಡಗಿರಬಹುದಾದ  ಒಂಟಿತನದ ದುಗುಡ, ಅವ್ಯಕ್ತ ವಿಷಾದದ ಬಗ್ಗೆ ನನಗೆ ಸೂಟು ಬಡಿದಿತ್ತು. ನನಗೆ ಅರ್ಥವಾಗದ ಸಂಗತಿಯೆಂದರೆ, ಅವರಿಬ್ಬರೂ ನನ್ನನ್ಯಾಕೆ ಅಷ್ಟು ಹಚ್ಚಿಕೊಂಡಿದ್ದರು ಅನ್ನುವುದು. ಈ ಪ್ರಶ್ನೆಗೂ ಅರ್ಥವಿಲ್ಲ. ಅವರ ಪ್ರೀತಿ ನನಗೆ ಅಗತ್ಯವಿದ್ದಷ್ಟು ಮತ್ಯಾರಿಗೂ ಇರಲಿಲ್ಲ. ಬದುಕಿನಲ್ಲಿ ತುರ್ತಿನ ಮಾರ್ಪಾಟು ಆಗಬೇಕಿದ್ದುದು ನನಗೇ ಆಗಿತ್ತು.

ಮಿಸ್ಟರ್ ಪಿಂಟೋ ಬಾರಿಬಾರಿಗೂ ನನಗೆ ಮನವರಿಕೆ ಮಾಡಿಕೊಡಲು ಯತ್ನಿಸುತ್ತಿದ್ದರು. ಏನೆಂದರೆ, ನಾನೊಬ್ಬ ಎಲ್ಲರಂತೆ ಇರುವ ಮನುಷ್ಯ. ಅಷ್ಟಲ್ಲದೇ ನನ್ನ ವ್ಯಕ್ತಿತ್ವದ ಒಟ್ಟಾರೆ ವಿಕಸನಕ್ಕೂ ನೀರೆರೆಯುತ್ತಿದ್ದರು. ಆದರೆ ನನ್ನ ವ್ಯಕ್ತಿತ್ವದಲ್ಲಿನ ಕೆಲವು ನ್ಯೂನತೆಗಳನ್ನು ನಾನೇ ಸರಿಪಡಿಸಿಕೊಳ್ಳಬೇಕಿತ್ತು. ’ಎಲ್ಲವನ್ನೂ ಕೈತುತ್ತು ನೀಡಿ ಉಣಿಸಲಾಗುವುದಿಲ್ಲ’. ಒಂದು ದಿನ  ವಿಪರೀತ ರೇಗಿದ್ದರು. ’ಮಾತಾಡುತ್ತಿರುವಾಗ ನಿನ್ನ ಕೈಗಳು ಓಲಾಡುತ್ತಿರುತ್ತವೆ, ಮಣಿಕಟ್ಟು ಬಳಕುತ್ತದೆ, ಸುಧೃಡವಾಗಿ ನಿಲ್ಲುವುದಿಲ್ಲ ನೀನು. ನಿನ್ನ ವರ್ತನೆ ನೋಡಿದರೆ ಥೇಟ್ ಹುಡುಗೀನೇ. ನೀನದನ್ನ ಮೊದಲು ಒಪ್ಕೊ. ನಿನ್ನನ್ನ ನೀನು ಅರ್ಥ ಮಾಡಿಕೊಂಡು ಒಪ್ಪಿಕೊಳ್ಳೋದನ್ನ ಕಲಿ. ವಾಸ್ತವ ಜಗತ್ತಿಗೆ ಬಾ. ಹುಟ್ಟಿನಿಂದ ಪಡೆದುಕೊಂಡ ದೈಹಿಕ ವಿಶಿಷ್ಟತೆಯನ್ನು ಅಲ್ಲಗಳೆಯುವುದಕ್ಕಾಗುವುದಿಲ್ಲ. ನಾವು ಏನೋ ಅದೇ ಆಗುವುದನ್ನ ಕಲಿಯಬೇಕು. ಇನ್ಯಾವಾಗ ನೀನು ಬೆಳೆಯೋದು? ಯಾವಾಗ ಗಂಡಸಾಗುವುದು?’ ಅವರ ಮಾತಿನ ಮೊನಚಿಗೆ ನನ್ನ ಕಣ್ಣಾಲಿಗಳು ತುಂಬಿ ಬಂದಿದ್ದವು.  ಆದರೂ ಅವರು ಕರಗಲಿಲ್ಲ.

’ಬದುಕಿನ ಸಂದೂಕಿನೊಳಗೆ ನೀನು ಏನಾಗಿದ್ದೀಯೋ ಅದನ್ನ ಬಿಟ್ಟು ಹೋಗಬೇಡ. ನಿನ್ನ ಮೇಲೆ ಹಿಡಿತವಿಟ್ಟುಕೋ. ನಾನು ಸಾಧಿಸಿಯೇ ತೀರುತ್ತೇನೆ ಎಂದು ನಿನಗೆ ನೀನೆ ಹೇಳ್ಕೋ. ಹಾದಿ ಮಧ್ಯದಲ್ಲಿ ಅದೆಷ್ಟೇ ಅವಮಾನಗಳನ್ನು ಸಹಿಸಬೇಕಾಗಿ ಬಂದರೂ ಹೆದರಬೇಡ. ಇವತ್ತು ನಿನ್ನನ್ನ ಅವಮಾನಿಸಿದವರು ನಾಳೆ ತಮ್ಮ ಮಾತುಗಳನ್ನ ತಾವೇ ನುಂಗುತ್ತಾರೆ, ನೋಡ್ತಾ ಇರು’  ಅವರಿಂದ ನಾನು ಕಲಿತ ಗುರುಮಂತ್ರ ಇದಾಗಿತ್ತು.

ಆಕರ್ಷಕ ಮಾತುಗಾರಿಕೆ ಒಂದು ಕಲೆ. ಅದನ್ನು ನಾನು ರೂಢಿಸಿಕೊಳ್ಳಬೇಕೆಂದರೆ ಕೆಲವೊಂದಿಷ್ಟು ಮಾರ್ಪಾಟುಗಳು ಅಗತ್ಯವಾಗಿದ್ದವು. ಮೊದಲನೆಯದಾಗಿ ಆಕರ್ಷಕ ಗಂಡು ದನಿಯನ್ನು ಅಂತರ್ಗತ ಮಾಡಿಕೊಳ್ಳಬೇಕಿತ್ತು. ಅದನ್ನು ಸರಿಪಡಿಸಲು ಶ್ರೀಮತಿ ಪಿಂಟೋರವರು ಟೊಂಕ ಕಟ್ಟಿ ನಿಂತಿದ್ದರು. ಪ್ರಯತ್ನಪೂರ್ವಕವಾಗಿಯಾದರೂ ಗಂಡಸಿನ ಒಡಕಲು ದನಿಯನ್ನು ರೂಢಿಗತ ಮಾಡಿಕೊಳ್ಳಬೇಕಿತ್ತು. ಹೇಗೆ ರೂಢಿ ಮಾಡಿಕೊಳ್ಳುವುದು? ಪಿಂಟೋರವರ ಮಡದಿ ಹುರಿದುಂಬಿಸುತ್ತಿದ್ದರು. ಸುಮ್ಮನೇ ಗಂಡಸಿನ ದನಿಯಲ್ಲಿ ಮಾತಾಡ್ತಾ ಹೋಗು ಎನ್ನುತ್ತಿದ್ದರು. ಸ್ವತಃ ತಾವೇ ಗಂಡಸಿನ ದನಿಯಲ್ಲಿ ಅಣಕು ಸಂಭಾಷಣೆ ನಡೆಸುತ್ತಿದ್ದರು. ’ಹೂಂ...ಮಾತಾಡು ಸುಳ್ ಸುಳ್ಳೇ. ನಿಧಾನವಾಗಿ ಅಭ್ಯಾಸವಾಗ್ತದೆ’ ಅನ್ನುತ್ತಿದ್ದರು. ದಿನಾ ಅಭ್ಯಾಸಕ್ಕೆಂದು ಆಲ್ ಫ್ರೆಡ್ ನೋಯ್ಸ್ ರವರ ಹೈವೇ ಮ್ಯಾನ್ ಕವಿತೆಯನ್ನು ಆರಿಸಿಕೊಂಡೆ. ಸುತ್ತಮುತ್ತ ಯಾರೂ ಇಲ್ಲ ಎಂಬುದನ್ನು ಖಚಿತ ಪಡಿಸಿಕೊಂಡು ಗಂಡಸಿನ ದನಿಯಲ್ಲಿ ಹೇಳಿಕೊಳ್ಳುತ್ತಿದ್ದೆ. ಒಮ್ಮೆ ನನ್ನಮ್ಮ ಅದನ್ನ ನೋಡಿ ಹುಬ್ಬನ್ನ ಬಿಲ್ಲಾಗಿಸಿದಳು. ನಾನೂ ನನ್ನ ಬಿಲ್ಲಿಗೆ ಹೆದೆಯೇರಿಸಿದೆ. ’ಕವಿತೆಯ ಟೆಸ್ಟ್ ಹತ್ತಿರ ಬರ್ತಾ ಇದೆ. ಇಂಗ್ಲೀಷ್ ಸಾಹಿತ್ಯದ ಕ್ಲಾಸಿಗೆ. ಅದಕ್ಕೇ ಉರು ಹೊಡೀತಾ ಇದೀನಿ. ತೊಂದರೆ ಇಲ್ವಲ್ಲ?’  

’ಅಯ್ಯೋ ನಂಗೇನು ತೊಂದರೆ? ಆದರೆ ಅವಶ್ಯಕತೆಗಿಂತ ಜಾಸ್ತಿ ಕಷ್ಟ ಪಡುತ್ತಾ ಇದ್ದಿ ಅನಿಸ್ತಾ ಇದೆಯಲ್ಲ ಯಾಕೆ?’
’ಓಹ್ಹೋ ಅಮ್ಮಾ! ಪ್ರತಿ ಪದವೂ ಅದರ ಉಚ್ಚಾರವೂ ಕರಾರುವಕ್ಕಾಗಿರಬೇಕು. ಕೇಳೀಗ...’ ಎನ್ನುತ್ತ ಅವಳೆದುರು ಮತ್ತೊಂದು ಸುಳ್ಳನ್ನು ಪೋಣಿಸಿದ್ದೆ. ಜೊತೆಗೆ ಅದು ನಿಜವೆಂದು ಬಿಂಬಿಸಲು ಅವಳೆದುರು ಜೋರುದನಿಯಲ್ಲಿ ಕವಿತೆಯನ್ನು ವಾಚಿಸಲಾರಂಭಿಸಿದೆ.

ಹೊಯ್ದಾಡುವ ಮರಗಳ ನಡುವೆ
ಗಾಳಿಯಿತ್ತು ಕತ್ತಲ ತೆರೆಯಪ್ಪಳಿಸಿದ ಹಾಗೆ.
ಮೋಡಗಟ್ಟಿದ ಕಡಲ ಮೇಲೆ         
ಚಂದ್ರನಿದ್ದ ತೊನೆದಾಡುತ್ತ ಬೀಭತ್ಸ ನೌಕೆಯ ಹಾಗೆ.
ಕೆನ್ನೀಲಿ ಬಂಜರುಗಾಡಿನ ಒಳಗೆ
ಹಾದಿಯಿತ್ತು ಬೆಳದಿಂಗಳ ರಿಬ್ಬನ್ನಿನ ಹಾಗೆ.
ಹೆದ್ದಾರಿಯ ಸರದಾರ ಸವಾರಿ ಮಾಡಿಕೊಂಡು ಬಂದ...
ಸವಾರಿ ಮಾಡಿಕೊಂಡು ಬಂದ... ಸವಾರಿ ಮಾಡಿಕೊಂಡು ಬಂದ...
ಹಳೆಯ ಛತ್ರದವೆರೆಗೆ...

ಮುಂದಿನದನ್ನು ಹೇಳುವ ಮೊದಲೇ ಅಮ್ಮ ಜಾಗ ಖಾಲಿ ಮಾಡಿದ್ದಳು...ಎಲ್ಲ ಅಯೋಮಯವೆಂಬಂತೆ ಕಣ್ಣುಗುಡ್ಡೆಗಳನ್ನು ತಿರುಗಿಸುತ್ತ. ನನ್ನ ಕವಿತಾವಾಚನದ ರಿಹರ್ಸಲ್ ಬಗ್ಗೆ ಅವಳಿಗೆ ಅನುಮಾನ ಮೂಡಿತ್ತು ಅಂತ ಕಾಣುತ್ತದೆ. ಇಲ್ಲೇನೋ ನಡೀತಾ ಇದೆ ಅಂತ ಅನಿಸಿರಬೇಕು. ಅದೇನು ಅನ್ನುವದನ್ನ ಅವಳಿಂದ ಮುಚ್ಚಿಟ್ಟಿದ್ದಕ್ಕೆ ಕಾರಣಗಳಿರಬೇಕು ಅನ್ನುವುದನ್ನೂ ಅವಳು ಅರಿತುಕೊಂಡಿರುತ್ತಾಳೆ. ಇದಕ್ಕೆ ವ್ಯತಿರಿಕ್ತವಾಗಿ ಪಿಂಟೋರವರ ಮನೆಯಲ್ಲಿ ನಾನು ಮುಕ್ತವಾಗಿ ಅಭ್ಯಸಿಸುತ್ತಿದ್ದೆ. ಸುಮಾರು ಎರಡು ವರ್ಷಗಳೆ ಕಳೆದಿರಬೇಕು, ಒಂದೇ ಕವಿತೆಯನ್ನು ಬಾರಿ ಬಾರಿಗೂ ಗಟ್ಟಿದನಿಯಲ್ಲಿ ಹೇಳುತ್ತ, ಅದರ ಸ್ವರಗತಿಗಳನ್ನು ತಿದ್ದಿಕೊಳ್ಳುತ್ತ, ಸುಮಾರು ಎರಡು ವರ್ಷ ಸವೆದದ್ದನ್ನು ಕಣ್ಣಾರೆ ಕಂಡವರು ಅವರಿಬ್ಬರೆ. ಒಮ್ಮೆಯೂ ಅಸಹನೆ ವ್ಯಕ್ತಪಡಿಸಲಿಲ್ಲ, ಸಾಕು ಹೋಗೆನ್ನಲಿಲ್ಲ, ಅದಿರಲಿ,  ಅದಷ್ಟನ್ನು ಕಲಿಯಲಿಕ್ಕೆ ಅಂದುಕೊಂಡದ್ದಕ್ಕಿಂತ ಜಾಸ್ತಿ ವೇಳೆ ಹಿಡಿಯಿತು ಎನ್ನುವುದರ  ಸುಳಿವೂ ನನಗೆ ಸಿಗದ ಹಾಗೆ ವರ್ತಿಸುತ್ತಿದ್ದರು. ನನ್ನಿಂದ ಫೀಸ್ ತೆಗೆದುಕೊಳ್ಳೋದನ್ನ ನಿಲ್ಲಿಸಿದ್ದರು. ಕೊನೆ ಕೊನೆಗೆ ವಾರದ ಕೊನೆಯಲ್ಲಿನ ಊಟಗಳಿಗೆ ನಾನೂ ಜೊತೆಯಾಗುತ್ತಿದ್ದೆ. ಕ್ರಿಸ್ಮಸ್ ಮತ್ತು ಈಸ್ಟರ್ ಹಬ್ಬದ ಸಂಭ್ರಮಗಳಲ್ಲಿ ಕೂಡ. ಮನೆಯಲ್ಲಿ ಮತ್ತು ಶಾಲೆಯಲ್ಲಿ ಯಾರೂ ನನ್ನ ವ್ಯಕ್ತಿತ್ವದಲ್ಲಾಗುತ್ತಿದ್ದ ಮಾರ್ಪಾಟುಗಳನ್ನು ಗಮನಿಸಿದಂತಿರಲಿಲ್ಲ. ಅಪ್ಪ-ಅಮ್ಮನಿಗೆ ಬಹುಶಃ ಮಗ ದೊಡ್ಡವನಾಗುತ್ತಿರುವುದರಿಂದ ಅವನಲ್ಲಿ ಇವು ಸಹಜವಾಗೇ ಆದ ಬದಲಾವಣೆಗಳು ಅಂತ ಅನಿಸರಬೇಕು.

ನೋಡುತ್ತ ನೋಡುತ್ತ...ನಾನು ಕಾಲೇಜು ಸೇರಿದ್ದೆ. ಇನ್ನು ಪಿಂಟೋ ಕ್ಲಾಸುಗಳು ಅನಿವಾರ್ಯವೇನಾಗಿರಲಿಲ್ಲ. ಹಾಗಾಗಿ ಅವರಿಗೆ ವಿದಾಯ ಹೇಳುವ ಸಮಯ ಬಂದೇ ಬಿಟ್ಟಿತ್ತು.
“ ಒಳ್ಳೇದು. ನಿನಗಿನ್ನು ನಾವು ಬೇಡ. ನಿನ್ನಿಂದ ನಾವು ಬಯಸುವುದು ಒಂದನ್ನೇ...ಕರಣ್...” ಎಂದಿದ್ದರು ಶ್ರೀಮತಿ ಪಿಂಟೋ.
“ದಯವಿಟ್ಟು ಹೇಳಿ...” ಎಂದೆ.
“ಸಂಪರ್ಕದಲ್ಲಿರು. ಇದನ್ನೊಂದೇ ನಾವು ಬಯಸೋದು. ನಿನ್ನ ಡ್ಯಾನಿ ಅಂಕಲ್ ಮತ್ತು ಮ್ಯಾಗೀ ಆಂಟಿಯನ್ನ ಮರೆತುಬಿಡಬೇಡ.”

ಹಾಗೆಂದವರು ಸುಮಾರು ಹೊತ್ತಿನವರೆಗೆ ನನ್ನನ್ನು ತಮ್ಮ ಎದೆಗವುಚಿಕೊಂಡು ನಿಂತರು. ಇನ್ನೇನು ಹೊರಟೆ ಅನ್ನುವ ವೇಳೆಗೆ ನನ್ನ ಗಲ್ಲಕ್ಕೆ ಮತ್ತು ಹಣೆಗೆ ಮುತ್ತಿಕ್ಕಿದರು. ಮಿಸ್ಟರ್ ಪಿಂಟೋ ಅಷ್ಟೇನೂ ಭಾವುಕರಾಗದಿದ್ದರೂ ಬಲವಾಗಿ ಕೈಕುಲುಕುತ್ತ ಉತ್ಸಾಹದ ದನಿಯಲ್ಲಿ ಹಾರೈಸಿದರು. ’ಹುಡುಗಾ, ಈ ಸಲ ಮ್ಯಾಗಿ ಹೇಳಿದ್ದನ್ನ ಒಪ್ಪುತ್ತೇನೆ! ’ ಎನ್ನುತ್ತ ದೊಡ್ಡದಾಗಿ ನಕ್ಕರು. ’ಮರೀಬೇಡ ನಮ್ಮನ್ನ. ಸಂಪರ್ಕದಲ್ಲಿರು. ನಾವು ನಿನ್ನನ್ನ ಮಿಸ್ ಮಾಡ್ತೀವಿ’

ಗಾರ್ಡನ್ನಿನ ಉಯ್ಯಾಲೆ...ಖಾಲಿ ಉಯ್ಯಾಲೆ...ವೆರಾಂಡದಿಂದ ಕಾಣುತ್ತಿತ್ತು.  ಅಲ್ಲಿ ಅಳಲಿಲ್ಲ. ಕಣ್ಣೀರನ್ನು ಕಟ್ಟಿ ಹಿಡಿದಿದ್ದೆ. ಅವರೂ ಅದನ್ನ ಬಯಸುತ್ತಿರಲಿಲ್ಲ. ’ಮಾರಾಯ...ಗಂಡಸರು ಅಳಬಾರದು’ ಅಂತ ಚಟಾಕಿ ಹಾರಿಸುತ್ತಿದ್ದರು. ಆದರೆ, ಅವರಿಂದ ಬೀಳ್ಕೊಟ್ಟು ಟ್ಯಾಕ್ಸಿಯಲ್ಲಿ ಕೂತವನಿಗೆ ತಡೆಯಲಾಗಲಿಲ್ಲ. ಮನೆ ತಲುಪುವವರೆಗೂ ಅಳುತ್ತಲೇ ಇದ್ದೆ. ವಿನಾಕಾರಣ, ನನ್ನಿಂದ ಏನನ್ನೂ ಬಯಸದೇ ನನ್ನ ಮೇಲೆ ಸುರಿದ ಅವರ ಪ್ರೀತಿಗೆ ತಿರುಗಿ ನಾನೇನು ಕೊಟ್ಟಿದ್ದೆ? ಅವರು ನನ್ನೆದೆಗೆ ಸುರಿದದ್ದನ್ನೆಲ್ಲ ನಿರ್ಭಿಡೆಯಿಂದ ಬಾಚಿಕೊಂಡಿದ್ದೆ ಅಷ್ಟೆ. ಆವಾಗ ಅಷ್ಟು ಅರ್ಥವಾಗಿರಲಿಲ್ಲ. ಈಗ...ನಲವತ್ತರ ಅಂಚಿನಲ್ಲಿ ಎಲ್ಲ ಅರಿವಾಗುತ್ತಿದೆ. ಅವರಿಗಿಲ್ಲದ ಮಗ ನಾನಾಗಿದ್ದೆ. ಆದರೆ, ಸ್ವಂತ ಮಗನಿದ್ದಿದ್ದರೆ ನೀಡುತ್ತಿದ್ದ ಆದರ, ಪ್ರೀತಿ, ಗೌರವಗಳನ್ನು ನನ್ನಿಂದ ಒದಗಿಸುವದು ಸಾಧ್ಯವಾಗಲೇ ಇಲ್ಲ. ನಾನವರಿಗೆ ಮಗನಂತೆ ಕಂಡೆ, ಆದರೆ, ನನಗವರು ತಂದೆ –ತಾಯಿಯರಂತೆ ಕಂಡಿರಲಿಲ್ಲ. ಅದಾಗುವುದು ಸಾಧ್ಯವೂ ಇರಲಿಲ್ಲ. ಒಂದು ವೇಳೆ ಅದಕ್ಕೆ ಸಮಾನವಾದ ಸ್ಥಾನ ನೀಡಿದ್ದರೂ, ನನ್ನ ಅಪ್ಪ-ಅಮ್ಮನ ಜಾಗವನ್ನು ಅವರು ತುಂಬಲಾಗುತ್ತಿರಲಿಲ್ಲ. ಪಿಂಟೋ ದಂಪತಿಗಳಿಗೂ ಅದು ಗೊತ್ತಿತ್ತು. ಅದಕ್ಕೆ ಅವರು  ಸಂಪರ್ಕದಲ್ಲಿರು ಎಂದಷ್ಟೇ ಹೇಳಿ ಬೀಳ್ಕೊಟ್ಟಿದ್ದರು.

ನನ್ನಿಂದ ಅದೂ ಸಾಧ್ಯವಾಗಲಿಲ್ಲ, ಅಪರಾಧಿ ನಾನು.  

ಅಲ್ಲಿಂದ ಹೊರಹೊಂಟವನಿಗೆ ಮುಂದೆಂದೂ ತನ್ನ ದನಿಯ ಬಗ್ಗಾಗಲಿ, ಆಂಗಿಕ ಹಾವಭಾವಗಳ ಬಗ್ಗಾಗಲೀ ಜಿಗುಪ್ಸೆ ಹುಟ್ಟಲಿಲ್ಲ. ತನ್ನ ಸಮವಯಸ್ಕರೊಂದಿಗೆ ಸಲೀಸಾಗಿ ವ್ಯವಹರಿಸಬಲ್ಲವನಾಗಿದ್ದ. ಅವರ ಮಧ್ಯೆ ತಾನೊಬ್ಬ ಬೇರೆ ಅನ್ನುವ ಭಾವ ಕೊನೆಯಾಗಿತ್ತು. ಪಿಂಟೋ ದಂಪತಿಗಳು ನನ್ನ ಫೋನ್ ನಂಬರ್ ಕೂಡ ಇಟ್ಟುಕೊಂಡಿರಲಿಲ್ಲ. ಕೇಳಿರಲೇ ಇಲ್ಲ. ಅವರು ಕೇಳದಿದ್ರೇನಂತೆ, ನಾನಾದರೂ ಕೊಡಬಹುದಿತ್ತು. ಆದರೆ, ಎಲ್ಲಿಯಾದರೂ ಮನೆಗೆ ಕರೆ ಮಾಡಿ ನನ್ನ ಅಪ್ಪ-ಅಮ್ಮನಿಗೆ ಎಲ್ಲ ಗೊತ್ತಾಗಿ ರಾದ್ದಾಂತವಾಗುವುದು ಬೇಡ ಎಂದು ನಾನೂ ಕೊಟ್ಟಿರಲಿಲ್ಲ. ಅಪ್ಪ ಮಾತ್ರ ನಾನು ಕಂಪ್ಯೂಟರ್ ಖರೀದಿಸಲು ಯಾಕೆ ನಿರಾಕರಿಸುತ್ತಿದ್ದೇನೆಂದು ತೆಲೆಕೆಡಿಸಿಕೊಳ್ಳುವುದನ್ನ ನಿಲ್ಲಿಸಿರಲಿಲ್ಲ. ಎರಡು ವರ್ಷಗಳವರೆಗೆ ಕಾಪಾಡಿಕೊಂಡು ಬಂದಿದ್ದ ನನ್ನ ಗುಟ್ಟುಗಳನ್ನು, ಸುಳ್ಳುಗಳನ್ನು ಅವರ ಮುಂದೆ ಏಕಾಏಕಿ ಬಿಚ್ಚಿಡುವುದು ನನ್ನಿಂದಲೂ ಸಾಧ್ಯವಾಗಿರಲಿಲ್ಲ.

ಹುರುಳಿಲ್ಲದ ಆ ಬೀಳ್ಕೊಡುಗೆಯ ನಂತರ,... ವರ್ಷಗಳೇ ಕಳೆದ ನಂತರ... ಒಂದು ದಿನ ಸ್ವ ಪ್ರೇರಿತನಾಗಿ ಅವರಿಗೆ ಕರೆ ಮಾಡಿದೆ. ಆ ಬದಿಯಲ್ಲಿ ಪಿಂಟೋರವರ ಮಡದಿ ಇದ್ದರು. ನನ್ನ ಮಾರ್ಪಟ್ಟ ದನಿ ಕೇಳಿ ಅವರಿಗೆ ತುಂಬ ಖುಷಿಯಾಯಿತು. ಹೇಗೆ ನಡೀತಿದೆ ಕಾಲೇಜು ಎಂದೆಲ್ಲ ಕೇಳಿದರು. ನಾನು ಎಲ್ಲವನ್ನೂ ಸಾದ್ಯಂತವಾಗಿ ವಿವರಿಸಿ, ’ಎಲ್ಲಿ ಪಿಂಟೋ ಸರ್? ಮಾತಾಡಬಹುದಾ? ’ ಎಂದು ಕೇಳಿದೆ.

’ಓಹ್. ಅವರೆಲ್ಲಿ? ಬಿಟ್ಟು ಹೋದರು ನಮ್ಮನ್ನೆಲ್ಲ’. ಅವರ ದನಿಯ ಕಸುವು ಉಡುಗಿತ್ತು. ’ಏನು ಮಾಡೋದು...ಎಲ್ಲ ಒಂದಿಲ್ಲ ಒಂದು ದಿನ ಹೋಗಲೇ ಬೇಕಲ್ಲ. ನಿನ್ನ ನೋಡಿದ್ರೆ ಖುಷಿಪಡ್ತಿದ್ರು. ಆದರೆ ತೊಂದರೆ ಕೊಡೋದು ಯಾಕೆ ಅಂತ....ಸುಮ್ಮನಾದ್ವಿ’

’ಈಗ ಬರಬಹುದಾ ನಿಮ್ಮನ್ನ ನೋಡೋಕೆ, ಮಿಸೆಸ್ ಪಿಂಟೋ?’

ಒಂದು ಗಳಿಗೆ ಸುಮ್ಮನಿದ್ದ ಅವರು, ಆಮೇಲೆ ಹೇಳಿದ್ದರು, ’ಖಂಡಿತಾ ಬಾ. ಯಾವಾಗ ಬೇಕಿದ್ರೂ ಬಾರಪ್ಪ. ಈ ಮುದುಕಿಗೆ ಸಂತೋಷವಾಗ್ತದೆ’  

ಕೊಲಾಬಾ ಮನೆಯಲ್ಲಿ ಯಾವತ್ತೂ ವಿರಾಜಮಾನವಾಗಿರುತ್ತಿದ್ದ ಪಿಯಾನೋ ಸ್ವಸ್ಥಾನದಲ್ಲಿರಲಿಲ್ಲ. ಶ್ರೀಮತಿ ಪಿಂಟೋರವರು ಪಿಯಾನೋವನ್ನ ಮಾರಿಬಿಟ್ಟಿದ್ದರು. ಅವರೂ ಸಣ್ಣಗಾಗಿಬಿಟ್ಟಿದ್ದರು. ಮೊದಲಿನ ಅರ್ಧದಷ್ಟೂ ಇರಲಿಲ್ಲ. ಪಿಯಾನೋ ಕ್ಲಾಸುಗಳನ್ನ ನಿಲ್ಲಿಸಿದ್ದರಂತೆ. ಉಳಿದಷ್ಟು ಆಯುಸ್ಸನ್ನ ಓದಿನಲ್ಲೋ ಪ್ರಾರ್ಥನೆಯಲ್ಲೋ ಕಳೆಯೋಣವೆಂದು ಅಂದುಕೊಂಡಿದ್ದೇನೆ ಎಂದರು. ಅವರ ಜೊತೆ ಈಗ ಅವರ ಸೋದರ ಸೊಸೆ ಮೈರಾ ಇದ್ದರು. ಮಿಸ್ಟರ್ ಪಿಂಟೋರವರ ಸಾವಿನ ನಂತರ ಟೆಡ್ಡಿ ಕೂಡ ಅವರನ್ನು ಹಿಂಬಾಲಿಸಿದ್ದ. ’ಇನ್ನು ನನ್ನ ಸರದಿ’ ಎನ್ನುತ್ತ ಮುಗುಳ್ನಕ್ಕರು ಶ್ರೀಮತಿ ಪಿಂಟೋ..... ’ಅರೆ ಅಷ್ಟ್ಯಾಕೆ ನೊಂದುಕೊಳ್ತೀಯ? ಟೆಡ್ಡಿ...ಢ್ಯಾನಿ...ಕೊನೆಗೆ ನಾನು... ಎಲ್ರೂ ಒಳ್ಳೇ ಇನಿಂಗ್ಸನ್ನೇ ಮುಗಿಸಿದ್ದೇವೆ ಬಿಡು.’

ಮಿಸ್ಟರ್ ಪಿಂಟೋ ಸುಳಿವುಕೊಡದೇ, ಇದ್ದಕ್ಕಿದ್ದಂತೆ ಒಂದು ದಿನ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಆವತ್ತು ಇಂಡೋ ಅಮೇರಿಕನ್ ಸೊಸೈಟಿಯಿಂದ ಮನೆಗೆ ಮರಳಿದವರಿಗೆ ಯಾಕೋ ಸುಸ್ತೆನಿಸಿತಂತೆ. ವೈದ್ಯರು ಬರುವುದರೊಳಗಾಗಿ ಎಲ್ಲ ಮುಗಿದಿತ್ತು. ಇದನ್ನ ಮಿಸೆಸ್ ಪಿಂಟೋ ಹೇಳಲಿಲ್ಲ, ಅವರ ಸೊಸೆ ಮೈರಾ. ಮೆಟ್ಟಿಲಿಳಿಯುವಾಗ ಹೇಳಿದ್ದರು. ಆಂಟಿಯೂ ಇನ್ನು ಹೆಚ್ಚು ದಿನ ಇರುವ ಸಾಧ್ಯತೆ ಇಲ್ಲ, ಅವರು  ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದೂ ಹೇಳಿದ್ದರು. ಆದಾಗೆಲ್ಲ ಒಮ್ಮೆ ಬಂದು ಮಾತಾಡಿಸಿಕೊಂಡು ಹೋಗಿ ಎಂದಿದ್ದರು.

ಅವರಿಗಾಗಿ ಏನನ್ನಾದರೂ ಮಾಡಬಹುದಾದ ಆ ಅವಕಾಶವೂ ನನ್ನಿಂದ ಕೈತಪ್ಪಿ ಹೋಯಿತು. ಒಂದು ವಾರಕ್ಕೆ ಇಂಗ್ಲೆಂಡಿಗೆ ಹೋಗುವವನಿದ್ದೆ.

ನನ್ನ ಮತ್ತು ಅವರ ಕೊನೆಯ ಭೇಟಿಯಾದ ದಿನ ಕೈಯ್ಯಲ್ಲಿ ಒಂದಿಷ್ಟು ಡೇರೆ ಹೂಗಳನ್ನ ಹಿಡಿದುಕೊಂಡು ಹೋಗಿದ್ದೆ. ಅವರದನ್ನ ಮೈರಾಗೆ ಕೊಟ್ಟು ಅಲ್ಲೇ ಇದ್ದ ಖಾಲಿ ವಾಸಿನಲ್ಲಿ ಜೋಡಿಸಿಡಲು ಹೇಳಿದರು. ಅವರ ಕಿರುನಗುವಿನಿಂದ ತಿಳಿಯುತ್ತಿತ್ತು, ಅವರಿಗೆ ಅದು ಖುಷಿ ಕೊಟ್ಟಿದೆ ಎನ್ನುವುದು. ’ಒಳ್ಳೇ ಕೆಲಸ ಮಾಡಿದೆ ಕಣಪ್ಪ. ಡ್ಯಾನಿಗೆ ಕೆಂಪು ಗುಲಾಬಿಗಳೆಂದರೆ ಪ್ರೀತಿ. ನನಗೆ ಡೇರೆ ಹೂ ಇಷ್ಟ. ಈಗ ಯಾರೂ ಹೂ-ಗೀ ತರೋದಿಲ್ಲ ಇಲ್ಲಿ...’ ಅಲ್ಲಿಗೆ ನಿಲ್ಲಿಸಿದರು. ನಾನು ಇಂಗ್ಲೆಂಡಿಗೆ ಹೋಗುತ್ತಿದ್ದೇನೆ ಎಂದು ತಿಳಿದು ಹಾರೈಸಿದ್ದರು. ನೀನು ಅಷ್ಟಷ್ಟು ದೂರ ಹೋದರೆ ನಿಮ್ಮಮ್ಮ ಏನು ಮಾಡ್ತಾರೆ ಅಂತ ಕೇಳಿದರು. ’ಹುಷಾರು ಕಣಪ್ಪ. ಅಲ್ಲಿ ವಿಪರೀತ ಚಳಿಯಂತೆ. ಬೆಚ್ಚಗಿರು ಯಾವಾಗಲೂ’ ಎಂದಂದು ಬೀಳ್ಕೊಟ್ಟಿದ್ದರು.  
ಹೊರಡುವಾಗ ಮತ್ತೆ ಉಸುರಿದ ಕೊನೆಯ ಸಾಲು ’ಮರೀಬೇಡ...ಸಂಪರ್ಕದಲ್ಲಿರು’.

ಮತ್ತೆ ನನ್ನಿಂದದು ಸಾಧ್ಯವಾಗಲಿಲ್ಲ. ಕೆಲವು ವಾರಗಳ ನಂತರ ನೆನಪಾಗಿ ಕರೆ ಮಾಡಿದಾಗ...ಮೈರಾ ಫೋನೆತ್ತಿಕೊಂಡರು. ’ಅವರಿಲ್ಲ’ ಎಂದರು.

ಹೋಗುವವರು ಸುಮ್ಮನೆ ಹೋಗಲಿಲ್ಲ. ಅವರಿಂದಾಗಿ ನಾನು ಗಂಡಸಾಗಿದ್ದೆ. ಚಿಕ್ಕದೋ ದೊಡ್ಡದೋ,,,ಕನಸುಗಳನ್ನ ಸಾಕಾರಗೊಳಿಸಿಕೊಳ್ಳುವುದನ್ನ ಕಲಿಸಿ ಹೋದರು. ಸಿನೆಮಾ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಸಭೆಯ ನಿರ್ವಹಣೆಯನ್ನು ಮಾಡುವ, ಸಾರ್ವಜನಿಕ ವೇದಿಕೆಯಲ್ಲಿ ಘನವಾಗಿ ಮಾತಾಡುವ, ಕಿರುತೆರೆಯ ಕಾರ್ಯಕ್ರಮಗಳನ್ನು ನಿರ್ವಹಿಸುವ, ರಿಯಾಲಿಟಿ ಶೋಗಳಲ್ಲಿ ನಿರ್ಣಾಯಕನಾಗುವ, ಈ ಎಲ್ಲ ಬಗೆಯ ಯಶಸ್ಸಿನ ಹಿಂದೆ ಅವರಿದ್ದಾರೆ.

ಈಗ ಯಾರಾದರೂ ’ಎಷ್ಟು ಚೆನ್ನಾಗಿ ಸ್ಫುಟವಾಗಿ ಮಾತಾಡ್ತೀಯಲ್ಲ ಕರಣ್’ ಎಂದು ಅಭಿನಂದಿಸುವಾಗೆಲ್ಲ,,, ನನ್ನ ಹೃದಯ ಕೊಲಾಬಾದ ಆ ಮನೆ ಮತ್ತು ಗಾರ್ಡನ್ನಿನ ಆ ಖಾಲಿ ತೂಗುಯ್ಯಾಲೆಯತ್ತ ಧಾವಿಸುತ್ತದೆ.

ಕನ್ನಡಕ್ಕೆ- ಪ್ರಜ್ಞಾ ಶಾಸ್ತ್ರಿ


ಮೂಲ – ‘speaking of Mr. and Mrs. Pinto’ by Karan Johar in FACTION edited by Khalid Mohamed

    


ಈ ಕತೆ ಬರೆದವರು ಹಿಂದೀ ಸಿನೆಮಾ ಜಗತ್ತಿನ ಜನಪ್ರಿಯ ನಿರ್ದೇಶಕ ಕರಣ್ ಜೋಹರ್‌ರವರು.  ಈ ಕತೆ ಮತ್ತು ಉಳಿದಂತೆ ೨೨ ಸಿನೆಮಾ ಮಂದಿಯ ಕತೆಗಳನ್ನು ಖ್ಯಾತ ಚಿತ್ರ ವಿಮರ್ಶಕರೂ, ನಿರ್ದೇಶಕರೂ ಆದ ಖಲೀದ್ ಮೊಹಮದ್‌ರವರು ಸಂಪಾದಿಸಿದ್ದಾರೆ. ಆ ಪುಸ್ತಕದ ಹೆಸರು ’ಫ್ಯಾಕ್ಷನ್’ (FACTION).  ಇಲ್ಲಿರುವ ಕತೆಗಳನ್ನು ನಿಜ ಬದುಕಿನ ಘಟನೆಗಳನ್ನಾಧರಿಸಿ ಹೆಣೆದ ಕಾಲ್ಪನಿಕ ಕತೆಗಳು ಅನ್ನಬಹುದೇನೋ. ಈ ಕತೆಯಲ್ಲಿ ಕೂಡ ಕರಣ್‌ರವರ ವೈಯಕ್ತಿಕ ಬದುಕಿನ ಝಲಕನ್ನು ಓದುಗರು ಗುರುತಿಸಬಹುದು.