Monday, October 20, 2014

ಗಾಂಧಿ ಮತ್ತು ಕವಿತೆ


Photo Courtesy: Wikipedia 

















ಒಂದು ದಿನ ಒಂದು ಬಡಕಲು ಕವಿತೆ
ಗಾಂಧಿಯ ಆಶ್ರಮಕ್ಕೆ ಬಂತು
ಒಮ್ಮೆ ಅವರನ್ನು ನೋಡಬೇಕು ಎಂದು.
ರಾಮನ ಧ್ಯಾನದಲ್ಲಿ ನೂಲು ತೆಗೆಯುತ್ತ
ಕುಳಿತಿದ್ದ ಗಾಂಧಿ ಕವಿತೆಯನ್ನು ಗಮನಿಸಲಿಲ್ಲ
ತಾನು ಭಜನೆಯಲ್ಲವೆಂಬ ಸಂಕೋಚ ಹೊತ್ತು
ಬಾಗಿಲಲ್ಲೇ ಕಾಯುತ್ತ ನಿಂತಿತ್ತು ಕವಿತೆ



ಮೆತ್ತಗೆ ಕೆಮ್ಮಿತ್ತು ಕವಿತೆ ತಡೆಯಲಾಗದೆ
ಗಾಂಧಿ ದನಿ ಬಂದತ್ತ  ನೋಡಿದರು
ನರಕ ಕಂಡ  ಚಶುಮದೊಳಗಿಂದ
ನೂಲು ತೆಗೆದಿದ್ದೀಯಾ ಯಾವತ್ತಾದರೂ?
ಕೇಳಿದರು ಕವಿತೆಯನ್ನ
ತಿಪ್ಪೆ ಗುಡಿಸಿದ್ದೀಯ? ಮಲ ಹೊತ್ತಿದ್ದೀಯಾ?
ನಸುಕಿನಲ್ಲೇ ಎದ್ದು, ಅಡುಗೆ ಒಲೆಗೆ ಕಟ್ಟಿಗೆ ತಳ್ಳಿ,
ಕೆಂಡವೂದಿ, ಎದ್ದ ಹೊಗೆಯಲ್ಲಿ ಕಣ್ಣು-ಮೂಗು ಕೆಂಪಾಗಿಸಿಕೊಂಡಿದ್ದುಂಟೋ?
ಯಾವತ್ತಾದರೂ  ಹೊಟ್ಟೆಗಿಲ್ಲದೆ ಕಂಗಾಲಾಗಿದ್ದೆಯಾ?


ಕವಿತೆ ಹೇಳಿತು, ಹುಟ್ಟಿದ್ದು ಅಡವಿಯಲ್ಲಿ
ಶಿಕಾರಿಯೊಬ್ಬನ ಬಾಯಿಂದ ಹೊರಬಿದ್ದೆ
ಮೀನುಗಾರನೊಬ್ಬನ ಕೊಪ್ಪಲಿನಲ್ಲಿ ಬೆಳೆದೆ.
ಆದರೂ ಕೆಲಸ ಮಾಡಿ ಗೊತ್ತಿಲ್ಲ ನನಗೆ
ಹಾಡುವುದೊಂದನ್ನು ಬಲ್ಲೆ
ಮೊದಮೊದಲು ಆಸ್ಥಾನದಲ್ಲಿ ಹಾಡುತ್ತಿದ್ದೆ
ಆವಾಗ ಮೈ-ಕೈ ತುಂಬಿಕೊಂಡು ಸುಂದರವಾಗಿದ್ದೆ;
ಈಗ ಬೀದಿಯಲ್ಲಿ ಹಾಡುತ್ತೇನೆ, ಹೊಟ್ಟೆ
ತುಂಬಿದರೆ ತುಂಬೀತು, ಇಲ್ಲದಿದ್ದರೆ ಇಲ್ಲ.

ಪರವಾಗಿಲ್ಲ, ಗಾಂಧಿ ಹೇಳಿದರು,
ತುಂಟ ಕಿರುನಗುವೊಂದನ್ನು ಸೂಸುತ್ತ,
ಆವಾಗಾವಾಗ ಸಂಸ್ಕೃತದಲ್ಲಿ ಮಾತಾಡುವ
ಅಭ್ಯಾಸವೊಂದನ್ನ ಬಿಡಬೇಕು ನೀನು!
ಹೊಲ ಗದ್ದೆಗಳಲ್ಲಿ ತಿರುಗಾಡು
ಬೇಸಾಯಗಾರನ ಮಾತಿಗೆ ಕಿವಿ ಕೊಡು


ಅಲ್ಲಿಂದೆದ್ದು ಹೊರಟ ಕವಿತೆ
ಮುಂಗಾರಿಗೆ ಮುನ್ನ ಒಂದು ಧಾನ್ಯವಾಗಿ
ಉಳುವವನನ್ನು ಎದುರು ನೋಡುತ್ತ
ಕಾದು ಕೂತಿತ್ತು ಹೊಲದೊಳಗೆ
ಬಿದ್ದ ಹೊಸ ಮಳೆಗೆ ಗದ್ದೆ ಹೂಡಿ
ಹಸಿ ಮಣ್ಣ ಸಡಿಲಿಸಿ ಹದಗೊಳಿಸುವ ಕ್ಷಣಕ್ಕಾಗಿ


-[೧೯೯೩
-ಕೆ. ಸಚ್ಚಿದಾನಂದನ್  
-Translation of K. Satchidanandan's poem 'Gandi and Poetry'

ಕೆ. ಸಚ್ಚಿದಾನಂದನ್ ಮಲಯಾಳಂನ ಪ್ರಸಿದ್ಧ ಕವಿ. 1946 ರಲ್ಲಿ ತ್ರಿಸೂರಿನ ಒಂದು ಹಳ್ಳಿಯಲ್ಲಿ ಜನಿಸಿದ ಇವರು ಆಂಗ್ಲ ಸಾಹಿತ್ಯದಲ್ಲಿ  ಸ್ನಾತಕೋತ್ತರ ಪದವಿ  ಮತ್ತು ಆನಂತರದಲ್ಲಿ ಪಿ. ಎಚ್. ಡಿ ಪದವಿಯನ್ನು ಕೂಡ ಪಡೆದುಕೊಂಡಿದ್ದಾರೆ. ನವ್ಯ ಶೈಲಿಯ ಇವರ ಕವಿತೆಗಳು ವಿಶ್ವದ ಅನೇಕ ಭಾಷೆಗಳಲ್ಲಿ ಅನುವಾದಗೊಂಡಿವೆ. ಇವರು Indian Literature ಎನ್ನುವ ಜರ್ನಲ್ಲಿನ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕೆಡೆಮಿಯ ಸೆಕ್ರೆಟರಿಯೂ ಆಗಿದ್ದವರು.

ಇವರ ಕವಿತೆಗಳನ್ನು ಇಟಾಲಿಯನ್ ಭಾಷೆಗೆ ಅನುವಾದಿಸಿದ ಕಾರ್ಲೊ ಸಾವಿನಿ ಎಂಬ ಲೇಖಕರು ಗುರುತಿಸುವಂತೆ ಇವರ ಕವಿತೆಗಳು ನವ್ಯ ಶೈಲಿಯವು. ತಮ್ಮ ಗ್ರಹಿಕೆಗೆ ಬಂದ ಅನುಭವವನ್ನು ಕಾವ್ಯದಲ್ಲಿ ಹಿಡಿದಿಡುವಾಗ ಕಾಳಜಿ ಪೂರ್ವಕವಾಗಿ ಆಯ್ದ ಸರಳ ಪರಿಭಾಷೆಯನ್ನು ಬಳಸುತ್ತಾರೆ.  ಕವಿತೆಗಳ ಮೂಲಕ ತನ್ನೊಂದಿಗೂ ಮತ್ತು ಓದುಗನೊಂದಿಗೂ ಒಂದು “non-rhetorical” ಸಂವಾದ ನಡೆಸುತ್ತಿರುತ್ತಾರೆ. ಸಮೃದ್ಧ ರೂಪಕಗಳು, ಮೋಡಿ ಮಾಡುವ ಪದ ಲಾಲಿತ್ಯ, ಮತ್ತು ವಿಡಂಬನೆ ಇವರ ಕವಿತೆಗಳ ವೈಶಿಷ್ಟ್ಯ ಎನ್ನುತ್ತಾರೆ ಇಟಲಿಯ ಲೇಖಕ. ಅದಷ್ಟೇ ಅಲ್ಲ, ಅವರ ಕವಿತೆಗಳಲ್ಲಿ ಕಥನವೊಂದು .ಅಡಗಿರುತ್ತದೆ ಎಂದು ನನಗನಿಸುತ್ತದೆ. ಹಿಂದುಸ್ತಾನಿಯಲ್ಲಿ ಬರೆಯುವ ನಮ್ಮ ನಲ್ಮೆಯ ಕವಿ ಗುಲ್ಜಾರ್ ಕವಿತೆಗಳ ಹಾಗೆ. ಓದುಗ ಸಂವಾದ ನಡೆಸುವುದೊಂದೇ ಅಲ್ಲ, ಪೂರ್ತಿ ಬಿಚ್ಚಲಾಗದ ಕತಯೊಂದರ ಸನ್ನಿವೇಶದೊಳಗೆ ಮೂಕ ಸಾಕ್ಷಿಯೂ ಆಗಿರುತ್ತಾನೆ.

ಇದುವರೆಗೂ ಇವರ ಸುಮಾರು ಇಪ್ಪತ್ತೊಂದು ಕವಿತಾ ಸಂಕಲನಗಳು ಹೊರಬಂದಿವೆ. ಹೆಚ್ಚಿನವು ಮಲಯಾಳಂನವುಅವುಗಳಲ್ಲಿ ಕೆಲವನ್ನು ಕವಿಯೇ ಇಂಗ್ಲೀಷಿಗೆ ತರ್ಜುಮೆ ಮಾಡಿದ್ದಾರೆ. ಕೇರಳ ರಾಜ್ಯದ ಸಾಹಿತ್ಯ ಪ್ರಶಸ್ತಿಗಳಲ್ಲದೇ ಅನೇಕ ಅಂತರ್ರಾಷ್ಟ್ರೀಯ ಪ್ರಶಸ್ತಿಗಳೂ ಇವರಿಗೆ ದಕ್ಕಿವೆ. ಕಳೆದ ವರ್ಷ (2013) ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದಿಂದ ಕೊಡಲಾಗುವ ಮೊದಲ ಕುವೆಂಪು ಪ್ರಶಸ್ತಿ ಇವರಿಗೆ ಸಂದಿದೆ.

ಕಾವ್ಯವೆಂಬುದು ಅವರಿಗೆ ಬರಿಯ ಶಬ್ಧಗಳೊಂದಿಗೆ ಆಡುವ ಆಟವಲ್ಲ. ಅದು ಅವ್ಯಕ್ತದ ಕಡಲೊಳಗಿಂದ ಆವಿರ್ಭಾವವಾಗುತ್ತದೆ, ತಡೆಯಲಾಗದ ತವಕವನ್ನು ವ್ಯಕ್ತಗೊಳಿಸುವ ಯತ್ನ. ಹೆಸರಿಲ್ಲದ್ದಕ್ಕೆ ಹೆಸರಿಡುವ ತವಕ, ದನಿಯಿಲ್ಲದ್ದಕ್ಕೆ ದನಿಯಾಗುವ ತವಕ. ಹಾಗೆಂದು ಸ್ವತಃ ಕವಿ ಹೇಳುತ್ತಾರೆ.

ನನಗೆ ಮಲಯಾಳಂ ಬರುವುದಿಲ್ಲ! ಅವರ ಇಂಗ್ಲೀಷ್ (ಮಲಯಾಳಂ ನಿಂದ ಅವರೇ ಇಂಗ್ಲೀಷಿಗೆ ತಂದ) ಕವನಗಳನ್ನು ಮಾತ್ರ ಓದಬಲ್ಲೆ. ಇವರ ಬಗ್ಗೆ ಕೇಳಿ ಗೊತ್ತಿತ್ತೆ ವಿನಃ ಓದುವ ಅವಕಾಶ ಇದುವರೆಗೂ ಆಗಿರಲಿಲ್ಲ. ಇಲ್ಲಿಯ ಪುಸ್ತಕ ಮಳಿಗೆಯೊಂದರಲ್ಲಿ ಅಚಾನಕ್ಕಾಗಿ ಕಂಡ ಅವರ ಕವನ ಸಂಕಲನವೊಂದನ್ನು ಸುಮ್ಮನೆ ತಿರುವಿದಾಗ ಮೊದಲು ಕಣ್ಣಿಗೆ ಬಿದ್ದದ್ದು ಅವರ Granny ಕವಿತೆ. ಅದನ್ನ ಓದಿದವಳು ತಲೆ ಕೆಟ್ಟು ಆ ಪುಸ್ತಕವನ್ನ ಮನೆಗೆ ತಂದೆ. ಇದೇ ಬ್ಲಾಗಿನ ’ಸಚ್ಚಿದಾನಂದನ್ ಕವಿತೆಗಳು’ ಎಂಬ ಪೋಸ್ಟಿನಲ್ಲಿ ಅದರ ಅನುವಾದ ಕೂಡ ಇದೆ. ಅವರ ಕಾವ್ಯ ಜಗತ್ತಿನಲ್ಲಿ ಇಷ್ಟಿಷ್ಟೇ ಪ್ರವೇಶ ಪಡೆಯುತ್ತಿದ್ದೇನೆ.

ಇವರ ಕವಿತೆಗಳು ಈಗಾಗಲೇ ಕನ್ನಡದ ಪತ್ರಿಕೆಗಳಲ್ಲಿ ಅನುವಾದಗೊಂಡಿರಬಹುದು. ಆದರೆ ನನಗೆ ಅದರ ಅರಿವಿಲ್ಲ. ಇಲ್ಲಿ,   ಈ ಔರಂಗಾಬಾದ್ ಎಂಬ ದ್ವೀಪದಲ್ಲಿ ನನಗೆ ಕೈಗೆಟುಕಿದಷ್ಟೇ ಆಕಾಶ! ಹಾಗಾಗಿ ಎಲ್ಲರಿಗೂ ಈಗಾಗಲೇ ಗೊತ್ತಿರುವುದೇನನ್ನೋ ಆಗಷ್ಟೇ ನಡೆಯಲಾರಂಭಿಸಿದ ಮಗುವಿನ ಉತ್ಸುಕತೆಯಲ್ಲಿ ನಿಮ್ಮೆದುರು ಪ್ರಸ್ತುತ ಪಡೆಸುತ್ತಿದ್ದೇನೆ ಎಂದು ನಿಮಗನ್ನಿಸಿದರೆ ಕ್ಷಮೆ ಇರಲಿ.

ಖುಷಿಯ ಸಮಾಚಾರವೆಂದರೆ ಕೆ. ಸಚ್ಚಿದಾನಂದನ್ ತಮ್ಮ ಕವಿತೆಗಳ ಕನ್ನಡ ಅನುವಾದಕ್ಕೆ ತಮ್ಮ ಪರವಾನಿಗೆ ಇತ್ತಿದ್ದಾರೆ. ಮತ್ತು ಆ ಅನುವಾದಿತ ಕವಿತೆಗಳನ್ನ ನಾನು ನನ್ನ ಬ್ಲಾಗಿನಲ್ಲಿ ಪ್ರಕಟಿಸಿಕೊಳ್ಳಲೂ ಸಮ್ಮತಿ ಸೂಚಿಸಿದ್ದಾರೆ. ಅವರಿಗೆ ನನ್ನ ಅನಂತ ಧನ್ಯವಾದಗಳು. ಮೂಲ ಕವಿಯ ಆಶಯಕ್ಕೆ ಚ್ಯುತಿ ಬರದೇ ಇರುವ ಹಾಗೆ ಕನ್ನಡಕ್ಕೆ ತರುವುದು ಗುರುತರ ಜವಾಬ್ದಾರಿಯೆಂದು ನಾನು ಭಾವಿಸುತ್ತೇನೆ. ನಾನು ಎಡವಿದೆ ಎಂದನ್ನಿಸಿದರೆ ತಿದ್ದಲು ನೀವಿದ್ದೀರಲ್ಲವೆ?

-ಪ್ರಜ್ಞಾ  



3 comments:

  1. ಆ ಕೊನೆಯ ಪ್ಯಾರಾ ಇದೆಯಲ್ಲ ಅಷ್ಟು ಶಕ್ತವಾಗಿದೆ.. ಸುಮ್ಮನೆ ಹಾಗೆ ಒಂದು ಕಾಲ್ಪನಿಕ ಚಿತ್ರ ಹಾದುಹೋಗಬೇಕು ... ಚೆನ್ನಾಗಿದೆ ಮತ್ತಷ್ಟು ಮಾಡಕ್ಕೋ :) :)

    ReplyDelete
  2. ಪ್ರಜ್ಞಾ, ಒಂದು ಉತ್ಕೃಷ್ಟ ಕವನವನ್ನು ಕನ್ನಡಿಸಿ ಕೊಟ್ಟಿದ್ದಕ್ಕಾಗಿ ನಿಮಗೆ ನಾನು ಋಣಿಯಾಗಿದ್ದೇನೆ. ಶ್ರಮ ಮತ್ತು ಸೌಂದರ್ಯದ ಈ ದ್ವಂದ್ವವು ಗಾಂಧೀಜಿ ಮತ್ತು ಠಾಕೂರರಲ್ಲಿಯೂ ಇತ್ತು ಎಂದು ಕೇಳಿದ್ದೇನೆ. ಕವನದ ಮೂಲಲೇಖಕ ಸದಾನಂದನ್ ಅವರ ಪರಿಚಯಕ್ಕಾಗಿ ಹಾಗು ಸಮರ್ಥವಾದ ಅನುವಾದಕ್ಕಾಗಿ ಧನ್ಯವಾದಗಳು. ದಯವಿಟ್ಟು ಈ ಅನುವಾದಕಾರ್ಯವನ್ನು ಮುಂದುವರೆಸಿರಿ.

    ReplyDelete
  3. ತುಂಬಾ ಚೆನ್ನಾಗಿದೆ

    ReplyDelete