Tuesday, October 7, 2014

ಸಚ್ಚಿದಾನಂದನ್ ಕವಿತೆಗಳು



1. ಸ್ಥಾನ ಪಲ್ಲಟ 



ಒಂದರೆಗಳಿಗೆ...
ಬದುಕಿನಲ್ಲಿ ಈವರೆಗೆ ಮರೆತು
ಎಲ್ಲೋ ಇಟ್ಟ ವಸ್ತುಗಳೆಲ್ಲ
ಒಂದೊಂದಾಗಿ ನೆನಪಾಗುತ್ತಿವೆ

ಮಾವಿನ ತೋಪಿನ ಒಣ ತರಗೆಲೆಗಳ ಒಳಗೆ
ಮರೆತಿಟ್ಟ ನಯ ಹೊಳಪಿನ ಗೋಲಿಗಳು
ಮಳೆ ಬರದೇ ಇದ್ದ ಒಂದು ದಿನ
ಅಪ್ಪಣ್ಣನ ಕ್ಷೌರದಂಗಡಿಯಲ್ಲಿ ಬಿಟ್ಟು ಬಂದ ಕೊಡೆ
ಶಾಲೆಯಿಂದ ಬರುವಾಗ ಗೇರು ಮರ ಹತ್ತಲು ಹೋಗಿ
ಕಿಸೆಯಿಂದ ಜಾರಿ ಬಿದ್ದ ಪೆನ್ನು
ರಿಗಾದ ಹೊಟೆಲ್ಲಿನ ಕಪಾಟಿನಲ್ಲೇ
ಉಳಿದು ಹೋದ ತಿಳಿ ನೀಲಿ ಶರಟು
ಓದಲಿಕ್ಕೆಂದು ಇಸಿದುಕೊಂಡು ಹೋಗಿ
ಮರಳಿ ಕೊಡದೇ ಇದ್ದ ಎಷ್ಟೋ ಪುಸ್ತಕಗಳು
ಮರಳಿ ಪಡೆಯದ ಒಂದಿಷ್ಟು ಸಾಲ, ಒಂದಿಷ್ಟು ಪ್ರೇಮ...
ಮರೆಗುಳಿತನವೊಂದೇ ಇನ್ನೂವರೆಗೆ ನನ್ನ ಕೈಬಿಟ್ಟಿಲ್ಲ

ಪ್ರೇಮದಲ್ಲಿ  ಹೃದಯ ಸ್ಥಾನ ಪಲ್ಲಟಗೊಂಡಿದ್ದಕ್ಕೆ ಲೆಕ್ಕವಿಲ್ಲ
ಕವಿತೆಯಲ್ಲಿ ರೂಪಕಗಳು ಸ್ಥಾನ ಪಲ್ಲಟಗೊಂಡಿದ್ದಕ್ಕೂ ಲೆಕ್ಕವಿಲ್ಲ

ಆಮೇಲೆ, ಬೆಟ್ಟಗಳನ್ನ ನೋಡುತ್ತ ಅಂದುಕೊಳ್ಳುತ್ತಿದ್ದೆ
ಆಕಾಶ ಅವುಗಳನ್ನ ಎಲ್ಲೋ ಮರೆತಿಟ್ಟಿದೆ
ಹಾಗೆಯೇ ಮೋಡಗಳು ಕಾಮನ ಬಿಲ್ಲನ್ನ
ಎಲ್ಲೋ ಇಟ್ಟು ಮರೆತು ಹೋಗಿವೆ ಎಂದು
ಇತ್ತೀಚೆಗೆ ಅನುಮಾನವಾಗುತ್ತಿದೆ
ನಾವಿರುವ ಈ ಭೂಮಿಯನ್ನೂ ದೇವರು ಮರೆತಿಟ್ಟಿದ್ದಾನೆ ಇಲ್ಲಿ
ಒಂದು ವೇಳೆ ಅವನಿಗೆ ನೆನಪಾದರೆ
ಎಲ್ಲವನ್ನೂ ಮರಳಿ ಒಯ್ಯುತ್ತಾನೆ
ಮೊದಲು ಕಾಡುಗಳನ್ನ, ಆಮೇಲೆ  ನದಿಗಳನ್ನ,  ಮತ್ತೂ ಆಮೇಲೆ ನಮ್ಮನ್ನ.




2. ನನ್ನಜ್ಜಿ


ನನ್ನಜ್ಜಿಗೆ ತಲೆ ಕೆಟ್ಟಿತ್ತು.
ಅವಳ ಹುಚ್ಚು ದಿನೇ ದಿನೇ ಬೆಳೆದು, ಹಣ್ಣಾಗಿ, ಸಾವಾದಾಗ,
ನನ್ನ ಮಾವ, ಮಹಾ ಜಿಪುಣ, 
ಅವಳನ್ನ ಹುಲ್ಲೊಳಗೆ ಸುತ್ತಿ
ನಮ್ಮ ಸ್ಟೋರ್ ರೂಮಿನೊಳಗಿಟ್ಟ.
ನನ್ನಜ್ಜಿ ಅಲ್ಲೇ ಒಣಗಿ, ಬಿರಿದು,
ಅವಳ ಬೀಜಗಳು ಕಿಟಕಿಯಿಂದಾಚೆ ಹಾರಿ ಹೋದವು. 
ಸೂರ್ಯ ಬಂದ ಆಮೇಲೆ ಮಳೆ 
ಅದರೊಳಗೊಂದು ಬೀಜ ಸಸಿಯಾಗಿ ಬೆಳೆದು
ಅದರ ಬಯಕೆಯ ತಂತು ನನ್ನನ್ನ ಹುಟ್ಟಿಸಿತು.
ಅಂಥಾ ನಾನು
ಚಿನ್ನದ ಹಲ್ಲಿನ ಮಂಗಗಳ ಬಗ್ಗಲ್ಲದೇ
ಇನ್ನಾವುದರ ಬಗ್ಗೆ ಕವಿತೆ ಬರೆಯಲಾದೀತು?!


-ಸಚ್ಚಿದಾನಂದನ್ (ಮೂಲ) 
ಕನ್ನಡಕ್ಕೆ ಪ್ರಜ್ಞಾ ಶಾಸ್ತ್ರಿ 



2 comments:

  1. ಒಳ್ಳೆಯ ಕವನಗಳನ್ನು ಪರಿಚಯಿಸಿದ್ದೀರಿ; ಧನ್ಯವಾದಗಳು. ಕವನಗಳ ಮೂಲಭಾಷೆಯನ್ನು ತಿಳಿಸಿದ್ದರೆ ಚೆನ್ನಾಗಿರುತ್ತಿತ್ತು.

    ReplyDelete
    Replies
    1. ತುಂಬಾ ಧನ್ಯವಾದಗಳು ಸುನಾಥ ಸರ್. ಈ ಕವನಗಳನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಮಾಡಿದ್ದೇನೆ. ಈ ಕವಿತೆಗಳನ್ನು ಸ್ವತಃ ಕವಿ ಸಚ್ಚಿದಾನಂದನ್ ಅವರೇ ಮಲಯಾಳಂ ನಿಂದ ಇಂಗ್ಲೀಷಿಗೆ ತಂದಿದ್ದಾರೆ. ಮುಂದಿನ ಸಲ ಪೋಸ್ಟ್ ಮಾಡುವಾಗ ನಿಮ್ಮ ಸಲಹೆಯನ್ನು ನೆನಪಿಟ್ಟುಕೊಳ್ಳುತ್ತೇನೆ.

      Delete