Wednesday, October 8, 2014

ಎಲ್ಲ ನೆನಪಾದವನ ಕತೆ


ಆಗಷ್ಟೇ ಹರೆಯ ಹುಟ್ಟಿದ ಹುವಾತ್ಸೇ ಗೆ
ಒಮ್ಮಿಂದೊಮ್ಮೆಲೆ ಮರೆವಿನ ರೋಗ ಮೆತ್ತಿಕೊಂಡಿತು.
ಕೋಣೆಯಲ್ಲಿರುವಾಗ ಕೂರಬೇಕೆಂಬುದನ್ನು ಮರೆಯುತ್ತಿದ್ದ
ಬೀದಿಯ ಮೇಲೆ ನಡೆಯಬೇಕೆಂಬುದನ್ನು ಮರೆಯುತ್ತಿದ್ದ
ಊಟ-ತಿಂಡಿ ಮರೆತ, ಉಡುಗೆ-ತೊಡುಗೆ ಮತ್ತು ನಿದ್ದೆಯನ್ನೂ ಸಹ
ಹಗಲು ಮತ್ತು ರಾತ್ರಿಯನ್ನೂ, ಆಮೇಲೆ ನೆಂಟರಿಷ್ಟರನ್ನೂ ಮರೆತಾದ ಬಳಿಕ
ಒಂದು ದಿನ, ತನ್ನ ಹೆಸರನ್ನೂ ಮರೆತ.

ಹೀಗೇ,,,ಇಲ್ಲಿಯವರೆಗೆ ಏನೋ ಒಂದು ಆಗಿದ್ದ ಹುವಾತ್ಸೆ ಈಗ ಏನೂ ಅಲ್ಲದವನಾದ
ಹಕೀಮರನ್ನು ಕರೆಯಿಸಿದರು, ಮಾಂತ್ರಿಕರನ್ನು ಕರೆಯಿಸಿದರು
ಪ್ರಯೋಜನವಾಗಲಿಲ್ಲ.
ಕೊನೆಗೊಮ್ಮೆ ಮಹಾಗುರು ಮೆನ್ಶಿಯಸ್ ನ ಸಲಹೆಯ ಮೇರೆಗೆ
ಉಪವಾಸ ಕೆಡವಿದರು ಅವನನ್ನ
ಮೂರು ಹಗಲು ಮೂರು ಇರುಳು
ಆಗ ಇವನಿಗೆ ಊಟ-ತಿಂಡಿಯ ನೆನಪಾಯಿತು
ಕೊರೆವ ಚಳಿಯಲ್ಲಿ ಹಿಮದ ಮೇಲೆ ಮಲಗಿಸಿದರು
ಇವನಿಗೆ ಉಡುಗೆ-ತೊಡುಗೆಯ ಖಯಾಲು ಬಂತು.

ನಂತರ, ಅವನನ್ನ ವರ್ತಮಾನದಲ್ಲಿಟ್ಟರು
ಗತದ ನೆನಪು ಬಂತು
ಗತದೊಳಗಿಟ್ಟರು, ಅವನು ಭವಿಷ್ಯವನ್ನು ನೆನಪಿಸಿಕೊಂಡ
ಒಂದೊಂದಾಗಿ ಎಲ್ಲವೂ ನೆನಪಿಗೆ ಬಂತು.
ಹಾಗೆ ಎದ್ದವನ ಕಣ್ಣುಗಳಲ್ಲಿ ರೋಷ
ಮೆನ್ಶಿಯಸ್ ನ ಎದುರು ಕಿರುಚಿದ
ಏನೂ ಅಲ್ಲದವನಾದಾಗ ನಾನು ತುಪ್ಪಳದಷ್ಟು ಹಗುರವಾಗಿದ್ದೆ
ಮರೆವು ಬಿಡುಗಡೆಯಾಗಿತ್ತು. ಅಂಕೆಯಿಲ್ಲದ, ಬಿಂದಾಸ್ ಬದುಕು.
ಈಗ ನೀವು ಎಲ್ಲವನ್ನೂ ಹಿಂದಿರುಗಿಸಿದಿರಿ
ನನ್ನೆಲ್ಲ ಹೊರೆಯನ್ನು, ಹಿಂದಾಗಿದ್ದನ್ನೂ
ಈಗ ಹಿಂದೆಂದಿಗಿಂತಲೂ ಹೆಚ್ಚು ವ್ಯಾಕುಲ ಮತ್ತು ಒಂಟಿ ಪಿಶಾಚಿ
ವ್ಯಾಕುಲತೆ ಮತ್ತು ಒಂಟಿತನ ಇವೆರಡೂ ನನ್ನ
ಅಸ್ತಿತ್ವದ ಆವರಣವನ್ನೇ ಮುರಿಯುತ್ತಿವೆ
ಹಿಂತೆಗೆದುಕೊ ನನ್ನ ನೆನಪನ್ನು, ನನಗದು ಬೇಡ”
ಮರುಗಿದ ಮೆನ್ಶಿಯಸ್ ಕೂಡ.
ಆದರೆ ಹುವಾತ್ಸೆಯ ಮರೆವನ್ನು ಹಿಂತಿರುಗಿಸಲಾರ.
ಹೀಗೆನಾವು ಮನುಜರು ಹುವಾತ್ಸೆಯ ವಂಶಜರು
ನೆನಪಿನ ಶಾಪ ಹೆಗಲ ಮೇಲಿನ ಹೊರೆ
ಒಟ್ಟಿನಲ್ಲಿ ಏನಾದರೊಂದು ಆಗಿರಬೇಕು ನಾವೆಲ್ಲ.



-  ಕೆ. ಸಚ್ಚಿದಾನಂದನ್ (ಮೂಲ) 
   ಕನ್ನಡಕ್ಕೆ ಪ್ರಜ್ಞಾ ಶಾಸ್ತ್ರಿ 

The Man who remembered everything' from the collection  "While I write" 

[ಮೂಲ ಮಲಯಾಳಂ. ಮಲಯಾಳಂ ನಿಂದ ಇಂಗ್ಲೀಷಿಗೆ ಸ್ವತಃ ಕವಿಯೇ ತರ್ಜುಮೆ ಮಾಡಿದ್ದಾರೆ. ನಾನು ಅನುವಾದಿಸಿದ್ದು ಇಂಗ್ಲೀಷಿನಲ್ಲಿ ಬಂದ ಅವರ ಕವಿತೆಗಳನ್ನ] 




1 comment:

  1. ಸುಂದರವಾದ ಕವನಕ್ಕಾಗಿ ಧನ್ಯವಾದಗಳು.

    ReplyDelete